ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಭಿ

ವಿಕಿಸೋರ್ಸ್ದಿಂದ

ಅಂಭಿ[ಸಂಪಾದಿಸಿ]

ಅಲೆಗ್ಸಾಂಡರ್ ಮಹಾಶಯ ಸಿಂಧೂನದಿಯನ್ನು ದಾಟಿ ಪ್ರ.ಶ.ಪು. 326ರಲ್ಲಿ ಪಂಜಾಬಿಗೆ ಕಾಲಿಟ್ಟಾಗ, ಸಿಂಧೂ ಮತ್ತು ಜೀಲಂ ನದಿಗಳ ಮಧ್ಯೆ ಇದ್ದ ರಾಜ್ಯವನ್ನು ಅಂಭಿ ಎಂಬ ಅರಸನು ಆಳುತ್ತಿದ್ದ. ಇವನಿಗೂ ಜೀಲಂ ಮತ್ತು ಚೀನಾಬ್ ನದಿಗಳ ಮಧ್ಯದ ರಾಜ್ಯಕ್ಕೆ ದೊರೆಯಾಗಿದ್ದ ಪೌರವ ರಾಜನಿಗೂ ಶತ್ರುತ್ವವಿತ್ತು. ಈ ಇಬ್ಬರು ಹಿಂದೂ ರಾಜರು ಪರಸ್ಪರ ವೈರಿಗಳಾಗಿದ್ದರು. ಆದ್ದರಿಂದ ಅಂಭಿ ಅಲೆಗ್ಸಾಂಡರನ ಮೈತ್ರಿಯನ್ನು ಯಾಚಿಸಿ ಅವನಿಗೆ ತನ್ನ ರಾಜಧಾನಿಯಾದ ತಕ್ಷಶಿಲೆಯಲ್ಲಿ ಕೊಂಚಕಾಲ ನಿಂತು ವಿಶ್ರಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ. ಅಲೆಗ್ಸಾಂಡರ್ ತಾನು ಗೆದ್ದ ರಾಜ್ಯಗಳ ವ್ಯವಸ್ಥೆಯನ್ನು ಮಾಡಿದಾಗ ಅಂಭಿ ಗ್ರೀಕ್ ಮಾಂಡಲಿಕನ ಅಧೀನನಾಗುಳಿಯಬೇಕಾಯಿತು.