ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರ್ಚಾವತಾರ

ವಿಕಿಸೋರ್ಸ್ದಿಂದ

ಅರ್ಚಾವತಾರ ಪಾಂಚರಾತ್ರಾಗಮಗಳಂತೆ ಆರಾಧಕನಾದವ ಪೂಜೆ ಮಾಡುವ ವಿಗ್ರಹ. ಅವನ ದೃಷ್ಟಿಯಲ್ಲಿ ಪೂಜೆಗೆ ಅರ್ಹವಾದ ವಿಗ್ರಹವೂ ದೇವರ ಅವತಾರವೇ. ಪಾಂಚರಾತ್ರಾಗಮಗಳಿಗೆ ವಿಶಿಷ್ಟವಾದ ಜ್ಞಾನವನ್ನು ವ್ಯೂಹಸಿದ್ಧಾಂತವೆಂದು ಕರೆದಿದೆ. ಪರಮಾತ್ಮನ ಅತೀಂದ್ರಿಯವೂ ಮಾತು ಮನಸ್ಸುಗಳಿಗೆ ಅಗೋಚರವೂ ಆದ ಪರಸ್ವರೂಪದ ಅತಿ ಸೂಕ್ಷ್ಮವಾದದ್ದು, ಅಚಿಂತ್ಯವೂ ಆದದ್ದು. ಇಂಥ ಪರಮಾತ್ಮ ಭಕ್ತನಿಗೆ ಅತಿ ಸಮೀಪನೂ ಸುಲಭನೂ ಇಂದ್ರಿಯಗೋಚರನೂ ಆಗಬೇಕಾದರೆ ಅರ್ಚಾವತಾರದಿಂದ ಮಾತ್ರ ಸಾಧ್ಯವೆಂದು ಆಗಮಗಳು ಹೇಳುತ್ತವೆ. ವಿಗ್ರಹ (ಅರ್ಚೆ) ಮರ, ಲೋಹ ಅಥವಾ ಶಿಲೆಯವಾಗಿರಬಹುದು. ಅದು ಪೂಜೆಗೆ ಅರ್ಹವಾಗಬೇಕಾದರೆ ಮಂತ್ರಪೂತವಾದುದಾಗಿರಬೇಕು. ಶಿಷ್ಟಪರಿಗ್ರಹ ಶಕ್ತಿಯನ್ನು ಹೊಂದಿರಬೇಕು. ಅರ್ಚೆಗೆ ಜೀವಕೊಡತಕ್ಕದ್ದು ಪ್ರಾಣಪ್ರತಿಷ್ಠೆ ಎಂಬ ಮಂತ್ರವತ್ತಾದ ಶಾಸ್ತ್ರವಿಧಿ. ಇದು ಎಲ್ಲ ದೇವಸ್ಥಾನಗಳಲ್ಲಿ ವಿಗ್ರಹ ಪ್ರತಿಷ್ಠಾಪನಾ ಸಮಯದಲ್ಲಿ ನಡೆಯುವ ವಿಧಿಯಾಗಿದೆ. (ಎಂ.ವೈ.)