ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆದವಾನಿ

ವಿಕಿಸೋರ್ಸ್ದಿಂದ

ಆದವಾನಿ ಬಳ್ಳಾರಿಯ ಈಶಾನ್ಯಕ್ಕೆ 64 ಕಿ.ಮೀ. ದೂರದಲ್ಲೂ, ಹೈದರಾಬಾದಿನ ಆಗ್ನೇಯಕ್ಕೆ ಸುಮಾರು 228 ಕಿ.ಮೀ. ದೂರದಲ್ಲೂ ಇದೆ. (150-38 ಉತ್ತರ ಮತ್ತು 770-17 ಪೂರ್ವರೇಖಾಂಶ). ಮೊದಲಿಗೆ ಇದು ಬಳ್ಳಾರಿ ಜಿಲ್ಲೆಗೆ ಸೇರಿದ್ದ ತಾಲ್ಲೂಕು ಕೇಂದ್ರವಾಗಿತ್ತು. ಕನ್ನಡ ಪ್ರದೇಶ. ರಾಜ್ಯ ಪುನರ್‍ವಿಂಗಡಣಾ ಸಮಯದಲ್ಲಿ (1956) ಆಂಧ್ರಪ್ರದೇಶಕ್ಕೆ ಸೇರಿತು. ಜನಸಂಖ್ಯೆ ಸುಮಾರು 80,000ಕ್ಕೂ ಹೆಚ್ಚು. ರೈಲುನಿಲ್ದಾಣ ಚೆನ್ನೈ-ಮುಂಬೈ ರೈಲುಮಾರ್ಗದಲ್ಲಿ. ಚೆನ್ನೈನಿಂದ 492 ಕಿ.ಮೀ. ದೂರದಲ್ಲಿದೆ.

ಆದವಾನಿ ವಿಜಯನಗರದರಸರ ಮುಖ್ಯ ಹಾಗೂ ಕೇಂದ್ರಸ್ಥಾನಗಳಲ್ಲಿ ಒಂದಾಗಿತ್ತು. ಅವರ ಕೈತಪ್ಪಿದ ಅನಂತರ 1792ರ ತನಕ ಮುಸಲ್ಮಾನ ಆಳರಸರ ಸ್ವಾಧೀನದಲ್ಲಿತ್ತು. ಟಿಪ್ಪೂ ಮತ್ತು ಈಸ್ಟ್ ಇಂಡಿಯ ಕಂಪೆನಿಗಳಿಗೆ ನಡೆದ ಮೊದಲ ಮೈಸೂರು ಯುದ್ಧದ ತರುವಾಯ ಇದನ್ನು ಹೈದರಾಬಾದ್ ನಿಜಾಮರ ವಶಕ್ಕೆ ಕೊಡಲಾಯಿತು. ಮತ್ತೆ ನಿಜಾಮ 1800ರಲ್ಲಿ ಬ್ರಿಟಿಷರಿಂದ ಮಿಲಿಟರಿ ಸಹಾಯ ಪಡೆಯಲೋಸುಗ ಇದನ್ನು ಅವರಿಗೆ ಒಪ್ಪಿಸಿದ.

ಆದವಾನಿ ಪ್ರಾಚೀನ ವಾಸ್ತುಶಿಲ್ಪ, ಪುರಾತನ ಕೋಟೆಯ ಅವಶೇಷಗಳು, ಸಿದಿ ಮಸೂದ್‍ಖಾನ್ ಕಟ್ಟಿಸಿದ (1680) ಸುಂದರ ಜುಮ್ಮ ಮಸೀದಿ - ಇವುಗಳಿಗೆ ಹೆಸರಾದುದು.

ಈಗ ಇದು ಮುಖ್ಯವಾಗಿ ಹತ್ತಿ ವ್ಯಾಪಾರಕೇಂದ್ರ, ಇಲ್ಲಿ ಹತ್ತಿ, ರೇಷ್ಮೆಗಿರಣಿಗಳು ಹಾಗೂ ಪ್ರಯೋಗಾಲಯಗಳಿವೆ. ಇಲ್ಲಿಯ ಜಮಖಾನಗಳು ಹೆಸರುವಾಸಿಯಾದವು. 1867ರಲ್ಲಿ ಪೌರಸಭೆ ಸ್ಥಾಪಿತವಾಯಿತು. ಬೆಟ್ಟದ ಬುಡದಲ್ಲಿರುವ ರಾಮಾಂಜಲ ಚಿಲುಮೆ ವರ್ಷದಲ್ಲಿ ಕೆಲಕಾಲ ಊರಿಗೆ ನೀರನ್ನೊದಗಿಸುತ್ತದೆ. (ಕೆ.ಆರ್.)