ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉದ್ಭಟ

ವಿಕಿಸೋರ್ಸ್ದಿಂದ

ಉದ್ಭಟ: ಅಲಂಕಾರ ಶಾಸ್ತ್ರದಲ್ಲಿ ಗಣ್ಯನಾದ ಈತ ಕಾಶ್ಮೀರ ದೇಶದವ. 779ರಿಂದ 813ರವರೆಗೆ ಅಲ್ಲಿ ಆಳಿದ ಜಯಾಪೀಡನೆಂಬ ರಾಜನ ಆಸ್ಥಾನದಲ್ಲಿ ಸಭಾಪತಿಯಾಗಿದ್ದ ಉದ್ಭಟನೆಂಬುವನು ಇವನೇ ಎಂದು ಕಾಶ್ಮೀರದಲ್ಲಿ ಪ್ರತೀತಿ ಇದೆ.

ಉದ್ಭಟನಿಂದ ರಚಿತವಾದ ಉಪಲಬ್ಧ ಗ್ರಂಥ ಅಲಂಕಾರ ಸಾರಸಂಗ್ರಹ ಎಂಬುದು ಪ್ರಕಟವಾಗಿದೆ. ಇದಕ್ಕೆ ಪ್ರತೀಹಾರೇಂದು ರಾಜನ (10ನೆಯ ಶತಮಾನ) ಲಘುವೃತ್ತಿ ಎಂಬ ವ್ಯಾಖ್ಯಾನವಿದೆ; ರಾಜಾನಕತಿಲಕನ ಉದ್ಭಟ ವಿವೇಕ (ಅಥವಾ ಉದ್ಭಟ ವಿಚಾರ) ಅದರ ಮೇಲಣ ಮತ್ತೊಂದು ವ್ಯಾಖ್ಯಾನ.

ಭರತನ ನಾಟ್ಯಶಾಸ್ತ್ರಕ್ಕೆ ಟೀಕೆಯನ್ನು ಬರೆದಿರುವ ಹಲವಾರು ಆಲಂಕಾರಿಕರಲ್ಲಿ ಉದ್ಭಟನೂ ಒಬ್ಬನೆಂದು ಕೆಲವು ಆಧಾರಗಳಿಂದ ತಿಳಿದು ಬಂದಿದೆ. ಅಲ್ಲದೆ, ಈತ ಭಾಮಹನ ಕಾವ್ಯಾಲಂಕಾರದ ಮೇಲೆ ಭಾಮಹವಿವರಣ (ಅಥವಾ ಭಾಮಹವೃತ್ತಿ) ಎಂಬ ವ್ಯಾಖ್ಯಾನವನ್ನು ಬರೆದನೆಂದು ಹೇಳಲು ಆಧಾರಗಳಿವೆ. ಅಲಂಕಾರಸಾರ ಸಂಗ್ರಹದ ಉದಾಹರಣ ಶ್ಲೋಕಗಳು ಉದ್ಭಟನಿಂದಲೇ ರಚಿತವಾದ ಕುಮಾರಸಂಭವ ಎಂಬ ಕಾವ್ಯದಿಂದ ಆರಿಸಿಕೊಂಡು ಪ್ರತೀಹಾರೇಂದು ರಾಜ ಹೇಳಿದ್ದಾನೆ. ಆದರೆ ಈ ಕಾವ್ಯವಾಗಲಿ ಮೇಲ್ಕಂಡ ಟೀಕೆಯಾಗಲಿ, ಭಾಮಹವಿವರಣವಾಗಲಿ ದೊರೆತಿಲ್ಲ.

ಉದ್ಭಟನ ಪ್ರಸಿದ್ಧ ಗ್ರಂಥವೆಂದರೆ ಅವನ ಅಲಂಕಾರ ಸಾರಸಂಗ್ರಹ ಅಥವಾ ಕಾವ್ಯಾಲಂಕಾ ರಸಾರ ಸಂಗ್ರಹ. ಇದರಲ್ಲಿ ತೊಂಬತ್ತು ಉದಾಹರಣೆಗಳಿಂದ ಕೂಡಿದ ನಲವತ್ತೊಂದು ಅಲಂಕಾರಗಳ ವಿಮರ್ಶೆಯನ್ನೊಳಗೊಂಡ ಆರು ವರ್ಗಗಳಿವೆ. ಉದ್ಭಟ ಇದರಲ್ಲಿ ಭಾಮಹನನ್ನೇ ಅನುಸರಿಸಿದ್ದರೂ ತನ್ನ ವೈಶಿಷ್ಟ್ಯವನ್ನೂ ವ್ಯಕ್ತಪಡಿಸಿದ್ದಾನೆ. ಗ್ರಾಮ್ಯ ಉಪನಾಗರಿಕಾ ಎಂಬ ವೃತ್ತಿಗಳ ಆಧಾರದ ಮೇಲೆ ಭಾಮಹ ಗ್ರಾಮ್ಯಾನುಪ್ರಾಸ, ಲಾಟಾನುಪ್ರಾಸ, ವೃತ್ತ್ಯನುಪ್ರಾಸ ಎಂಬುದಾಗಿ ವಿಂಗಡಿಸಿ, ಕಡೆಯದನ್ನು ಗ್ರಾಮ್ಯಾ (ಕೋಮಲಾ), ಪರುಷಾ, ಉಪನಾಗರಿಕಾ ಎಂಬ ವೃತ್ತಿಗಳ ದೃಷ್ಟಿಯಲ್ಲಿ ಪುನರ್ವಿಭಜನೆ ಮಾಡಿರುವಂತೆ ತೋರುತ್ತದೆ. ಹೀಗೆ, ಅನುಪ್ರಾಸಕ್ಕೆ ಆವಶ್ಯಕವಾದ ಸ್ವನ ಸಮಾಯೋಗಕ್ಕೆ ಸಾಮಾನ್ಯವಾಗಿ ಅನ್ವಯಿಸುವ ಈ ಮೂರು ವೃತ್ತಿಗಳನ್ನು ಮೊದಲು ಗುರುತಿಸಿದವ ಉದ್ಭಟನೆಂಬುದು ಪ್ರತೀಹಾರೇಂದು ರಾಜನ ಮತ. ಇಷ್ಟೇ ಅಲ್ಲದೆ, ಉಪಮೆಯ ವಿಧಗಳಿಗೆ ವ್ಯಾಕರಣದ ಆಧಾರ ನಿರೂಪಣೆಯನ್ನು ಪರಿಣಾಮಕಾರಿಯಾದ ಕ್ರಮದಲ್ಲಿ ಮೊದಲು ಮಾಡಿದವ ಉದ್ಭಟ. ಈ ಆಧಾರದ ವಿಚಾರವನ್ನು ಕುರಿತು ಒಂದು ಸೂಚನೆ ಮಾತ್ರ ಭಾಮಹನಲ್ಲಿ ಕಂಡುಬರುತ್ತದೆ. ದಂಡಿ ಭಾಮಹರ ತರುವಾಯದಲ್ಲೇ ಬಂದ ಅಲಂಕಾರ ಪಂಥಕ್ಕೆ ಸೇರಿದ ಉದ್ಭಟನಿಗೆ ವಿಮರ್ಶೆಯ ಪರಿಚಯವಿದ್ದಿತೆಂದು ಧಾರಾಳವಾಗಿ ಹೇಳಬಹುದು; ಏಕೆಂದರೆ ಆತ ವಿಭಾವ, ಸ್ಥಾಯೀ, ಸಂಚಾರೀ, ಅನುಭಾವ-ಎಂಬ ಪಾರಿಭಾಷಿಕ ಪದಗಳನ್ನು ಪ್ರಯೋಗಿಸು ವುದಲ್ಲದೆ ಭರತನ ಎಂಟು ರಸಗಳ ಜೊತೆಗೆ ಶಾಂತವನ್ನೂ ಸೇರಿಸಿ ಹೇಳಿದ್ದಾನೆ. ಆದರೆ ಇವೆಲ್ಲವೂ ರಸವತ್ ಎಂಬ ಅಲಂಕಾರದಲ್ಲೇ ಅಡಕವಾಗಿವೆಯೆಂದು ಅವನ ಮತ. ಒಟ್ಟಿನಲ್ಲಿ ಭರತನ ನಾಟ್ಯಶಾಸ್ತ್ರಕ್ಕೆ ಸಂಬಂಧಪಟ್ಟ ರಸ ವಿಮರ್ಶೆಯನ್ನು ಬಲ್ಲವನಾಗಿದ್ದರೂ ಉದ್ಭಟ ಕೇವಲ ಭಾಮಹಮತಾನುಯಾಯಿ.

ಅಲಂಕಾರಶಾಸ್ತ್ರದಲ್ಲಿ ಉದ್ಭಟನ ಪ್ರಭಾವ ವಿಶೇಷವಾಗಿದೆ. ಅವನ ಪ್ರಸಿದ್ಧಿ ಭಾಮಹನನ್ನೂ ಹಿಂದೆ ಬೀಳುವಂತೆ ಮಾಡುವಷ್ಟು ಹಿರಿದಾಗಿತ್ತು. ಅನಂತರ ಬಂದ ಅನೇಕ ಆಲಂಕಾರಿಕರು-ಅವನೊಡನೆ ಭಿನ್ನಾಭಿಪ್ರಾಯವುಳ್ಳವರೂ-ಅವನನ್ನು ಅತ್ಯಂತ ಗೌರವದಿಂದ ಕಂಡಿದ್ದಾರೆ. ಇದಕ್ಕೆ ಅವರ ತತ್ತಭವದ್ಭಿರುದ್ಭಟಾದಿಭಿಃ (ಧ್ವನ್ಯಾಲೋಕ), ತಾವದ್ಭಾಮಹೋದ್ಭಟ ಪ್ರಭೃತಯಃ (ಅಲಂಕಾರಸರ್ವಸ್ವ) ಮುಂತಾದ ಮಾತುಗಳು ಸೂಕ್ತ ನಿದರ್ಶನಗಳಾಗಿವೆ.(ಬಿ.ಕೆ.ಎಸ್.)