ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಚ

ವಿಕಿಸೋರ್ಸ್ದಿಂದ

ಕಚ : ದೇವಗುರುವಾದ ಬೃಹಸ್ಪತ್ಯಾಚಾರ್ಯನ ಮಗ. ದೇವತೆಗಳ ಪ್ರಾರ್ಥನೆಯಂತೆ ಅಸುರಗುರುವಾದ ಶುಕ್ರಾಚಾರ್ಯನ ಶಿಷ್ಯನಾಗಿ ಮೃತಸಂಜೀವಿನೀ ವಿದ್ಯೆಯನ್ನು ಪಡೆಯುವ ಪ್ರಯತ್ನ ಮಾಡಿದ. ಅಲ್ಲಿ ಗುರುಪುತ್ರಿ ದೇವಯಾನಿ ಕಚನನ್ನು ಕಂಡು ಮೋಹಿತಳಾದಳು. ಇದನ್ನರಿತ ದಾನವರು ಎರಡು ಬಾರಿ ಕಚನನ್ನು ಕೊಲೆಮಾಡಿದರು. ಆದರೆ ಮಗಳಾದ ದೇವಯಾನಿಯ ಅಪೇಕ್ಷೆಯಂತೆ ಸಂಜೀವಿನೀ ಮಂತ್ರಬಲದಿಂದ ಶುಕ್ರಾಚಾರ್ಯ ಎರಡು ಬಾರಿಯೂ ಕಚನನ್ನು ಬದುಕಿಸಿದ. ಮತ್ತೆ ಮತ್ತೆ ಬದುಕಿಬಂದ ಕಚನನ್ನು ಮೂರನೆಯ ಬಾರಿ ಕೊಂದು ಅವನ ಮಾಂಸವನ್ನು ಮದ್ಯದೊಡನೆ ಕಲಸಿ ತಮ್ಮ ಗುರುವಾದ ಶುಕ್ರಾಚಾರ್ಯನಿಗೆ ಅವರು ಉಣಬಡಿಸಿದರು. ಶುಕ್ರನಾದರೋ ತನ್ನ ಮಗಳಾದ ದೇವಯಾನಿಯ ಬೇಡಿಕೆಯಂತೆ ತನ್ನ ಉದರದಲ್ಲಿ ಪ್ರವೇಶಿಸಿದ್ದ ಕಚನಿಗೆ ಸಂಜೀವಿನಿ ವಿದ್ಯೆಯನ್ನು ಪುರ್ಣವಾಗಿ ಉಪದೇಶಿಸಿ ಅವನನ್ನು ಬದುಕಿಸಿದ. ಬದುಕಿಬಂದ ಕಚ ಗುರುಪುತ್ರಿಯೆಂಬ ಕಾರಣದಿಂದ ದೇವಯಾನಿಯನ್ನು ಮದುವೆಯಾಗಲು ಒಪ್ಪಲಿಲ್ಲ. ಕುಪಿತಳಾದ ದೇವಯಾನಿ ಕಚ ಕಲಿತ ದಿವ್ಯಮಂತ್ರ ಫಲಿಸದಿರಲೆಂದು ಶಪಿಸಿದಳು. ಈ ವಿಚಾರ ಮಹಾಭಾರತದ ತೋಯಸಂಭವ ಪರ್ವದಲ್ಲಿದೆ. (ಎನ್.ಎಸ್.ಆರ್.ಬಿ.)