ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಚಾರಿ

ವಿಕಿಸೋರ್ಸ್ದಿಂದ

ಕಚಾರಿ : ಅಸ್ಸಾಂ ರಾಜ್ಯದ ಕಾಮರೂಪ ಮತ್ತು ದರಂಗ ಜಿಲ್ಲೆಯಲ್ಲಿ ಬ್ರಹ್ಮಪುತ್ರಾನದಿಗೂ ಭೂತಾನಿಗೂ ನಡುವಣ ಪ್ರದೇಶದಲ್ಲಿ ಇರುವ, ಬೋಡೋ ಗುಂಪಿಗೆ ಸೇರಿದ ಜನ; ಮಂಗೋಲ್ ಬುಡಕಟ್ಟಿನವರು. 13ನೆಯ ಶತಮಾನದವರೆಗೆ ಇವರ ದೊರೆಗಳು ಉತ್ತರ ಅಸ್ಸಾಮಿನಲ್ಲಿ ಆಡಳಿತ ನಡೆಸುತ್ತಿದ್ದರು. ಆಗ ಅಲ್ಲಿಗೆ ಬಂದ ಅಹೋಮ್ ಜನರ ಆಕ್ರಮಣದಿಂದಾಗಿ ಇವರು ನಾಗ ಬೆಟ್ಟಗಳ ಬುಡದ ಮತ್ತು ಕಚಾರ್ ಜಿಲ್ಲೆಯ ಕೆಲವು ಪ್ರದೇಶಗಳಿಗೆ ಇವರು ಸರಿದರು. ಧನಸಿರಿ ನದಿ ದಂಡೆಯ ಮೇಲಿರುವ ದೀಮಾಪುರ ಇವರ ರಾಜಧಾನಿಯಾಗಿತ್ತು. 1536ರ ವೇಳೆಗೆ ಅಹೋಮರಿಂದ ಇವರು ಸಂಪುರ್ಣವಾಗಿ ಸೋತು ಹಿಂದಕ್ಕೆ ಸರಿದರು. ಆದರೂ ಅಹೋಮರ ಜೊತೆಗೆ ಅವಿರತ ಕದನ ನಡೆದೇ ಇತ್ತು. ಇವರ ಕೊನೆಯ ದೊರೆ ಗೋವಿಂದಚಂದ್ರನನ್ನು ಮಣಿಪುರದ ಸೇನಾನಿ ಪರಾಭವಗೊಳಿಸಿದ (1818). ಅನಂತರ ಬರ್ಮೀಯರು ಈ ರಾಜ್ಯವನ್ನು ಆಕ್ರಮಿಸಿದರು (1821). ಆ ಸಮಯದಲ್ಲಿ ಭಾರತದಲ್ಲಿ ಪ್ರಭಾವ ಗಳಿಸುತ್ತಿದ್ದ ಬ್ರಿಟಿಷರು ಬರ್ಮೀಯರನ್ನು ಓಡಿಸಿ (1826) ಗೋವಿಂದ ಚಂದ್ರನಿಗೆ ಪುನಃ ಸಿಂಹಾಸನ ದೊರಕಿಸಿಕೊಟ್ಟರು. 1830ರಲ್ಲಿ ಈತ ಕೊಲೆಗೆ ಈಡಾದ. ಈತನಿಗೆ ಸಂತಾನವಿಲ್ಲದ್ದರಿಂದ ಬ್ರಿಟಿಷರೇ ಈ ರಾಜ್ಯವನ್ನು ವಹಿಸಿಕೊಂಡರು (1832).

ಕಚಾರಿ ಜನರು ಮುಖ್ಯವಾಗಿ ಬೇಸಾಯಗಾರರು. ರೇಷ್ಮೆಹುಳುವನ್ನು ಸಾಕಿ ದಾರ ತೆಗೆಯುವುದು ಸ್ತ್ರೀಯರ ಕೆಲಸ. ಇವರ ಸಮಾಜದಲ್ಲಿ ಸ್ತ್ರೀಯರದು ಉನ್ನತ ಸ್ಥಾನ. ಸಾಮಾನ್ಯವಾಗಿ ಈ ಜನಾಂಗದಲ್ಲಿ ಏಕಪತ್ನೀತ್ವವಿದೆ. ವಿವಾಹವಾಗುವ ಮುನ್ನ ಹುಡುಗ ಹುಡುಗಿಯರು ಪರಸ್ಪರ ಒಪ್ಪಬೇಕಾಗುತ್ತದೆ. ಕನ್ಯಾಶುಲ್ಕ ಪದ್ಧತಿಯುಂಟು. ಅವಿವಾಹಿತರಿಗೆ ಪ್ರತ್ಯೇಕ ಶಿಬಿರ ಹೊಂದಿರುವ ಈ ಜನ ಅನೇಕ ಅಂಶಗಳಲ್ಲಿ ನಾಗಾ ಜನರನ್ನು ಹೋಲುತ್ತಾರೆ. ವಿವಾಹ, ಆಸ್ತಿ ಮುಂತಾದವಕ್ಕೆ ಸಂಬಂಧಿಸಿದ ಜಗಳಗಳನ್ನು ಗ್ರಾಮದ ಗಣ್ಯವ್ಯಕ್ತಿ ಪರಿಹರಿಸುತ್ತಾನೆ. ಆತ್ಮದಲ್ಲಿ ಇವರಿಗೆ ನಂಬಿಕೆಯುಂಟು. ಆದ್ದರಿಂದಲೇ ಇವರು ಭೂತಪ್ರೇತಗಳನ್ನು ಆರಾಧಿಸುವರು. ಪೃಥ್ವೀ, ಆಕಾಶ ಮತ್ತು ವಾಯುಗಳಲ್ಲಿ ದೈವೀಶಕ್ತಿಯಿದೆ ಎಂದು ಇವರ ನಂಬುಗೆ, ಪುರ್ವಜರ ಮತ್ತು ಪ್ರಕೃತಿಯ ಪುಜೆ ಮಾಡುತ್ತಾರಾದರೂ ಅದಕ್ಕೆ ವಿಶೇಷ ಮಹತ್ತ್ವವಿಲ್ಲ. ಮೃತನ ಆತ್ಮ ನಶಿಸದೆ ಬದಲಾದ ರೂಪದಲ್ಲಿರುವುದೆಂದು ಇವರ ನಂಬಿಕೆ. ಹಿಂದೂ ಮತಪದ್ಧತಿಗಳನ್ನು ಇವರು ಈಚೆಗೆ ಹೆಚ್ಚಾಗಿ ಅನುಸರಿಸುತ್ತಿದ್ದಾರೆ. (ನೋಡಿ- ಅಹೋಮ್)