ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ಣ (ಕಳಚುರಿ)

ವಿಕಿಸೋರ್ಸ್ದಿಂದ

ಕರ್ಣ (ಕಳಚುರಿ): ಕರ್ನಾಟಕದಲ್ಲಿ ಚಾಳುಕ್ಯರ ಆಶ್ರಯದಲ್ಲಿ ಆಳುತ್ತಿದ್ದ ಕಳಚುರಿ ದೊರೆಗಳಲ್ಲೊಬ್ಬ. ಒಂದನೆಯ ಬಿಜ್ಜಳನ (ಬಿಜ್ಜ) ಮಗ. ಕನ್ನಮ, ಕೃಷ್ಣರಾಜ ಎಂದೂ ಈತನನ್ನು ಸಂಬೋಧಿಸಲಾಗಿದೆ. 1067ರಲ್ಲಿ ಈತನ ಆಳ್ವಿಕೆ ಪ್ರಾರಂಭವಾಯಿತೆಂದು ತಿಳಿದುಬರುತ್ತದೆ. ಮಂಗಳಿವೇಡದಿಂದ (ಈಗಿನ ಮಂಗಳವೇಢೆ; ಷೋಲಾರಪುರ ಜಿಲ್ಲೆ) ಅದರ ಸುತ್ತಮುತ್ತಣ ಪ್ರದೇಶಗಳನ್ನು ಈತ ಆಳುತ್ತಿದ್ದ. ಐವತ್ತು ಕದನಗಳಲ್ಲಿ ಕಾದಾಡಿ ಗೆದ್ದನೆಂದೂ ಹನ್ನೆರಡು ಮಂದಿ ದೊರೆಗಳನ್ನು ಕೊಂದು ತನ್ನ ರಾಜಧಾನಿಯನ್ನು ಶತ್ರುಗಳಿಂದ ರಕ್ಷಿಸಿದನೆಂದೂ ಇವನನ್ನು ಹೊಗಳಲಾಗಿದೆ. ಪರಮಾರರು, ಪೂರ್ವ ಚಾಳುಕ್ಯರು, ಚೋಳರು ಮುಂತಾದವರೊಂದಿಗೆ ಈತನ ಪ್ರಭುವಾದ ಒಂದನೆಯ ಸೋಮೇಶ್ವರ ಮಾಡಿದ ಕದನಗಳಲ್ಲಿ ಇವನೂ ಭಾಗವಹಿಸಿರಬೇಕೆಂದು ತೋರುತ್ತದೆ. ಈತ 1080ರ ವರೆಗೂ ರಾಜ್ಯವಾಳಿದ (ನೋಡಿ- ಕಳಚುರಿಗಳು).