ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ

ವಿಕಿಸೋರ್ಸ್ದಿಂದ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ[ಸಂಪಾದಿಸಿ]

ಮೈಸೂರು ನಗರದ ಮಾನಸಗಂಗೋತ್ರಿ ಆವರಣದಲ್ಲಿರುವ ಒಂದು ದೂರಶಿಕ್ಷಣ ವಿಶ್ವವಿದ್ಯಾಲಯ. ಮೈಸೂರು ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾಗಿದ್ದ ಹಿಂದಿನ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯನ್ನು (೧೯೬೯-೯೬) ಉನ್ನತೀಕರಿಸಿ ಸ್ಥಾಪಿಸಲಾಗಿದೆ. ಆರಂಭದಲ್ಲಿ ಅಂಚೆ ಬೋಧನೆ ಮೂಲಕ ಬಿ.ಎ., ಬಿ.ಕಾಂ., ಎಂ.ಎ., ಎಂ.ಕಾಂ., ಮತ್ತು ಇತರ ಶಿಕ್ಷಣಗಳನ್ನು ನೀಡುತ್ತಿತ್ತು. ನವದೆಹಲಿಯಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಸ್ಥಾಪಿತವಾದ (೧೯೮೫) ಮೇಲೆ ದೂರಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಾದುವು. ಇದರ ಫಲವಾಗಿ ಅಂಚೆ ಬೋಧನೆ ವಿಧಾನದಿಂದ ದೂರ ಶಿಕ್ಷಣ ವಿಧಾನಕ್ಕೆ ಬೋಧನೆಯನ್ನು ಬದಲಾಯಿಸಿಕೊಳ್ಳಲಾಯಿತು. ಕರ್ನಾಟಕದ ಶೈಕ್ಷಣಿಕ ಅಗತ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ೧೯೯೬ ಜೂನ್ ೨೬ರಂದು ಈ ವಿಶ್ವವಿದ್ಯಾನಿಲಯ ಸ್ಥಾಪಿತವಾಯಿತು. ಮುಕ್ತ ವಿಶ್ವವಿದ್ಯಾನಿಲಯದ ಪ್ರಮುಖ ಧ್ಯೇಯಗಳಿವು: ವಿದ್ಯಾರ್ಥಿಗಳಿಗೆ ಅವರ ಕಲಿಕಾ ವೇಗಕ್ಕೆ ಅನುಗುಣವಾಗಿ ಮನೆ ಬಾಗಿಲಿಗೆ ಉನ್ನತ ಶಿಕ್ಷಣವನ್ನು ನೀಡುವುದು, ವಯೋಮಾನದ ಆಧಾರದ ಮೇಲೆ ಪ್ರತಿಯೊಬ್ಬರಿಗೂ ಶಿಕ್ಷಣವನ್ನು ನೀಡುವುದು, ವೃತ್ತಿಪರತೆ ಮತ್ತು ವೃತ್ತಿ ನೈಪುಣ್ಯ ತಂದುಕೊಡುವ ರೀತಿಯಲ್ಲಿ ಅಗತ್ಯವಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವುದು, ಸರಳ ಪ್ರವೇಶ ನಿಬಂಧನೆಗಳು, ವಿದ್ಯಾರ್ಥಿ ಆಸಕ್ತಿ ಹಾಗೂ ಅನುಕೂಲಕ್ಕೆ ಅನುಗುಣವಾಗಿ ಅಧ್ಯಯನ ಮಾಡುವ ಅವಕಾಶ ಒದಗಿಸುವುದು, ಪೂರ್ಣಕಾಲಿಕ ವಿದ್ಯಾರ್ಥಿಗಳಂತೆ ಅಧ್ಯಯನ ಮುಂದುವರಿಸಲು ಸಾಧ್ಯವಾಗದ ಉದ್ಯೋಗಸ್ಥರಿಗೆ, ಗ್ರಾಮಾಂತರ ಪ್ರದೇಶದ ಜನರಿಗೆ ಶಿಕ್ಷಣನೀಡುವುದು, ಪುರುಷರಿಗೆ ಹಾಗೂ ಮಹಿಳೆಯರಿಗೆ ಶಿಕ್ಷಣ ನೀಡುವುದು, ಆಧುನಿಕ ಮಾಹಿತಿ ತಂತ್ರಜ್ಞಾನದ ಬೆಳೆವಣಿಗೆಗಳನ್ನು ಅನುಸರಿಸಿ ಹೊಸ ಶಿಕ್ಷಣಗಳನ್ನು ತೆರೆಯುವುದು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನೀಡುವ ವಿವಿಧ ಶಿಕ್ಷಣ ಕ್ರಮಗಳು ಹೀಗಿವೆ: ಪದವಿ ಶಿಕ್ಷಣಗಳು: ಬಿ.ಎ., ಬಿ.ಕಾಂ., ಬಿ.ಎಡ್., ಬಿ.ಎಲ್.ಐ.ಎಸ್.ಸಿ., ಬಿ.ಎಸ್ಸಿ. (ಐ.ಟಿ.). ಸ್ನಾತಕೋತರ ಶಿಕ್ಷಣ ಕ್ರಮಗಳು: ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಸಂಸ್ಕೃತ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಜೊತೆಗೆ ಎಂ.ಕಾಂ., ಎ.ಎಡ್., ಎಂ.ಎಸ್ಸಿ. (ಐ.ಟಿ). ಡಿಪ್ಲೊಮ ಶಿಕ್ಷಣ ಕ್ರಮಗಳು: ಪ್ರಿ-ಯೂನಿವರ್ಸಿಟಿ ಅನಂತರದ ಕನ್ನಡ ಡಿಪ್ಲೊಮ, ಪತ್ರಿಕೋದ್ಯಮ ಡಿಪ್ಲೊಮ, ನಿರ್ವಹಣಾಶಾಸ್ತ್ರ ಡಿಪ್ಲೊಮ, ಆಹಾರ ಪೋಷಣೆ ಮತ್ತು ಆರೋಗ್ಯ ಶಿಕ್ಷಣ ಡಿಪ್ಲೊಮ ಗ್ರಾಮೀಣ ಅಭಿವೃದ್ಧಿ ಡಿಪ್ಲೊಮ, ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಡಿಪ್ಲೊಮ, ಮಾನವ ಸಂಪನ್ಮೂಲ ನಿರ್ವಹಣೆ, ಸ್ನಾತಕೋತ್ತರ ಡಿಪ್ಲೊಮ, ಉನ್ನತ ಶಿಕ್ಷಣ ಸ್ನಾತಕೋತ್ತರ ಡಿಪ್ಲೊಮ, ಕ್ರಿಯಾತ್ಮಕ ಇಂಗ್ಲಿಷ್ ಡಿಪ್ಲೊಮ. ಸರ್ಟಿಪಿsಕೇಟ್ ಶಿಕ್ಷಣಗಳು: ಕನ್ನಡ ಸರ್ಟಿಪಿsಕೇಟ್ ಶಿಕ್ಷಣಕ್ರಮ, ಇಂಗ್ಲಿಷ್ ಬೋಧನೆ ಸರ್ಟಿಪಿsಕೇಟ್ ಶಿಕ್ಷಣಕ್ರಮ, ಆಹಾರ ಮತ್ತು ಪೋಷಣೆ ಸರ್ಟಿಪಿsಕೇಟ್ ಶಿಕ್ಷಣಕ್ರಮ (ಸಿ.ಎಫ್.ಎನ್.), ಗಣಕೀಕರಣ ಸರ್ಟಿಪಿsಕೇಟ್ ಶಿಕ್ಷಣ ಕ್ರಮ (ಸಿ.ಐ.ಸಿ). ಇವುಗಳ ಜೊತೆಗೆ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಪಿsಲ್. ಪದವಿ ಶಿಕ್ಷಣಕ್ರಮವಿದೆ.

ಈಗಾಗಲೇ ಕರ್ನಾಟಕದ ಹಲವು ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ೫೭ ಅಧ್ಯಯನ ಕೇಂದ್ರಗಳು ಸ್ಥಾಪಿತವಾಗಿದ್ದು ಕಾರ್ಯನಿರತವಾಗಿವೆ. ಹೊರ ರಾಜ್ಯಗಳಲ್ಲಿ ೪ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಶಿಕ್ಷಣ ವಿಭಾಗಕ್ಕೆ ಸಂಬಂಧಿಸಿದಂತೆ ಬಿ.ಎಡ್.ಶಿಕ್ಷಣಕ್ರಮಕ್ಕೆ ೫ ಅಧ್ಯಯನ ಕೇಂದ್ರಗಳನ್ನೂ ಎಂ.ಎಡ್.ಶಿಕ್ಷಣ ಕ್ರಮಕ್ಕೆ ೮ ಅಧ್ಯಯನ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ. ವಿವಿಧ ಶಿಕ್ಷಣಗಳಿಗೆ ಅಧ್ಯಾಪಕ ವಿದ್ಯಾರ್ಥಿ ಸಂಪರ್ಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಪ್ರಸ್ತುತ ಇರುವ ವಿದ್ಯಾರ್ಥಿಗಳ ಸಂಖ್ಯೆ ೩೬,೦೦೦ (೨೦೦೩).

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ೫೦ ಮಂದಿ ಪೂರ್ಣಾವಧಿ ಅಧ್ಯಾಪಕರೂ ೨೨ ಮಂದಿ ಅತಿಥಿ ಅಧ್ಯಾಪಕರೂ ಇದ್ದಾರೆ. ಕೇಂದ್ರ ಕಾರ್ಯಾಲಯದಲ್ಲಿನ ಈ ಅಧ್ಯಾಪಕ ವೃಂದದ ಜೊತೆಗೆ ವಿವಿಧ ಅಧ್ಯಯನ ಕೇಂದ್ರಗಳಲ್ಲಿ ೭೦೦ ಮಂದಿ ಶೈಕ್ಷಣಿಕ ಸಮಾಲೋಚಕರಿದ್ದಾರೆ. ಬೋಧಕೇತರ ಸಿಬ್ಬಂದಿ ಸಂಖ್ಯೆ ೧೦೯. ವಿದ್ಯಾರ್ಥಿಗಳಿಗೆ ಮಾಧ್ಯಮಗಳ ಬಳಕೆ-ರೇಡಿಯೋ ಸಮಾಲೋಚನೆ (ಆಕಾಶವಾಣಿ ಹಾಗೂ ಎಫ್.ಎಂ.) ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ವಿಶ್ವವಿದ್ಯಾನಿಲಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಮನ್ವೆಲ್ತ್‌ ಆಫ್ ಲರ್ನಿಂಗ್ (ಸಿ.ಒ.ಎಲ್.), ಕೆನಡ ಸಂಸ್ಥೆಯೊಡನೆ ಸಹಯೋಗವನ್ನು ಪಡೆದುಕೊಂಡಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಥಮ ಕುಲಪತಿ ಸಿ.ಅಂಜನಾಮೂರ್ತಿ (೧೯೯೬-೯೯). ಎನ್.ಎಸ್.ರಾಮೇಗೌಡ (೧೯೯೯-೨೦೦೩) ದ್ವಿತೀಯ ಕುಲಪತಿ. ಕೆ.ಸುಧಾರಾವ್, ಮುಂದೆ ವಿವೇಕ ರೈ ಬಿ.ಎ. ಈಗಿನ ಕುಲಪತಿ ಕೆ.ಎಸ್. ರಂಗಪ್ಪ (ಎನ್.ಎಲ್.)