ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಿಲ್ಬಟ್, ಹಂಫ್ರಿ

ವಿಕಿಸೋರ್ಸ್ದಿಂದ

1539-83. ಬ್ರಿಟಿಷ್ ಸೈನಿಕ. ನಾವಿಕ. 1539ರಲ್ಲಿ ಡಾರ್ಟ್ಮತ್ ಬಳಿಯ ಕಾಂಪ್ಟನಿನಲ್ಲಿ ಜನಿಸಿದ. ತಂದೆ ಆತೋ ಗಿಲ್ಬರ್ಟ್. ಸಾಹಸಿಯಾದ ಗಿಲ್ಬರ್ಟ್ ತನ್ನ ಜೀವಮಾನವನ್ನೆಲ್ಲ ವಸಾಹತು ಸ್ಥಾಪನೆಯ ಯೋಜನೆಗಳನ್ನು ರೂಪಿಸುವುದರಲ್ಲಿ ಮತ್ತು ಅವನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಕಳೆದ. ಈಟನ್ ಮತ್ತು ಆಕ್ಸ್ ಫರ್ಡ್ನಲ್ಲಿ ಯುದ್ಧತಂತ್ರ ಮತ್ತು ನಾವಿಕ ಕಲೆಯನ್ನ ಅಭ್ಯಸಿಸಿ 1544 ಅಥವಾ 1545 ರಲ್ಲಿ ರಾಜಕುಮಾರಿ ಎಲಿಜ಼ಬೆತಳ ಸೇವೆಗೆ ಸೇರಿಕೊಂಡ. 1563ರಲ್ಲಿ ಲಿ ಹಾವ್ರ್ ಮುತ್ತಿಗೆಯಲ್ಲಿ ಭಾಗವಹಿಸಿ ಗಾಯಗೊಂಡ.


ಗಿಲ್ಬರ್ಟನಿಗೆ ವಿಶೇಷ ಆಸಕ್ತಿಯಿದ್ದದ್ದು ಭೌಗೋಳಿಕ ಅನ್ವೇಷಣೆ ಮತ್ತು ಇಂಗ್ಲೆಂಡಿನ ಸಾಮ್ರಾಜ್ಯ ವಿಸ್ತರಣೆಯ ಯೋಜನೆಗಳಲ್ಲಿ. 1565-66ರಲ್ಲಿ ಆಂಟೋನಿ ಜೆಂಕ್ಸಿನನನೊಡ ಗೂಡಿ ಚೀನಕ್ಕೆ ಉತ್ತಾರಾಭಿಮುಖವಾದ ಮಾರ್ಗವೊಂದನ್ನು ಕಂಡು ಹಿಡಿಯುವ ಯೋಜನೆಗಳಲ್ಲಿ ಮಗ್ನನಾಗಿದ್ದ. ಅಲ್ಲದೆ ಆ ಬಗ್ಗೆ ಒಂದು ಗ್ರಂಥವನ್ನೇ ಬರೆದ. ತನ್ನ ಮೊದಲ ವೃತ್ತಿಯನ್ನು ಬಿಡಲಾರದೆ ಮಧ್ಯದಲ್ಲಿ ಅವನು ಕ್ಯಾಪ್ಟನ್ ಆಗಿ 1566ರಲ್ಲಿ ಐರ್ಲೆಂಡಿಗೆ ಹೋಗಿ ಆ ವರ್ಷದ ಕೊನೆಯಲ್ಲಿ ಹಿಂದಿರುಗಿದ. ಚೀನಕ್ಕೆ ವಾಯವ್ಯ ಮಾರ್ಗವನ್ನು ಕಂಡುಹಿಡಿಯುವ ಬಗ್ಗೆ ಪರಿಶೀಲನಾತ್ಮಕ ಪ್ರವಾಸವೊಂದರ ಯೋಜನೆಯನ್ನು ರೂಪಿಸಿದ. ಆದರೆ ಮಸ್ಕೊವಿ ಕಂಪೆನಿ ಈ ಯೋಜನೆಯನ್ನು ವಿರೋಧಿಸಿದ್ದರಿಂದ ಇದನ್ನು ಕೈಬಿಟ್ಟ.


ವಸಾಹತುಗಳನ್ನು ಸ್ಥಾಪಿಸುವ ಯೋಜನೆಗಳನ್ನು ಐರ್ಲೆಂಡಿನಲ್ಲಿ ಗಿಲ್ಬರ್ಟನೂ ಅವನ ಸಂಗಡಿಗರೂ ಮುಂದುವರಿಸಿದರು. ಐರ್ಲೆಂಡಿನ ಮನ್ಸ್ ಟರ್ ದಂಗೆಯನ್ನು ಅಡಗಿಸುವ ಕಾರ್ಯಕ್ರಮದ ಹೊಣೆಹೊತ್ತು ಅದನ್ನು ಕೂಡ ಯಶಸ್ವಿಯಾಗಿ ನಿರ್ವಹಿಸಿದ. ಗಿಲ್ಬರ್ಟನ ಸಾಹಸಕಾರ್ಯಕ್ಕಾಗಿ ರಾಣಿ ಎಲಿಜ಼ಬೆತ್ ಇವನಿಗೆ 1570ರಲ್ಲಿ ನೈಟ್ ಪ್ರಶಸ್ತಿ ನೀಡಿದಳು. ಆದರೆ ಗಿಲ್ಬರ್ಟ್ ರೂಪಿಸಿದ ಯಾವ ವಸಾಹತು ಯೋಜನೆಗಳೂ ಯಶಸ್ವಿಯಾಗಿರಲಿಲ್ಲ.


ಗಿಲ್ಬರ್ಟ್ ರಾಜಕೀಯವನ್ನು ಪ್ರವೇಶಿಸಿ 1571ರಲ್ಲೂ 1581ರಲ್ಲೂ ಪ್ಲೈಮತ್ ಕ್ಷೇತ್ರದಿಂದ ಪಾರ್ಲಿಮೆಂಟಿಗೆ ಆಯ್ಕೆಹೊಂದಿದ. ನೆದರ್ಲೆಂಡಿನ ಜನ ಸ್ಪೇನಿನ ವಿರುದ್ಧ 1572ರಲ್ಲಿ ದಂಗೆಯೆದ್ದಾಗ ಗಿಲ್ಬರ್ಟ್ ಇಂಗ್ಲೆಂಡಿನ ಸ್ವೈಚ್ಛಿಕ ತಂಡವೊಂದರ ನಾಯಕನಾಗಿ ನೆದರ್ಲೆಂಡಿಗೆ ನೆರವು ನೀಡಿದ. ಅದರಲ್ಲಿ ಅವನು ಅಷ್ಠೇನೂ ಯಶಸ್ಸುಗಳಿಸಲಿಲ್ಲ. ಅಪರಾಧಿಗಳ ಪಾಲನೆಯ ಕ್ರಮವನ್ನು ಸುಧಾರಿಸುವ ಮತ್ತು ಲಂಡನಿನಲ್ಲಿ ಅದಕ್ಕಾಗಿ ಅಕಾಡೆಮಿಯನ್ನು ಸ್ಥಾಪಿಸುವ ಯೋಜನೆಯೊಂದನ್ನು 1573-78ರಲ್ಲಿ ರಚಿಸಿದ. 1575ರಲ್ಲಿ ಅವನು ಮತ್ತೇ ಚೀನಕ್ಕೆ ವಾಯವ್ಯ ದಿಕ್ಕಿನಿಂದ ಸಮುದ್ರ ಮಾರ್ಗ ಕಂಡು ಹಿಡಿಯುವ ಯೋಜನೆಯಲ್ಲಿ ಆಸಕ್ತಿ ತಳೆದ. ಈ ಯತ್ನದಲ್ಲಿ ಮಾರ್ಟಿ ಫ್ರಾಭಿಷರನಿಗೆ ಈತ ಪ್ರೋತ್ಸಾಹ ನೀಡಿದನಾದರೂ ಅದರಲ್ಲಿ ನೇರವಾಗಿ ಭಾಗವಹಿಸಲಿಲ್ಲ. ಇವನ ಗಮನ ಅಮೆರಿಕದ ಕಡೆಗೆ ಹರಿಯಿತು. ನ್ಯೂಫೌಂಡ್ಲೆಂಡಿನ ಫ್ರೆಂಚ್, ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಮತ್ಸ್ಯನೌಕೆಗಳನ್ನು ವಶಪಡಿಸಿಕೊಳ್ಳುವ, ಸಾಂತೊ ಡೊಮಿಂಗೋ ಮತ್ತು ಕ್ಯೂಬವನ್ನು ಆಕ್ರಮಿಸಿಕೊಳ್ಳುವ, ಅಮೆರಿಕದಿಂದ ಸ್ಪೇನಿಗೆ ಸಾಗುತ್ತಿದ್ದ ಬೆಳ್ಳಿಯನ್ನು ಲೂಟಿಮಾಡುವ ಯೋಜನೆಯೊಂದನ್ನು ಈತ ಪ್ರತಿಪಾದಿಸಿದ. ಯಾವ ಕ್ರೈಸ್ತದೊರೆ ಅಥವಾ ಜನಕ್ಕೂ ಸೇರದ ವಿಧರ್ಮೀಯರ ನೆಲವನ್ನು ಹಿಡಿದುಕೊಳ್ಳುವ ಅಧಿಕಾರವನ್ನು ರಾಣಿ ಇವನಿಗೆ 6 ವರ್ಷಗಳ ಅವಧಿಗೆ ನೀಡಿದಳು.


ದುರಾಶಾಪಿಡಿತನಾದ ಗಿಲ್ಬರ್ಟ್ ತನ್ನೆಲ್ಲ ಸಂಪತ್ತನ್ನೂ ವಿನಿಯೋಗಿಸಿ ಈ ಸಾಹಸಕೃತ್ಯದಲ್ಲಿ ತೊಡಗಿದ. ಇವನ ನೌಕಾಪಡೆ ಡಾರ್ಟ್ಮತ್ನಿಂದ ಹೊರಟಿತು. ಆದರೆ ಇವನಿಗೆ ಯಶಸ್ಸು ದೊರಕಲಿಲ್ಲ. ಇವನ ಕೈಕೆಳಗಿನವರು ಅಶಿಸ್ತಿನಿಂದ ವರ್ತಿಸಿದರು. 1583ರಲ್ಲಿ ಗಿಲ್ಬರ್ಟ್ ಮತ್ತೊಮ್ಮೆ ಇಂಥ ಸಾಹಸ ಕಾರ್ಯದಲ್ಲಿ ತೊಡಗಿದ. ಹಾಗೂ ಹೀಗೂ ಹಣ ಸಂಗ್ರಹಿಸಿ ಮತ್ತೆ ಹೊರಟ. ಉತ್ತರ ಅಮೆರಿಕದ ನ್ಯೂಫೌಂಡ್ ಲೆಂಡನ್ನು ರಾಣಿಯ ಹೆಸರಿನಲ್ಲಿ ವಶಪಡಿಕೊಂಡ. ಗಿಲ್ಬರ್ಟ್ ಸ್ವದೇಶಾಭಿಮುಖವಾಗಿ ಹೊರಟ. ಆದರೆ ಮಧ್ಯಮಾರ್ಗದಲ್ಲಿ ಅವನ ದೋಣಿ ಬಿರುಗಾಳಿಗೆ ಸಿಕ್ಕಿ ಮುಳುಗಿತು. ಆಗ ಗಿಲ್ಬರ್ಟ್ ಶಾಂತವಾಗಿ ಕುಳಿತು ಪುಸ್ತಕವನ್ನು ಓದುವುದರಲ್ಲಿ ಮಗ್ನನಾಗಿದ್ದನೆಂದೂ ಭೂಮಿಯಿಂದ ಸ್ವರ್ಗಕ್ಕೆ ಎಷ್ಟು ದೂರವೋ ಸಮುದ್ರದಿಂದಲೂ ಅಷ್ಟೇ ದೂರವೆಂದು ಕೂಗಿ ಹೇಳಿದನೆಂದೂ ಬಳಿಯ ಇನ್ನೊಂದು ಹಡಗಿನ ಕ್ಯಾಪ್ಟನನಾಗಿದ್ದ ಹೇಯ್ಸ್ ಹೇಳಿದ್ದಾನೆ.