ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರಿಯರ್ಸನ್, ಜಾರ್ಜ್ ಏಬ್ರಹಾಂ

ವಿಕಿಸೋರ್ಸ್ದಿಂದ

ಗ್ರಿಯರ್‍ಸನ್, ಜಾರ್ಜ್ ಏಬ್ರಹಾಂ

1851-1941. ಐರ್ಲೆಂಡಿನ ಭಾಷಾಶಾಸ್ತ್ರಜ್ಞ. ಭಾರತದ ಸರ್ವೇಕ್ಷಣೆ (ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯ) ಮಹಾ ಸಂಪುಟಗಳ ಕರ್ತೃ. ಡಬ್ಲಿನ್ನಿನ ಸಮೀಪದ ಗ್ಲೆನಗಿಯೆರಿ ಎಂಬಲ್ಲಿ ಹುಟ್ಟಿದ. ಡಬ್ಲಿನ್ನಿನ ಟ್ರಿನಿಟಿ ಕಾಲೇಜು ಹಾಗೂ ಕೇಂಬ್ರಿಜ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ನಡೆಸಿದ. ಕಾಲೇಜು ವ್ಯಾಸಂಗ ಸಮಯದಲ್ಲ ಸಂಸ್ಕøತ ಹಾಗೂ ಹಿಂದೂಸ್ತಾನಿ ತೌಲನಿಕ ಅಧ್ಯಯನ್ ನಡೆಸಿದ. 1873ರಲ್ಲಲಿ ಇಂಡಿಯನ್ ಸಿವಿಲ್ ಸರ್ವಿಸ್ ಹುದ್ದೆಗೆ ನೇಮಕಗೊಂಡು ಭಾರತದಲ್ಲಿ ಆಡಳಿತದ ಹೊಣೆಗಾರಿಕೆನ್ನು ಹೊತ್ತ. ಅಧಿಕಾರದಲ್ಲಿದ್ದುಕೊಂಡು ತನ್ನ ಆಸಕ್ತಿಯ ವಿಷಯವಾದ ಇಂಡೋ-ಆರ್ಯನ್ ಭಾಷೆಗಳ ಅಧ್ಯಯನವನ್ನು ಮುಂದುವರಿಸಿದ.

1877ರಲ್ಲಿ ಜರ್ನಲ್ ಆಫ್ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಎಂಬ ಪತ್ರಿಕೆಯಲ್ಲಿ ಬಂಗಾಳೀ ಉಪಭಾಷೆಗಳನ್ನು ಕುರಿತು ಈತನ ಒಂದು ಲೇಖನ ಪ್ರಕಟವಾಯಿತು. ತರುವಾಯ ಬಿಹಾರಿ ಉಪಭಾಷೆಗಳು, ಮೈಥಿಲಿ, ಭೋಜಪುರಿ ಮುಂತಾದ ಆರ್ಯವರ್ಗದ ಉಪಭಾಷೆಗಳ ಅಧ್ಯಯನ ನಡೆಸಿ ಬಿಹಾರಿನ ಏಳು ಭಾಷೆಗಳು ಹಾಗೂ ಉಪಭಾಷೆಗಳ ವ್ಯಾಕರಣ ಎಂಬ ಗ್ರಂಥವನ್ನು ಪ್ರಕಟಸಿದ. ಅನಂತರ 1888ರಲ್ಲಿ ಬಿಹಾರದ ರೈತರ ಜೀವನ (ದಿ ಬಿಹಾರ್ ಪೆಸೆಂಟ್ ಲೈಫ್ ) ಎಂಬ ಪುಸ್ತಕವನ್ನು ಬರೆದ. ಅಲ್ಲದೆ ಮೈಥಿಲಿ ಹಾಗೂ ಕಾಶ್ಮೀರೀ ಭಾಷೆಗಳ ವ್ಯಾಕರಣವನ್ನು ಬರೆದ. ಎಲ್ಲಕ್ಕೂ ಮಿಗಿಲಾಗಿ ಈತ ಅಣಿಗೊಳಿಸಿದ ಭಾರತದ ಭಾಷೆಗಳ ಸರ್ವೇಕ್ಷಣೆ ಎಂಬ ಕರತಿ ; 19 ಸಂಪುಟಗಳು (1888-1927) ಪ್ರಪಂಚದಾದ್ಯಂತ ಮನ್ನಣೆ ಪಡೆಯಿತು. ಇದರಲ್ಲಿ 179 ಭಾಷೆಗಳನ್ನೂ 544 ಉಪಭಾಷೆಗಳನ್ನೂ ಸರ್ವೇಕ್ಷಿಸಲಾಗಿದೆ. ಇಂದಿಗೂ ಈ ಕೃತಿಯ ಸಂಪುಟಗಳು ಭಾರತದ ಎಲ್ಲ ಭಾಷೆಗಳ ಮಾಹಿತಿಗಳನ್ನು ಒಳಗೊಂಡ ಏಕಮಾತ್ರ ಆಧಾರ ಗ್ರಂಥಗಳಾಗಿವೆ. ಈ ಗ್ರಂಥವನ್ನು ಸಿದ್ದಪಡಿಸಲು ಗ್ರಿಯರ್‍ಸನ್ ತುಂಬ ನಿಷ್ಠೆಯಿಂದ ದುಡಿದ. 1886ರಲ್ಲಿ ವಿಯೆನ್ನದಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಾಚ್ಯ ವಿದ್ವಾಂಸರ ಸಮ್ಮೇಳನ ಭಾರತದ ಭಾಷೆಗಳ ಸರ್ವೇಕ್ಷಣೆಯ ಯೋಜನೆಯನ್ನು ಕಾರ್ಯಗತಮಾಡಬೇಕೆಂದು ಅಂದಿನ ಭಾರತ ಸರ್ಕಾರವನ್ನು ಪ್ರಾರ್ಥಿಸಿತು. ಭಾರತ ಸರ್ಕಾರ ಯೋಜನೆಯ ಮಹತ್ತ್ವವನ್ನರಿತು ಇದಕ್ಕೆ ತನ್ನ ಸಮ್ಮತಿಯನ್ನು ಸೂಚಿಸಿದ್ದಲ್ಲದೆ ಗ್ರಿಯರ್‍ಸನ್ನನನ್ನು ಈ ಮಹಾಯೋಜನೆಯ ಸಂಚಾಲಕನನ್ನಾಗಿ (1888) ನೇಮಿಸಿತು. ಕಸ್ಟ್ ಗ್ರಿಯರ್‍ಸನ್ ಮತ್ತು ಇತರೆ ಹಲವಾರು ವಿದ್ವಾಂಸರು ಸಭೆ ಸೇರಿ ಈ ಯೋಜನೆಯ ರೂಪುರೇಖೇಗಳನ್ನು ಹಾಕಿಕೊಂಡರು. ಆಗಿನ ಪ್ರಾಂತೀಯ ಸರ್ಕಾರಗಳೊಂದಿಗೆ ಪರ್ಯಾಲೋಚಿಸಿದ ಮೇಲೆ ಮೊದಲಲ್ಲಿ ಮದ್ರ್ರಾಸು, ಬರ್ಮ, ಹೈದರಬಾದ್ ಮತ್ತು ಮೈಸೂರು ಭಾಗಗಳನ್ನು ಬಿಟ್ಟು ಮಿಕ್ಕಂತೆ ಬಲೂಚಿಸ್ತಾನ್ ವಾಯುವ್ಯ ಪ್ರಾಂತ್ಯ, ಕಾಶ್ಮೀರ, ಪಂಜಾಬ್., ಮುಂಬಯಿ, ರಾಜಪುಟಾನ್, ಮಧ್ಯ ಭಾರತ ಪ್ರದೇಶಗಳಲ್ಲದೆ ಸಂಯುಕ್ತ ಪ್ರದೇಶಗಳಾದ ಆಗ್ರ, ಔದ್, ಬಿಹಾರ, ಒರಿಸ್ಸ, ಬಂಗಾಳ ಹಾಗೂ ಅಸ್ಸಾಂ ಪ್ರದೇಶಗಳನ್ನು ಸರ್ವೇಕ್ಷಣೆಯ ಪ್ರದೇಶಗಳನ್ನಾಗಿ ಆರಿಸಲಾಯಿತು.

ಈ ಸರ್ವೇಕ್ಷಣೆಯಲ್ಲಿ ಮೂರು ಕಡೆಗೆ ಹೆಚ್ಚು ಗಮನ ಕೊಡಲಾಯಿತು. 1 ಗದ್ಯದ ಒಂದು ಮಾದರಿಯನ್ನು ಆರಿಸಿಕೊಂಡು ಅದನ್ನು ಇತರ ಭಾಷೆ ಹಾಗೂ ಉಪಭಾಷೆಗಳಿಗೆ ಭಾಷಾಂತರ ಮಾಡಿ ಪರಸ್ಪರವಾಗಿ ಹೋಲಿಸುವುದು, 2 ಪ್ರತಿಯೊಂದು ಭಾಷೆಯಲ್ಲೂ ದೊರೆಯುವ ಜನಪದ ಗೀತ ಮತ್ತು ಕಥೆಗಳನ್ನು ಸಂಗ್ರಹಿಸುವುದು. 3 ಆಯಾ ಭಾಷೆಗಳ ಕೆಲವು ಶಬ್ದಗಳ ಮತ್ತು ವಾಕ್ಯಗಳ ಪ್ರಯೋಗಗಳನ್ನು ನೋಡುವುದು.

ಈ ಬೃಹತ್ ಕಾರ್ಯ 1888 ರಿಂದ 1903 ರ ವರೆಗೆ ನಡೆಯಿತು.

ಇಂಥ ಮಹತ್ವದ ಕಾರ್ಯವನ್ನು ನೆರೆವೇರಿಸುವಲ್ಲಿ ಗ್ರಿಯರ್‍ಸನ್ನನಿಗೆ ಅನೇಕ ಆತಂಕಗಳು ಒದಗಿಬಂದುವು. ಉದಾಹರಣೆಗೆ : ಉತ್ತರ ಪಂಜಾಬಿನಲ್ಲಿ ಜಂಗಲಿ ಎಂಬ ಭಾಷೆ ಬಳಕೆಯಲ್ಲಿದೆ. ಬಿಕನೀರಿನ ಅರಣ್ಯದಲ್ಲಿ ಇದನ್ನು ಮಾತನಾಡುವುದರಿಂದ ಇದಕ್ಕೆ ಜಂಬಲಿ ಎಂಬ ಹೆಸರು ಬಂದಿದೆ. ಸರ್ವೇಕ್ಷಣೆ ಮಾಡುವ ಸಂದರ್ಭದಲ್ಲಿ ಇದರ ವಾಸ್ತವಿಕತೆಯ ಬಗ್ಗೆ ಪ್ರಶ್ನಿಸಿದಾಗ ಅಲ್ಲಿಯವರು ಕೊಟ್ಟ ಉತ್ತರ ಹೌದು ನಾವು ಜಂಗಲಿಗಳನ್ನು ಚೆನ್ನಾಗಿ ಬಲ್ಲೆವು. ಹೆಚ್ಚಿನ ಮಾಹಿತಿಗಾಗಿ ಇನ್ನೂ ಸ್ವಲ್ಪ ಮುಂದೆ ಹೋಗಿ ಎಂದರು. ಮುಂದೆ ಹೋಗಿ ಕೇಳಿದಾಗ ಇನ್ನೂ ಮುಂದೆ ಹೋಗಿ ಎನ್ನತೊಡಗಿದರು. ಇದರಂತೆ ರಾಜಪುಟಾನ ಮರುಭೂಮಿಯನ್ನು ಸಮೀಪಿಸಿದರೂ ಆ ಜನ ಮುಂದೆ ಇದ್ದಾರೆ ಎನ್ನುವವರೇ ಆದರು. ಮುಂದೆ ಇದ್ದುದು ಜನಸಂಚಾರವಿಲ್ಲದ ಮರುಭೂಮಿ. ಎರಡನೆಯದಾಗಿ ಎಷ್ಟೋ ಭಾಷೆಗಳು ಕಲೆತಾಗ ಅವನ್ನು ಆಯಾ ಭಾಷಾವರ್ಗಕ್ಕೆ ಸೇರಿಸುವುದು ಕಷ್ಟದ ಕಾರ್ಯವಾಯಿತು. ಗ್ರಿಯರ್‍ಸನ್ ಈ ಸಮಸ್ಯೆಗಳನ್ನೆಲ್ಲ ಯಶಸ್ವಿಯಾಗಿ ನಡೆಸಿದ.

1903 ರಿಂದ ಗ್ರಿಯರ್‍ಸನ್ನನ ಬೃಹದ್ ಗ್ರಂಥದ ಪ್ರಕಟಣಕಾರ್ಯ ಪ್ರಾರಂಭವಾಗಿ 1927ರ ವರೆಗೂ ನಡೆಯಿತು. ಈ ಸಂಪುಟುಗಳು ಭಾರತದ ಭಾಷೆಗಳ ಐತಿಹಾಸಿಕ ತೌಲನಿಕ ವ್ಯಾಕರಣದ ಬಗ್ಗೆ ಮಾಹಿತಿಯನ್ನು ಕೊಡುವುದಲ್ಲದೆ ಭಾರತದ ಸಾಂಸ್ಕøತಿಕ ಸಾಮಾಜಿಕ ಜ್ಞಾನವನ್ನೂ ಕೊಡುತ್ತವೆ.

ಅಲ್ಲದೆ ಗ್ರಿಯರ್‍ಸನ್ ತನ್ನ ಸಹೋದ್ಯೋಗಿಗಳ ಸಹಾಯದಿಂದ ಸೈನೊಟಿಬೆಟನ್ ಭಾಷೆಗಳನ್ನು ಕುರಿತೂ ದಾರ್ದಿಕ್ ಭಾಷೆಗಳನ್ನು ಕುರಿತೂ ಕೆಲಸ ಮಾಡಿದ್ದಾನೆ. ಈತನ ಸಹೋದ್ಯೋಗಿಗಳಲ್ಲಿ ಸ್ಪೆನ್ ಕೊನೊ ಮುಖ್ಯ.

ಗ್ರಿಯರ್‍ಸನ್ ಆಸ್ಟ್ರಿಕ್ ಭಾಷೆಗಳ ಅಧ್ಯಯನವನ್ನೂ ಮಾಡಿದ್ದಾರೆ.

ಗ್ರಿಯರ್‍ಸನ್ ಮಾಡಿದ ಮಹಾಕಾರ್ಯವನ್ನು ಮೆಚ್ಚಿ ಅಂದಿನ ಭಾರತ ಸರ್ಕಾರ ಆತನಿಗೆ 1928 ರಲ್ಲಿ ಸರ್ ಪದವಿಯನ್ನು ಕೊಟ್ಟು ಸನ್ಮಾನಿಸಿತು. (ಕೆ.ಪಿ.ಎ.ಎನ್.) (ಪಿ.ಆರ್.ಎಂ.)