ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜನ್ನ

ವಿಕಿಸೋರ್ಸ್ದಿಂದ

ಜನ್ನ : - ಕನ್ನಡದ ಪ್ರಸಿದ್ಧ ಜೈನಕವಿ. 12ನೆಯ ಶತಮಾನದ ಉತ್ತರಾರ್ಧ ಮತ್ತು 13ನೆಯ ಶತಮಾನದ ಪೂರ್ವಾರ್ಧದಲ್ಲಿ ಕೃತಿರಚನೆ ಮಾಡಿದವ. ಹಳೆಯಬೀಡು ಪ್ರಾಂತದವನಾದ ಈತನ ತಂದೆ ಸುಮನೋಬಾಣನೆಂಬ ಬಿರುದು ಪಡೆದಿದ್ದ ಶಂಕರ. ತಾಯಿ ಗಂಗಾದೇವಿ ಹೆಂಡತಿ ಲಕುಮಾದೇವಿ. ಧರ್ಮಗುರು ರಾಮಚಂದ್ರ ದೇವ ಮುನಿ, ಉಪಾಧ್ಯಾಯ ಇಮ್ಮಡಿ ನಾಗವರ್ಮ. ಹೊಯ್ಸಳ "ಬಲ್ಲಾಳನಿಂದ "ಈತ ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದು, ಅನಂತರ ನರಸಿಂಹನಲ್ಲಿ ದಂಡಾಧಿಪತಿಯೂ ಮಂತ್ರಿಯೂ ಆಗಿದ್ದ. ನಾಭುಜನಾರ್ಧನದೇವ ಎಂದು ತನ್ನನ್ನು ಕರೆದುಕೊಂಡಿದ್ದಾನೆ. ಒಟ್ಟಿನಲ್ಲಿ ಈತ ಪಂಪನಂತೆ ಬಹುಮುಖ ವ್ಯಕ್ತಿತ್ವವುಳ್ಳವ.

"ಅನುಭವಮುಕುರ"ವೆಂಬ ಕಾಮಶಾಸ್ತ್ರ ಸಂಬಂಧವಾದ ಕೃತಿಯನ್ನೂ ಯಶೋಧರ ಚರಿತೆ, ಅನಂತನಾಥಪುರಾಣ ಎಂಬ ಎರಡು ಕಾವ್ಯಗಳನ್ನೂ ಬರೆದಿದ್ದಾನೆ. ಜನ್ನ. ಕೆಲವು ಶಾಸನಗಳೂ ಈತನಿಂದ ರಚಿತವಾಗಿವೆ. ಯಶೋಧಚರಿತೆ, ಅನಂತನಾಥ ಪುರಾಣ ಎರಡೂ ಧಾರ್ಮಿಕ ಕೃತಿಗಳು. ಆದರೆ ಯಶೋಧರಚರಿತೆಯಲ್ಲಿ ಲೌಕಿಕದ ನೆಲೆಗಟ್ಟು ಇಲ್ಲದಿಲ್ಲ. ಯಶೋಧರಚರಿತೆ ಬಹುಸುಂದರವಾದ ಪುಟ್ಟಕಾವ್ಯ. ಕೇವಲ ನಾಲ್ಕು ಅವತಾರಗಳೂ 310 ಪದ್ಯಗಳೂ ಇದರಲ್ಲಿವೆ. ಬರಿಯ ಕಂದಪದ್ಯಗಳಿಂದಲೇ ರಚಿತವಾಗಿರುವುದು ಈ ಕೃತಿಯ ವಿಶಿಷ್ಟತೆ. ಇದಕ್ಕೆ ಮೂಲ, ಸಂಸ್ಕøತದಲ್ಲಿ ವಾದಿರಾಜ (11ನೆಯ ಶ.) ಬರೆದಿರುವ ಯಶೋಧರಚರಿತ. ಅದಕ್ಕಿಂತಲೂ ಹಿಂದೆ ಪ್ರಭಂಜನ, ಹರಿಭದ್ರ, ಸೋಮದೇವ ಮುಂತಾದ ಪ್ರಾಕೃತ ಸಂಸ್ಕøತ ಕವಿಗಳು ಯಶೋಧರನ ಕತೆಯನ್ನು ನಿರೂಪಿಸಿದ್ದರು. ಮೂಲತಃ ಅದೊಂದು ಜನಪದ ಕತೆಯಿರಬೇಕು. ಹಿಂದಿನವರಲ್ಲಿ ಬಹುಮಟ್ಟಿಗೆ ಧಾರ್ಮಿಕ ಸ್ವರೂಪದ ಕತೆಯಷ್ಟೆ ಆಗಿದ್ದ ಯಶೋಧರಾಖ್ಯಾನವನ್ನು ತೆಗೆದುಕೊಂಡು ಆದರೆ ಅಸಂಗತಾಂಶಗಳನ್ನು ನಿವಾರಿಸಿ ಉಚಿತ ಮಾರ್ಪಾಡುಗಳನ್ನು ಮಾಡಿಕೊಂಡು ಅದನ್ನೊಂದು ಸರಳರಮ್ಯವಾದ, ಮಾನವೀಯ ಸ್ವಾರಸ್ಯವುಳ್ಳ ಕಾವ್ಯವನ್ನಾಗಿ ಪರಿವರ್ತಿಸಿದವ ವಾದಿರಾಜ. ಅವನ ಕಾವ್ಯಕ್ಕೆ ಸಂಸ್ಕøತದಲ್ಲಿ ಯಾವ ವೈಶಿಷ್ಟ್ಯವಿದೆಯೋ ಅದೇ ವೈಶಿಷ್ಟ್ಯ ಕನ್ನಡದಲ್ಲಿ ಜನ್ನನ ಕೃತಿಗಿದೆ.

ಜನ್ನ ವಾದಿರಾಜನನ್ನು ಹೆಜ್ಜೆಹೆಜ್ಜೆಗೂ ಅನುಸರಿಸಿದ್ದಾನಾದರೂ ತನ್ನ ಸ್ವಂತ ಪ್ರತಿಭೆಯನ್ನು ಸಾಕಷ್ಟು ತೋರಿದ್ದಾನೆ. ಕೆಲವೆಡೆ ಮೂಲವನ್ನು ಸೊಗಸಾಗಿ ಅನುವಾದಿಸಿ ತನ್ನ ಭಾಷಾಂತರ ಶಕ್ತಿಯನ್ನು ಮೆರೆದಿದ್ದಾನೆ; ಕೆಲವೆಡೆ ಮೂಲದ ಚೆಲುವನ್ನು ಹೆಚ್ಚಿಸಿದ್ದಾನೆ; ಎಷ್ಟೋ ಕಡೆ ಮೂಲವನ್ನು ಅಂದವಾಗಿ ಸಂಗ್ರಹಿಸಿದ್ದಾನೆ. ಕತೆಗೆ ಕೆಲವು ಅಂಶಗಳು ಹೊಸದಾಗಿ ಸೇರಿವೆ. ಅನೇಕ ಕಡೆ ಸೂಕ್ಷ್ಮವಾದ ಕೆಲವು ಮಾರ್ಪಾಟುಗಳಾಗಿವೆ. ಮೂಲದ ಕೆಲವು ಅನೌಚಿತ್ಯಗಳು ಹೋಗಿವೆ. ಅಲ್ಲದೆ, ಜನ್ನ ದೇಸಿಯ ಸೊಬಗನ್ನು ತನ್ನ ಕೃತಿಯಲ್ಲಿ ಸೂರೆಮಾಡಿದ್ದಾನೆ; ಅನ್ಯಭಾಷಾಕೃತಿಯೊಂದನ್ನು ತಾಯ್ನುಡಿಯಲ್ಲಿ ಎಷ್ಟು ಚೆನ್ನಾಗಿ ನಿರ್ವಹಿಸಬಹುದೊ ಅಷ್ಟೂ ಚೆನ್ನಾಗಿ ನಿರ್ವಹಿಸಿ ಯಶಸ್ವಿಯಾಗಿದ್ದಾನೆ.

ಜೇವದಯೆ ಜೈನಧರ್ಮಂ ಎಂಬ ಸಂದೇಶವನ್ನು ಬಿತ್ತರಿಸಿ, ಅಹಿಂಸೆಯ ಪಾರಮ್ಯವನ್ನು ಎತ್ತಿಹಿಡಿಯುವುದು ಯಶೋಧರಚರಿತೆಯ ಉದ್ದೇಶ. ಹಿಂಸೆಯಿಮದಾಗುವ ಘೋರ ದುರಂತವನ್ನು ಕವಿ ಮನಮುಟ್ಟುವಂತೆ ಚಿತ್ರಿಸಿದ್ದಾನೆ. ಯಶೋಧರ ಮತ್ತು ಚಂದ್ರಮತಿಯರು ಒಂದು ಹಿಟ್ಟಿನ ಕೋಳಿಯನ್ನು ಕೊಂದು ಸಂಕಲ್ಪ ಹಿಂಸೆಯನ್ನೆಸಗಿದ ಮಾತ್ರದಿಂದಲೇ ಹಲವಾರು ಜನ್ಮಗಳನ್ನೆತ್ತಿ ವಿವಿಧ ತಿರ್ಯಗ್ಗತಿಗಳಲ್ಲಿ ತೊಳಲಿ ಕಡೆಗೆ ಕರ್ಮದಿಂದ ಬಿಡುಗಡೆಗೊಳ್ಳುವುದನ್ನು ಇಲ್ಲಿ ನೋಡುತ್ತೇವೆ. ಈ ಕೃತಿಯಲ್ಲಿ ವ್ಯಕ್ತವಾಗುವ ಅಹಿಂಸಾತತ್ತ್ವ ಜೈನಧರ್ಮಕ್ಕೇ ಸೀಮಿತವಾದುದಲ್ಲ, ಅದು ಇಡೀ ಮಾನವ ಧರ್ಮದ ಸಂದೇಶವಾಗಿ ನಿಲ್ಲುತ್ತದೆ. ಅದನ್ನು ಕವಿ ಕಲಾವಿಲಾಸಪೂರ್ವಕವಾಗಿ ಪ್ರತಿಪಾದಿಸಿದ್ದಾನೆ.

ಯೋಶೋಧರಚರಿತೆಯಲ್ಲಿ ಅಮೃತಮತಿಯ ಅಧಾರ್ಮಿಕ ವಿಕೃತ ಪ್ರಣಯದ ಕತೆಯೊಂದು ಪೂರಕವಾಗಿ ಸೇರಿಕೊಂಡಿದೆ. ಅದರಲ್ಲಿ ಬರುವ ಸಮಸ್ಯೆ ಸಾಮಾಜಿಕವಾದುದು, ನಿತ್ಯನೂತನವಾದುದು, ಕವಿ ಅದನ್ನು ವೈರಾಗ್ಯಪ್ರಚೋದನೆಗೆ, ಧರ್ಮ ಬೋಧನೆಗೆ ಬಳಸಿಕೊಂಡಿದ್ದಾನಾದರೂ ಅದನ್ನು ಪ್ರತ್ಯೇಕಿಸಿ ನೋಡುವುದು ಸಾಧ್ಯ. ಮನಸಿಜನ ಮಾಯೆ ವಿಧಿವಿಳಸನದ ನೆರಂಬಡೆಯೆ ಕೊಂದು ಕೂಗದೆ ನರರಂ- ಎಂಬುದು ಇಲ್ಲಿ ಜನ್ನನ ಕಾಣ್ಕೆ.

ಒಟ್ಟಿನ ಮೇಲೆ ಮಾನವ ಸ್ವಭಾವದ ಸಂಕೀರ್ಣತೆಯ ಅರಿವು, ಸ್ವಾರಸ್ಯಪೂರ್ಣವೂ ಸಂಕ್ಷಿಪ್ತವೂ ಆದ ನಿರೂಪಣೆ, ಸರಳ ಸಮುಚಿತವಾದ ಅಲಂಕಾರಗಳು, ದೇಸಿಯ ಬೆಡಗು ಬಿನ್ನಾಣಗಳು-ಈ ಗುಣಗಳಿಂದ ಕೂಡಿರುವ ಯಶೋಧರಚರಿತೆ ಕನ್ನಡದಲ್ಲಿ ಒಂದು ವಿರಳವರ್ಗದ ಕಾವ್ಯವಾಗಿದೆ; ಧರ್ಮ, ಕಾವ್ಯಧರ್ಮಗಳ ಸಮನ್ವಯಕ್ಕೆ ಒಳ್ಳೆಯ ನಿದರ್ಶನವಾಗಿದೆ. ಅನಂತನಾಥಪುರಾಣ 14ನೆಯ ತೀರ್ಥಂಕರನಾದ ಅನಂತನಾಥನ ಕತೆಯನ್ನು ಬಣ್ಣಿಸುವ 14 ಆಶ್ವಾಸಗಳ ಪ್ರೌಢ ಚಂಪೂ ಕಾವ್ಯ. ಇದಕ್ಕೆ ಮುಖ್ಯವಾದ ಆಕರ ಗುಣಭದ್ರಾಚಾರ್ಯರು ಸಂಸ್ಕøತದಲ್ಲಿ ರಚಿಸಿರುವ ಉತ್ತರಪುರಾಣ. ಅಲ್ಲಿ ಕಿರಿದಾಗಿ ಬರುವ ಅನಂತನಾಥನ ಕತೆಯನ್ನು ಜನ್ನ ಎಳೆದು ಹಿಗ್ಗಲಿಸಿ 14 ಆಶ್ವಾಸಗಳಷ್ಟು ದೊಡ್ಡದು ಮಾಡಿದ್ದಾನೆ. ಈ ಕಾವ್ಯ ಸಂಪ್ರದಾಯದ ಪ್ರಭಾವಕ್ಕೆ ವಿಶೇಷವಾಗಿ ಪಕ್ಕಾಗಿದೆ. ವಿದ್ವತ್ತಿನ ಪ್ರದರ್ಶನ, ಮಾತಿನ ಆಡಂಬರ, ಅಲಂಕಾರಗಳ ಜಟಿಲತೆ, ಮತೀಯ ಪ್ರಕ್ರಿಯೆಗಳ ಆಧಿಕ್ಯ, ಅನಾವಶ್ಯಕ ವರ್ಣನೆಗಳು, ಔಚಿತ್ಯ ಪ್ರಜ್ಞೆಯ ಕೊರತೆ-ಇವು ಇದರಲ್ಲಿ ಎದ್ದುಕಾಣುವ ಲಕ್ಷಣಗಳು. ಹೀಗಾಗಿ ಈ ಕೃತಿ ರಸವತ್ತಾದ ಕವಿತೆಯಾಗುವುದರ ಬದಲು ಬಹುಮಟ್ಟಿಗೆ ಶುಷ್ಕವಾದ ಪುರಾಣವಾಗಿ ಪರಿಣಮಿಸಿದೆ. ಆದರೆ ಇದರಲ್ಲಿ ಅಂರರ್ಗತವಾಗಿರುವ ಚಂಡಶಾಸನನ ಉಪಾಖ್ಯಾನ ಒಂದು ಹೃದಯಂಗಮವಾದ ಭಾಗ. ಪ್ರತ್ಯೇಕಿಸಿದರೆ ಅದೊಂದು ಉಜ್ಜ್ವಲವಾದ ಖಂಡಕಾವ್ಯವಾಗುತ್ತದೆ. ಜಿನಕಥೆಗೂ ಅದಕ್ಕೂ ಸಾವಯವ ಸಂಬಂಧವೇನೂ ಇಲ್ಲ. ಉತ್ತರ ಪುರಾಣದಲ್ಲಿ ಬಿಂದುರೂಪವಾಗಿ ಬರುವ ಕತೆಯನ್ನು ಇಲ್ಲಿ ಜನ್ನ ಸೊಗಸಾಗಿ ವಿಸ್ತರಿಸಿದ್ದಾನೆ. ಯಶೋಧರಚರಿತೆಯಲ್ಲಿ ಹೆಣ್ಣಿನ ನಿಷಿದ್ಧಕಾಮ ಚಿತ್ರಿತವಾಗಿದ್ದರೆ ಚಂಡಶಾಸನ ವೃತ್ತಾಂತದಲ್ಲಿ ಗಂಡಿನ ದುರಂತ ವ್ಯಾಮೋಹ ನಿರೂಪಿತವಾಗಿದೆ. ಸುಮಾರು 80 ಪದ್ಯಗಳಷ್ಟು ಚಿಕ್ಕದಾದರೂ ಈ ಉಪಾಖ್ಯಾನ ಸಹೃದಯರ ಚಿತ್ತದ ಮೇಲೆ ಅಳಿಸಲಾಗದ ಮುದ್ರೆಯೊತ್ತುತ್ತದೆ. ಯಶೋಧರಚರಿತೆ ಹಾಗೂ ಅನಂತನಾಥಪುರಾಣದ ಚಂಡಶಾಸನ ಕಥೆ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆಯುತ್ತವೆ. ಸಂಪ್ರದಾಯಬದ್ಧವೂ ಚಿರಪರಿಚಿತವೂ ಆದ ವಸ್ತುವನ್ನು ಬಿಟ್ಟು, ಕವಿ ವಿಷಮಪ್ರಣಯದ ಎರಡು ದಿಕ್ಕುಗಳನ್ನು ಚಿತ್ರಿಸಿ ಬದುಕಿನ ವಾಸ್ತವಿಕತೆಗೆ ಕನ್ನಡಿ ಹಿಡಿದಿದ್ದಾನೆ. ವಿಮರ್ಶಕರೊಬ್ಬರು ಹೇಳುವಂತೆ ಅದಮ್ಯವಾದ ಕಾಮದ, ಧರ್ಮವಿರುದ್ಧ ಪ್ರಣಯದ ಸ್ತ್ರೀಮುಖ ಪುರಷ ಮುಖಗಳನ್ನು ಉಜ್ಜ್ವಲವಾಗಿ ಕ್ರಾಂತಿಕಾರಕ ರೀತಿಯಲ್ಲಿ ಚಿತ್ರಿಸ ಕನ್ನಡ ಸಾಹಿತ್ಯಕ್ಕೆ ಸ್ವಂತ ಕಾಣಿಕೆ ಸಲ್ಲಿಸಿದ್ದಾನೆ. ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲ, ಜಾಗತಿಕ ಸಾಹಿತ್ಯಕ್ಕೂ ಬೆಲೆಯುಳ್ಳ ಕಾಣಿಕೆ ಸಲ್ಲಿಸಿದ್ದಾನೆಂದರೆ ತಪ್ಪಲ್ಲ. ಮಹಾಕಾವ್ಯದ ಔನ್ನತ್ಯ, ಭವ್ಯತೆಗಳು ಆಂಶಿಕವಾಗಿಯಾದರೂ ಅವನ ಎರಡು ಕಿರುಗಬ್ಬಗಳಲ್ಲಿ ತಲೆದೋರಿವೆ. ಆದ್ದರಿಂದ, ಜನ್ನ ಮಹಾಕವಿಗಳ ಸಾಲಿನಲ್ಲಿ ನಿಲ್ಲಲಾರನಾದರೂ ಮಧ್ಯಮವರ್ಗದ ಕವಿಗಳ ಪಂಕ್ತಿಯಲ್ಲಿ ಅಗ್ರಸ್ಥಾನಕ್ಕೆ ನಿಸ್ಸಂದೇಹವಾಗಿ ಅರ್ಹನಾಗುತ್ತಾನೆ. ನೇಮಿಜನ್ನಮರಿರ್ವರೆ ಕರ್ಣಾಟಕೃತಿಗೆ ಸೀಮಾಪುರುಷರ್ ಎಂಬ ಮಧೂರ ಕವಿಯ ಪ್ರಶಂಸೆ ಉತ್ಪ್ರೇಕ್ಷೆಯಾದರೂ ಭಾಗಶಃ ಸತ್ಯವೆನ್ನಬಹುದು. (ಸಿ.ಪಿ.ಕೆ.)