ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಲಂಧರ

ವಿಕಿಸೋರ್ಸ್ದಿಂದ

ಜಲಂಧರ - ಒಬ್ಬ ರಾಕ್ಷಸ ವೃತ್ರಾಸುರನ ಮಗನೆಂದೂ ಶಿವನ ಕೋಪವೇ ಸಮುದ್ರದಲ್ಲಿ ಘನೀಭೂತವಾಗಿ ಬಿದ್ದುದರಿಂದ ಈತ ಹುಟ್ಟಿದನೆಂದೂ ದೇವೇಂದ್ರ ತನಗೊಬ್ಬ ವೈರಿ ಬೇಕೆಂದು ಶಿವನನ್ನು ಬೇಡಿದ್ದರಿಂದ ಜನಿಸಿದನೆಂದೂ ಪುರಾಣಗಳು ಬಗೆಬಗೆಯಾಗಿ ಹೇಳಿವೆ. ಹುಟ್ಟಿದೊಡನೆ ಬ್ರಹ್ಮಾಂಡ ಒಡೆಯುವಂತಾಗಿ ನೋಡಬಂದ ಬ್ರಹ್ಮನ ಕಣ್ಣಲ್ಲಿ ನೀರಿಳಿಯಿತಂತೆ, ಆದ್ದರಿಂದ ಜಲಂಧರನೆಂದು ಈತನಿಗೆ ಹೆಸರಾಯಿತಂತೆ.

ಜಲಂಧರ ತನ್ನ ತಪಸ್ಸಿನಿಂದ ಶಿವನನ್ನು ಮೆಚ್ಚಿಸಿ, ಶಸ್ತ್ರದಿಂದ ಸಾಯದ ವರವನ್ನು ಪಡೆದು ತನ್ನ ಸತಿಯಾದ ಬೃಂದೆಯೊಡನೆ ಹರಿವಿರಿಂಚಿಗಳಿಂದಲೂ ಸೇವೆ ಪಡೆಯುತ್ತಿದ್ದನಲ್ಲದೆ ಸುರಲೋಕಕ್ಕೆ ದಾಳಿಯಿಟ್ಟು ಇಂದ್ರನನ್ನು ಸೋಲಿಸಿ ಓಡಿಸಿದ್ದ. ಇಂದ್ರನನ್ನು ರಕ್ಷಿಸಲು ಬಂದ ವಿಷ್ಣವೂ ಜಲಂಧರನ ಬಂಧಿಯಾದನಂತೆ. ದೇವತೆಗಳೆಲ್ಲ ಶಿವನ ಮೊರೆಹೋಗಲು ಆತ ಜಲಂಧರನನ್ನು ಸಂಹರಿಸಲು ಬೃಂದೆಯ ಪಾತಿವ್ರತ್ಯ ಭಂಗವೊಂದೇ ದಾರಿಯೆಂದಾಗ ವಿಷ್ಣು ಜಲಂಧರನ ವೇಷದಲ್ಲಿ ಹೋಗಿ ಅವಳನ್ನು ಭೋಗಿಸಿದನಂತೆ. ಅತ್ತ ಶಿವ ಜಲಂಧರನನ್ನು ಕೊಂದ. ನಿಜವರಿತ ಬೃಂದೆ ಕಿಚ್ಚು ಹಾಯಲು ಆಕೆಯ ಚಿತಾಭಸ್ಮದ ಮೇಲೆ ಕುಳಿತು ಬುದ್ಧಿಭ್ರಮಣೆಗೊಳಗಾದ ವಿಷ್ಣುವಿಗೆ ತುಳಸಿಯ ಮಾಲೆಯನ್ನು ಧರಿಸಿದ ಮೇಲೆ ಭ್ರಮೆಯಿಳಿಯಿತಂತೆ. ಈ ಕಥೆಯ ರೂಪಾಂತರಗಳು ಭೈರವೇಶ್ವರ ಕಥಾಸೂತ್ರರತ್ನಾಕರ, ಕಥಾಸಾಗರ ಮುಂತಾದ ಶಿವಶರಣರ ಕಥಾಕೋಶಗಳಲೆಲ್ಲ ಬರುತ್ತವೆ.

ನವನಾಥಸಿದ್ಧರಲ್ಲಿ ಒಬ್ಬ ಜಲಂಧರನಿದ್ದಾನೆ. ಇವನ ಹೆಸರೇ ಪಂಜಾಬಿನ ಒಂದು ಜಿಲ್ಲೆಗೆ ಬಂದಿದೆ.

ಮರೀಚಿ ಮತ್ತು ಕಶ್ಯಪ ಮಹರ್ಷಿಗಳ ವಂಶದಲ್ಲಿ ಜನಿಸಿದ ಒಬ್ಬ ಗೋತ್ರ ಪ್ರವರ್ತಕ ಋಷಿಗೂ ಜಲಂಧರನೆಂಬ ಹೆಸರಿದೆ. (ಕೆ.ಕೆ.)