ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜವಾಹರಲಾಲ್ ನೆಹರೂ ತಾರಾಲಯ

ವಿಕಿಸೋರ್ಸ್ದಿಂದ

ಜವಾಹರಲಾಲ್ ನೆಹರೂ ತಾರಾಲಯ - ವಿಜ್ಞಾನವನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಬಳಿ ಒಯ್ಯಲು ಬೆಂಗಳೂರಿನಲ್ಲಿ ಸ್ಥಾಪಿಸಿರುವ ತಾರಾಲಯ. 1989ರಲ್ಲಿ ಬೆಂಗಳೂರು ನಗರ ಕಾರ್ಪೊರೇಷನ್ ಇದನ್ನು ಪ್ರಾರಂಭಿಸಿತು. ಅನಂತರ 1992ರಲ್ಲಿ ಹೊಸತಾಗಿ ಸ್ಥಾಪನೆಯಾದ `ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ ಎಂಬ ಸ್ವಾಯತ್ತ ಸಂಸ್ಥೆಯ ಆಡಳಿತಕ್ಕೆ ಇದನ್ನು ವರ್ಗಾಯಿಸಲಾಯಿತು. ತಾರಾಲಯ ಬೆಂಗಳೂರಿನ ಪ್ರತಿಷ್ಠಿತ ಹೈಗ್ರೌಂಡ್ಸ್‍ನ ಚೌಡಯ್ಯ ರಸ್ತೆಯಲ್ಲಿ ನೆಲೆಯಾಗಿದೆ. ತಾರಾಲಯದಲ್ಲಿ ಹುಟ್ಟುಹಾಕಿರುವ `ವಿಜ್ಞಾನ ಕೇಂದ್ರ ವಿಜ್ಞಾನ ಕುರಿತು ಅನೌಪಚಾರಿಕ ಶಿಕ್ಷಣ ನೀಡುತ್ತಿದೆ. ಇದೇ ಆವರಣದಲ್ಲಿ ವಿಜ್ಞಾನದ ಉದ್ಯಾನವೊಂದನ್ನು ತೆರೆಯಲಾಗಿದೆ. ವರ್ಷ ಕಳೆದಂತೆ ತಾರಾಲಯ ಅದರ ಜೊತೆಜೊತೆಗೇ ಬೆಳೆದು ಬಂದಿರುವ ವಿಜ್ಞಾನ ಕೇಂದ್ರ ವೈಜ್ಞಾನಿಕ ಮಾಹಿತಿಗಳ ಪ್ರಸರಣೆಯಲ್ಲಿ ಮುಂಚೂಣಿಯಲ್ಲಿವೆ. ತಾರಾಲಯದ ಪ್ರಮುಖ ಆಕರ್ಷಣೆಯೆಂದರೆ 210 ಆಸನವುಳ್ಳ ಸುಸಜ್ಜಿತ ಮಂದಿರ. ಇದರಲ್ಲಿರುವ 15 ಮೀಟರ್ ವ್ಯಾಸದ ಗುಮ್ಮಟ. ಜರ್ಮನಿಯ ಕಾರ್ಲ್‍ಜೀóಸ್, ಜೇನ್ ವತಿಯಿಂದ ಪಡೆದ `ಸ್ಪೇಸ್ ಮಾಸ್ಟರ್ ಪ್ರಕ್ಷೇಪಕ(ಪ್ರೊಜೆಕ್ಟರ್). ಇರುಳ ಬಾನಪಟವನ್ನು ಬರಿಗಣ್ಣಿನಲ್ಲಿ ನೋಡಿ ಸವಿಯುವ ಅಪರೂಪದ ಚಿತ್ರಣವನ್ನು ಈ ಪ್ರಕ್ಷೇಪಕ ಗುಮ್ಮಟದ ಮೇಲೆ ಬಿಂಬಿಸುತ್ತದೆ. ನಕ್ಷತ್ರಪುಂಜ. ಆಕಾಶಕ್ಕೆ ಸಂಬಂಧಿಸಿದ ವಿದ್ಯಮಾನಗಳ ದೃಶ್ಯಗಳನ್ನು ವಿಶಾಲವಾಗಿ ಈ ಪ್ರಕ್ಷೇಪಕ ಬಿಂಬಿಸಬಲ್ಲದು. ಕೇವಲ ದೃಶ್ಯಾವಳಿಗಳನ್ನು ಬಿಂಬಿಸಲಷ್ಟೇ ಇದನ್ನು ಬಳಸುತ್ತಿಲ್ಲ. ಖಗೋಳಶಿಕ್ಷಣಕ್ಕೆ ಇದೊಂದು ಪರಿಕರವಾಗಿ ಬಳಕೆಯಾಗುತ್ತಿದೆ. ಇದಲ್ಲದೆ ಇಲ್ಲಿನ ಪ್ರದರ್ಶನಗಳಲ್ಲಿ ಸ್ಲೈಡುಗಳು, ವಿಡಿಯೋ ಚಿತ್ರಗಳು, ವಿಶೇಷ ಪರಿಣಾಮಗಳನ್ನು ಬೀರುವ ದೃಶ್ಯಗಳನ್ನು ತೋರಿಸಲಾಗುತ್ತದೆ.

ಈ ಕಾರ್ಯಕ್ರಮಗಳು ಎಷ್ಟು ಜನಪ್ರಿಯವಾಗಿವೆಯೆಂದರೆ ವಾರ್ಷಿಕ 2 ಲಕ್ಷ ಮಂದಿ ವೀಕ್ಷಕರನ್ನು ಆಕರ್ಷಿಸುತ್ತಿವೆ, ಇಲ್ಲಿನ ಖಗೋಳದೃಶ್ಯ ಚಿತ್ರಗಳು ದೇಶವಿದೇಶಗಳ ಸಾಹಿತ್ಯ-ವಿಜ್ಞಾನವನ್ನು ನವಿರಾಗಿ ಹೆಣೆದು, ಜನಮನವನ್ನು ಗೆದ್ದಿವೆ. ವಿಜ್ಞಾನ ವಿಚಾರಗಳನ್ನು ನಿಚ್ಚಳವಾಗಿ, ವಸ್ತುನಿಷ್ಠವಾಗಿ ಬಿಂಬಿಸುವುದರ ಜೊತೆಗೆ ಇಲ್ಲಿ ರೂಪಿಸಿರುವ ಯೋಜನೆಗಳು ಆಯಾ ದೃಶ್ಯಗಳ ಚಾರಿತ್ರಿಕ ಹಿನ್ನೆಲೆ ಆಧುನಿಕ ಅಭಿವೃದ್ದಿ ಮತ್ತು ಭವಿಷ್ಯದಲ್ಲಿನ ಅವುಗಳ ರೂಪರೇಖೆಗಳನ್ನು ಅಚ್ಚುಕಟ್ಟಾಗಿ ತೆರೆದಿಡುತ್ತಿವೆ, ಇಂತಹ ಯೋಜನೆಗಳನ್ನು ಪರಿಣಾಮಕಾರಿಯಾಗಿ ವೀಕ್ಷಕರ ಮುಂದಿಡಲು ವ್ಯಂಗ್ಯಚಿತ್ರ, ಪೇಂಟಿಂಗ್, ಕಂಪ್ಯೂಟರ್ ನಿರ್ಮಿತ ಚಿತ್ರಗಳು, ವಿಡಿಯೋ ತುಣುಕುಗಳನ್ನು, ವಿಶೇಷ ಪರಿಣಾಮ ತರುವ ದೃಶ್ಯಗಳನ್ನು ಧಾರಾಳವಾಗಿ ಬಳಸಿಕೊಳ್ಳಲಾಗುತ್ತಿದೆ.

ಪ್ರದರ್ಶನಕ್ಕೆಂದೇ ಇಲ್ಲಿನ ಸಭಾಂಗಣವನ್ನು ಸಜ್ಜುಗೊಳಿಸಿದೆ. ನೀಹಾರಿಕೆ, ಸೂಪರ್‍ನೋವಾ ಉಳಿಕೆ, ಸೌರವ್ಯೂಹ, ಅದಕ್ಕೆ ಸಂಬಂಧಿಸಿದ ಅತ್ಯುತ್ತಮ ಚಿತ್ರಗಳನ್ನೂ ಚಿತ್ರಪಟಗಳನ್ನೂ ಇಲ್ಲಿ ಪ್ರದರ್ಶಿಸಲಾಗುತ್ತದೆ. ಇದರ ಜೊತೆಗೆ ವ್ಯಂಗ್ಯಚಿತ್ರ, ಪೇಂಟಿಂಗ್ ಮತ್ತು ಪ್ರಸಿದ್ಧರ ಉಕ್ತಿಗಳನ್ನು ಪ್ರದರ್ಶಿಸುವುದುಂಟು. ಇಲ್ಲಿ ವ್ಯಕ್ತಿ ಅನ್ಯ ಗ್ರಹಗಳಲ್ಲಿ ಎಷ್ಟು ತೂಗಬಹುದು ಎಂದು ತಿಳಿಯಲು ತೂಕದ ಯಂತ್ರವನ್ನು ಇಲ್ಲಿಡಲಾಗಿದೆ. `ಬೆಂಗಳೂರು ಅಮೆಚೂರ್ ಅಸ್ಟ್ರಾನಮರ್ಸ್ ಎಂಬ ಸಂಸ್ಥೆ ಇಲ್ಲಿ ಪ್ರತಿ ತಿಂಗಳ ಮೊದಲ ಭಾನುವಾರ "ತಾರೆಗಳ ಬಗ್ಗೆ ತಿಳಿಯಿರಿ" ಎಂಬ ಜನಪ್ರಿಯ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ನಕ್ಷತ್ರಗಳಿರುವ ಆಕಾಶನಕ್ಷೆಗಳನ್ನು ಭಾಗವಹಿಸಿರುವರಿಗೆ ನೀಡಿ ನಕ್ಷತ್ರಪುಂಜಗಳನ್ನು, ಗ್ರಹಗಳನ್ನು ಹೇಗೆ ಗುರುತಿಸಬೇಕು ಎಂಬ ಕಾರ್ಯಕ್ರಮವು ಇಲ್ಲಿ ಜರಗುತ್ತದೆ. ಇದಲ್ಲದೆ ಆಕಾಶದ ಅಪರೂಪ ವಿದ್ಯಮಾನಗಳನ್ನು ಉದಾ : ಧೂಮಕೇತು ದರ್ಶನ, ಸೂರ್ಯಗ್ರಹಣ, ಗ್ರಹ ಸಂಕ್ರಮಣ ಮುಂತಾದವುಗಳನ್ನು ದೂರದರ್ಶಕದಲ್ಲಿ ವೀಕ್ಷಿಸಲು ಇಲ್ಲಿ ಅನುಕೂಲ ಕಲ್ಪಿಸಲಾಗಿದೆ. ಇಂಗ್ಲಿಷ್ ಜೊತೆಗೆ ಗ್ರಾಮೀಣಪ್ರದೇಶದ ವಿದ್ಯಾರ್ಥಿಗಳಿಗೆ ಅನುಲಕೂಲವಾಗುವಂತೆ ಪರಿಣಾಮಕಾರಿ ಕನ್ನಡ ಕಾರ್ಯಕ್ರಮಗಳನ್ನು ರೂಪಿಸಿರುವುದು ಜವಾಹರಲಾಲ್ ನೆಹರೂ ತಾರಾಲಯಕ್ಕೆ ವೀಕ್ಷಕರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿದೆ. (ಟಿ.ಆರ್.ಅನಂತರಾಮು)