ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಾನ್ಸನ್, ಆಂಡ್ರ್ಯೂ

ವಿಕಿಸೋರ್ಸ್ದಿಂದ

ಜಾನ್ಸನ್, ಆಂಡ್ರ್ಯೂ 1808-1875. ಅಮೆರಿಕ ಸಂಯುಕ್ತ ಸಂಸ್ಥಾನಗಳ 17ನೆಯ ಅಧ್ಯಕ್ಷ. ಜನನ 1808ರ ಡಿಸೆಂಬರ್ 29ರಂದು, ಉತ್ತರ ಕ್ಯಾರೊಲೈನ ರಾಜ್ಯದ ರಾಜಧಾನಿಯಾದ ರಾಲಿಯಲ್ಲಿ. ತಂದೆ ಚರ್ಚಿನ ಬಡ ಸೇವಕ. ಜಾನ್ಸನ್ ಚಿಕ್ಕವನಾಗಿದ್ದಾಗಲೆ ತಂದೆ ಮರಣ ಹೊಂದಿದ. 10ನೆಯ ವಯಸ್ಸಿನಲ್ಲಿ ಜಾನ್ಸನ್ ಚಿಪ್ಪಿಗನೊಬ್ಬನ ಬಳಿ ಅಭ್ಯಾಸಿಯಾಗಿ ಸೇರಿದ. ಶಾಲೆಯಲ್ಲಿ ಕ್ರಮವಾಗಿ ವ್ಯಾಸಂಗ ಮಾಡಲಿಲ್ಲ. ಕೆಲಸದ ಬಿಡುವಿನಲ್ಲಿ ಕಲಿಯಲು ಯತ್ನಿಸಿದ. 1826ರಲ್ಲಿ ತಾಯಿ ಮಲತಂದೆಯರು ಟೆನಸೀ ರಾಜ್ಯದ ಪೂರ್ವಭಾಗದಲ್ಲಿರುವ ಪರ್ವತಗಳ ನಡುವಣ ಗ್ರೀನ್‍ವಿಲ್ ನಗರದಲ್ಲಿ ನೆಲೆಸಿದರು. ಅಲ್ಲಿ ಯುವಕ ಜಾನ್ಸನ್ ಹೊಲಿಗೆ ಅಂಗಡಿ ಇಟ್ಟ. 1827ರ ಮೇ 17ರಂದು ಎಲಿಜû ಮ್ಯಾಕ್ ಕಾರ್ಡಲಳನ್ನು (1910-76) ಮದುವೆಯಾದ. ಆಕೆ ಅವನಿಗೆ ಬರೆಹ, ಲೆಕ್ಕ ಕಲಿಸಿದಳು.

ಆಂಡ್ರ್ಯೂ ಜಾನ್ಸನ್ ಯುವಕನಾಗಿದ್ದಾಗಲೇ ಕಾರ್ಮಿಕಪಕ್ಷವೊಂದನ್ನು ಸ್ಥಾಪಿಸಿದ. ಪಕ್ಷ ಅವನನ್ನು ಮೊದಲು ಗ್ರೀನ್‍ವಿಲ್ ನಗರದ ಪೌರಪ್ರಮುಖನನ್ನಾಗಿ (ಅಲ್ಡರ್‍ಮನ್), ತರುವಾಯ ಪೌರ ಅಧ್ಯಕ್ಷನನ್ನಾಗಿ ಚುನಾಯಿಸಿತು. 1835-1843ರಲ್ಲಿ ಟೆನಸೀ ರಾಜ್ಯದ ಪ್ರತಿನಿಧಿಗಳ ಸಭೆಗೆ ಎರಡು ಬಾರಿ ಸದಸ್ಯನಾಗಿ ಹಾಗೂ ಒಕ್ಕೂಟ ಸೆನೆಟ್ ಸದನಕ್ಕೆ ಒಂದು ಬಾರಿ ಸದಸ್ಯನಾಗಿ ಆಂಡ್ರ್ಯೂ ಆಯ್ಕೆಯಾದ. ಆ ಕಾಲದಲ್ಲಿ ಅವನು ಶ್ರೀಮಂತ ವಿಗ್ ಪಕ್ಷವನ್ನು ಬೊಟ್ಟು ಡೆಮೊಕ್ರಾಟ್ ಪಕ್ಷ ಸೇರಿ, ಟೆನಸೀ ಬೆಟ್ಟಗಾಡಿನ ಮತ್ತು ಸಾಮಾನ್ಯ ರೈತರ ಪ್ರತಿನಿಧಿಯಾಗಿ ನಿಂತ. 1843-1853ರಲ್ಲಿ ಟೆನಸೀ ರಾಜ್ಯದ ಪೂರ್ವ ಜಿಲ್ಲೆಯ ಪರವಾಗಿ ಕಾಂಗ್ರೆಸ್ ಸದಸ್ಯನಾದ. ಅವನನ್ನು ಚುನಾವಣೆಗಳಲ್ಲಿ ಸೋಲಿಸಲಾಗದ ವಿಗ್ ಪಕ್ಷ, ಚುನಾವಣೆಯಲ್ಲಿ ಅಕ್ರಮ ಕೈವಾಡ ನಡೆಸಿ 1853ರಲ್ಲಿ ಅವನನ್ನು ಆ ಚುನಾವಣಾಕ್ಷೇತ್ರದಿಂದ ಹೊರಡಿಸಿತು. ಜಾನ್ಸನ್ ಅಧೀರನಾಗಲಿಲ್ಲ. ತನ್ನ ಛಲ ಸಾಧಿಸಲು ಟೆನಸೀ ರಾಜ್ಯದ ಗವರ್ನರ್ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಿಂತು ಬಹುಮತದಿಂದ ಚುನಾಯಿತನಾದ. ತನ್ನ ಸಾರ್ವತ್ರಿಕ ಶಿಕ್ಷಣ ಕಾರ್ಯನೀತಿಯಿಂದಾಗಿ 1855ರಲ್ಲಿ ಮತ್ತೆ ಗವರ್ನರ್ ಆದ.

ಅನಂತರ ಅವನು ಸೆನೆಟ್ ಸದಸ್ಯನಾಗಿ ಚುನಾಯಿತನಾಗಿ (1857), ಸುಂಕಗಳ ಇಳಿತಾಯ, ನೀಗ್ರೋ ಗುಲಾಮರ ವಿರುದ್ಧ ಚಳುವಳಿಯ ದಮನ-ಇವುಗಳಿಗೆ ಬೆಂಬಲ ನೀಡಿದ. ಆದರೆ ರಾಷ್ಟ್ರದ ಪಶ್ಚಿಮಭಾಗದ ಭೂಮಿಗಳನ್ನು ಅಲ್ಲಿ ನೆಲಸಿದವರಿಗೆ ಉಚಿತವಾಗಿ ನೀಡುವ ಅಧಿನಿಯಮಕ್ಕೆ (1862) ಬೆಂಬಲ ನೀಡಿ ದಕ್ಷಿಣ ರಾಜ್ಯಗಳಲ್ಲಿ ತನ್ನ ಬೆಂಬಲಿಗರ ವಿಶ್ವಾಸವನ್ನು ಕಳೆದುಕೊಂಡ.

ಏಬ್ರಹಾಂ ಲಿಂಕನ್ 1860ರಲ್ಲಿ ರಾಷ್ಟ್ರಾಧ್ಯಕ್ಷನಾದ. ಅಮೆರಿಕದ ಅಂತರ್ಯುದ್ಧದಲ್ಲಿ (1861-65) ಆಂಡ್ರ್ಯೂ ಜಾನ್ಸನ್ ಲಿಂಕನನ ಕಾರ್ಯನೀತಿಗೆ ಬೆಂಬಲ ನೀಡಿ ನೀಗ್ರೋ ಗುಲಾಮಗಿರಿಯನ್ನು ಪ್ರತಿಭಟಿಸಿದ. ಒಕ್ಕೂಟದಿಂದ ಪ್ರತ್ಯೇಕಗೊಂಡ ಹನ್ನೊಂದು ದಕ್ಷಿಣ ರಾಜ್ಯಗಳಲ್ಲಿ ಒಂದಾದ ಟೆನಸೀ ರಾಜ್ಯವೂ ಆ ರೀತಿ ತೀರ್ಮಾನಿಸಿದಾಗ ಅದನ್ನು ಪ್ರತಿಭಟಿಸಿದ. ದಕ್ಷಿಣ ರಾಜ್ಯಗಳ ಸದಸ್ಯರ ಪೈಕಿ ಹಾಗೆ ಮಾಡಿದವನು ಜಾನ್ಸನ್ ಒಬ್ಬನೆ. ಲಿಂಕನನ ಒಕ್ಕೂಟ ಪಕ್ಷಕ್ಕೆ ಅವನು ನಿಷ್ಠನಾಗಿದ್ದ. ಅವನ ನಿಷ್ಠೆಯನ್ನು ಮೆಚ್ಚಿ ಏಬ್ರಹಾಂ ಲಿಂಕನ್ ಅವನನ್ನು ಅಂತರ್ಯುದ್ಧದ ಕಾಲದಲ್ಲಿ ಟೆನಸೀ ರಾಜ್ಯದ ಸೇನಾ ಗವರ್ನರ್ ಆಗಿ ನೇಮಿಸಿದ (1862). ಎರಡು ವರ್ಷಕಾಲ ಈ ಹುದ್ದೆಯಲ್ಲಿದ್ದು ಆ ಸಂದಿಗ್ಧ ಪರಿಸ್ಥಿತಿಯಲ್ಲಿ ದಕ್ಷತೆಯಿಂದ ಕೆಲಸಮಾಡಿದ. 1864ರ ಚುನಾವಣೆಯಲ್ಲಿ ಲಿಂಕನ್ ಮತ್ತೆ ರಾಷ್ಟ್ರಾಧ್ಯಕ್ಷನಾದ. ಆಗ ತಾನೆ ರಿಪಬ್ಲಿಕನ್ ಪಕ್ಷಕ್ಕೆ ಸೇರಿಕೊಂಡಿದ್ದ ಜಾನ್ಸನ್ ಉಪಾಧ್ಯಕ್ಷನಾದ. 1865ರಲ್ಲಿ ಲಿಂಕನ್ ಕೊಲೆಯಾದ. 6 ವಾರ ಮಾತ್ರವೇ ಉಪಾಧ್ಯಕ್ಷನಾಗಿದ್ದ ಜಾನ್ಸನ್ ಏಪ್ರಿಲ್ 15ರಂದು ರಾಷ್ಟ್ರಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ. ಯುದ್ಧಾನಂತರ ಪುನರ್ರಚನೆಯ ಕಾರ್ಯದ ಹೊಣೆ ಅವನದಾಗಿತ್ತು. ಆದರೆ ಅವನ ಕಾರ್ಯನೀತಿಯಲ್ಲಿ ಹಠಾತ್ತನೆ ಬದಲಾವಣೆ ಆಗಿದ್ದುದು ಜನತೆಗೆ ಕಂಡಿತು. ರೈತರ ಸ್ನೇಹಿತನೆನಿಸಿಕೊಂಡಿದ್ದ ಅವನು, ಮುಕ್ತರಾಗಿದ್ದ ನೀಗ್ರೋಗಳು ದಕ್ಷಿಣದಲ್ಲಿ ಪ್ರಾಮುಖ್ಯಕ್ಕೆ ಬರಲು ಇಷ್ಟಪಡಲಿಲ್ಲ. ಇಷ್ಟೇ ಅಲ್ಲದೆ, ದಕ್ಷಿಣ ರಾಜ್ಯಗಳ ಪುನರ್ರಚನೆ ಅವುಗಳಿಗೇ ಸಂಬಂಧಿಸಿದ ವಿಷಯ ಎಂಬ ನಿಲವನ್ನು ತಾಳಿದ. ಇದರಿಂದ ರಿಪಬ್ಲಿಕನ್ ಪಕ್ಷಕ್ಕೆ ನಿರಾಶೆಯುಂಟಾಯಿತು. ಕಾಂಗ್ರೆಸಿನ ಡಿಸೆಂಬರ್ 1865ರ ಅಧಿವೇಶನದಲ್ಲಿ ರಿಪಬ್ಲಿಕನ್ ಪಕ್ಷ ನೀಗ್ರೋಗಳಿಗೆ ಕೂಡಲೆ ಮತದಾನದ ಹಕ್ಕನ್ನು ನೀಡಬೇಕೆಂದು ವಾದಿಸಿತು. ಯುದ್ಧಾನಂತರ ಪುನರ್ರಚನೆಯ ಕಾಲದಲ್ಲಿ ಉದಾರಿಯೂ ನಿಷ್ಪಕ್ಷಪಾತಿಯೂ ಆದ ರಾಜಕೀಯ ಮುಖಂಡನ ಆವಶ್ಯಕತೆ ಇತ್ತು. ಜಾನ್ಸನ್ ನಿರ್ವಹಿಸಬೇಕಾದ ಕಾರ್ಯಗಳಿಗೆ ಅವನ ಚಿತ್ತವೃತ್ತಿ ವ್ಯತಿರಿಕ್ತವಾಗಿತ್ತು. ಅವನಿಗೂ ರಿಪಬ್ಲಿಕನ್ ಪಕ್ಷದ ಬಹುಮತವಿದ್ದ ಕಾಂಗ್ರೆಸಿಗೂ ನಡುವೆ ವೈಮನಸ್ಯ ಹೆಚ್ಚಿತು. ಯುದ್ಧದಿಂದ ಬಳಲಿದ್ದ ಉತ್ತರ ಮತ್ತು ದಕ್ಷಿಣ ರಾಜ್ಯಗಳಲ್ಲಿ ಅವನಿಗೆ ಆಪ್ತ ಬೆಂಬಲಿಗರು ಇಲ್ಲದೆ ಹೋಗಲು ಅವನಿಗೆ ಬಿಕ್ಕಟ್ಟಿನ ಪರಿಸ್ಥಿತಿ ಒದಗಿತು. ಅಧ್ಯಕ್ಷ ಪದವಿಗೆ ಅಕಸ್ಮಾತ್ ಏರಿದ್ದ ಅವನು ತನ್ನ ಪಕ್ಷದ ಮುಖಂಡರ ಬಗ್ಗೆ ಶಂಕೆ ಹೊಂದಿ, ಅವರ ನೆರವನ್ನು ಕಳೆದುಕೊಂಡು ಹೆಸರಿಗೆ ಮಾತ್ರ ಪಕ್ಷದ ನಾಯಕನಾದ. ಏಬ್ರಹಾಂ ಲಿಂಕನನಂತೆ ಇವನಿಗೆ ರಾಷ್ಟ್ರದ ಸಮಸ್ಯೆಗಳನ್ನು ಎದುರಿಸುವ ಅಸಾಧಾರಣ ಶಕ್ತಿಸಾಮಥ್ರ್ಯಗಳು ಇರಲಿಲ್ಲ.

1867ರ ಮಾರ್ಚ್ 2ರಂದು ಅಮೆರಿಕ ಕಾಂಗ್ರೆಸಿನ ಉಗ್ರಗಾಮಿ ರಿಪಬ್ಲಿಕನ್ ಪಕ್ಷ ಇವನ ನಿಷೇಧವನ್ನು (ವಿಟೋ) ತಳ್ಳಿಹಾಕಿ ಕಾಯಿದೆಗಳನ್ನು ಜಾರಿ ಮಾಡುವ ಕಾರ್ಯಕ್ಕಿಳಿಯಿತು. ನೀಗ್ರೋ ಮತದಾನದ ಆಧಾರದ ಮೇಲೆ ಕೈಗೊಂಡ ತೀವ್ರ ಪುನರ್ರಚನಾ ಕಾರ್ಯವೂ ಕಾಂಗ್ರೆಸ್ ಅನುಮೋದಿಸಿದ ಕಾರ್ಯಗಳಲ್ಲಿ ಒಂದು. ಕಾಂಗ್ರೆಸಿನ ತೀರ್ಮಾನವನ್ನು ಜಾನ್ಸನ್ ಜಾರಿಗೆ ಕೊಟ್ಟನಾದರೂ ಅದನ್ನು ಸಂಕುಚಿತಾರ್ಥದಲ್ಲಿ ತೆಗೆದುಕೊಂಡ. ಕಾಂಗ್ರೆಸ್ ಮತ್ತೆ ವಿಧೇಯಕ ತಂದು ಅದನ್ನು ಸ್ಪಷ್ಟೀಕರಿಸಬೇಕಾಯಿತು. ಪ್ರತಿನಿಧಿಗಳ ಸಭೆಯಲ್ಲಿ ಆಂಡ್ರ್ಯೂ ಜಾನ್ಸನನನ್ನು ಮಹಾಭಿಯೋಗಕ್ಕೆ (ಇಂಪೀಚ್‍ಮೆಂಟ್) ಗುರಿಪಡಿಸಲು ಯತ್ನ ನಡೆಯಿತು. ಆದರೆ ಅದು ಫಲಿಸಲಿಲ್ಲ. ಅಧ್ಯಕ್ಷಸ್ಥಾನದಲ್ಲಿ ಅವನು ಕೈಗೊಂಡ ಕಾರ್ಯಗಳಾವುವನ್ನೂ ಅಪರಾಧಗಳೆಂದು ಸಾಕ್ಷೀಕರಿಸಲು ಆಗಲಿಲ್ಲ. ಯುದ್ಧ ಕಾರ್ಯದರ್ಶಿ ಎಡ್ವರ್ಡ್ ಎಂ.ಸ್ಟ್ಯಾಂಟನ್ ಉಗ್ರಗಾಮಿಗಳೊಡನೆ ರಹಸ್ಯವಾಗಿ ಕೆಲಸಮಾಡುತ್ತಿರುವನೆಂಬ ಸಂಶಯದಿಂದ ಜಾನ್ಸನ್ ಅವನನ್ನು ಹುದ್ದೆಯಿಂದ ತೆಗೆದುಹಾಕಿದ. ಜಾನ್ಸನ್ ನಿಷೇಧಿಸಿದ್ದ ಉದ್ಯೋಗಾವಧಿ ವಿಧೇಯಕವನ್ನು ಕಾಂಗ್ರೆಸ್ ಅನುಮೋದಿಸಿ, ರಾಷ್ಟ್ರಾಧ್ಯಕ್ಷ ಸೆನೆಟ್ ಸಭೆಯ ಅನುಮತಿಯಿಲ್ಲದೆ ಒಕ್ಕೂಟದ ಕೆಲವು ದರ್ಜೆಯ ಅಧಿಕಾರಿಗಳನ್ನು ನೌಕರಿಯಿಂದ ತೆಗೆದುಹಾಕಬಾರದೆಂಬ ನಿಯಮ ತಂದಿತು. ಉದ್ಯೋಗಾವಧಿ ಕಾಯಿದೆಯನ್ನು ಉಲ್ಲಂಘಿಸಿದನೆಂಬ ಕಾರಣದಿಂದ ಜಾನ್ಸನನನ್ನು ಮಹಾಭಿಯೋಗಕ್ಕೆ ಗುರಿಪಡಿಸಲು ಪ್ರತಿನಿಧಿ ಸಭೆಯ ಉಗ್ರಗಾಮಿಗಳಿಗೆ ಈಗ ಒಳ್ಳೆಯ ಅವಕಾಶ ದೊರಕಿತು. ಸೆನೆಟಿನ ಮುಂದೆ ನಡೆದ ವಿಚಾರಣೆಯಲ್ಲಿ ಜಾನ್ಸನನ ವಿರುದ್ಧ ತಂದ ಆಪಾದನೆಗಳು ಬಲಹೀನವಾಗಿದ್ದ ಕಾರಣ ರಿಪಬ್ಲಿಕನ್ ಪಕ್ಷದ ಏಳು ಮಂದಿ ಸದಸ್ಯರು ಜಾನ್ಸನನ ಕಡೆಯ 12 ಮಂದಿ ಸದಸ್ಯರೊಡನೆ ಸೇರಿ ಅವನ ಖುಲಾಸೆಗೆ ಮತದಾನ ನೀಡಿದರು. ಜಾನ್ಸನನ ಮೇಲೆ ಆಪಾದನೆ ಹೊರಿಸಲು ಅಗತ್ಯವಾಗಿದ್ದ ಮೂರನೆಯ ಎರಡು ಮತಕ್ಕೆ ಒಂದು ಮತ ಮಾತ್ರ ಕಡಿಮೆಯಾಯಿತು.

1869ರ ಮಾರ್ಚ್ ತಿಂಗಳಲ್ಲಿ ಆಂಡ್ರ್ಯೂ ಜಾನ್ಸನನ ಅಧ್ಯಕ್ಷತೆಯ ಅವಧಿ ಮುಗಿಯಿತು. ರಾಜಕೀಯದಲ್ಲಿ ತಾನು ನಿರ್ದೋಷಿಯೆಂದು ಸಮರ್ಥಿಸಿಕೊಳ್ಳಲು ಅವನು ಅನಂತರ ಪ್ರಯತ್ನಿಸಿದ. ಟೆನಸೀ ರಾಜ್ಯದಲ್ಲಿ ಮತ್ತೆ ರಾಜಕೀಯಕ್ಕಿಳಿಯಲು ಅಭ್ಯರ್ಥಿಯಾಗಿ ನಿಂತು ಹಲವು ಬಾರಿ ವಿಫಲನಾಗಿ ಕೊನೆಗೆ 1875ರಲ್ಲಿ ಸೆನೆಟ್ ಸದಸ್ಯನಾದ. ಈ ಸಭೆಯ ಒಂದೇ ಒಂದು ಅಧಿವೇಶನದಲ್ಲಿ ಹಾಜರಾಗಿದ್ದ. 1875ರ ಜುಲೈ 31ರಂದು ಮೃತನಾದ. (ವಿ.ಜಿ.ಕೆ.)