ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೋಶಿ, ಉಮಾಶಂಕರ್ ಜೇಜೋಶಿಥಾಲಾಲ್

ವಿಕಿಸೋರ್ಸ್ದಿಂದ

ಜೋಶಿ, ಉಮಾಶಂಕರ್ ಜೇಜೋಶಿಥಾಲಾಲ್ ಗುಜರಾತಿ ಕವಿ, ವಿಮರ್ಶಕ, ಕಥೆಗಾರ, ಪ್ರಬಂಧಕಾರ. ಗುಜರಾತ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ. 1911ರ ಜುಲೈ 21 ರಂದು ಗುಜರಾತ್ ರಾಜ್ಯದ ಸಬರಕಾಂಠ ಜಿಲ್ಲೆಯ ಬಾಮ್ನಾದಲ್ಲಿ ಜನಿಸಿದರು. ತಂದೆ ಜೇಥಾಲಾಲ್ ಕಮಲ್‍ಜಿ. ತಾಯಿ ನವಲ್ ಬಾಯಿ. ಬಡತನದಲ್ಲಿ ಹುಟ್ಟಿ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಜೋಶಿಯವರು ತಮ್ಮ ಜೀವನದ ಆರಂಭದಲ್ಲಿ ಅನೇಕ ಕಷ್ಟಗಳನ್ನೆದುರಿಸಬೇಕಾಯಿತು. ಜೋಶಿಯವರು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. 1927ರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ, ಕೆಲಕಾಲ ಸೆರೆಮನೆಯಲ್ಲಿದ್ದರು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೂರನೆಯ ಸ್ಥಾನ ಪಡೆದರು. ಅನಂತರ ಮುಂಬಯಿ ವಿಶ್ವವಿದ್ಯಾಲಯದ ಎಂ.ಎ. ಪದವಿ ಗಳಿಸಿದರು.

ಕೇವಲ 19 ವರ್ಷ ಆಗಿದ್ದಾಗ ಜೋಶಿಯವರು ಬರೆದ ವಿಶ್ವಶಾಂತಿ ಎಂಬ ಖಂಡಕಾವ್ಯ ಅವರಿಗೆ ಒಮ್ಮಿಂದೊಮ್ಮೆಗೇ ಕೀರ್ತಿ ತಂದುಕೊಟ್ಟಿತು. ನವಜೀವನ ಕಾರ್ಯಾಲಯದಿಂದ ಪ್ರಕಟವಾದ ಈ ಕೃತಿಯಲ್ಲಿ ಜೋಶಿಯವರು ಆ ವಯಸ್ಸಿನಲ್ಲೇ ಪಡೆದಿದ್ದ ಜೀವನದರ್ಶನವೂ ಇತಿಹಾಸ ಸಾಹಿತ್ಯಗಳ ಪರಿಚಯವೂ ಅನೇಕರ ಗಮನ ಸೆಳೆದುವು. ಗುಜರಾತಿ ಸಾಹಿತ್ಯದ ಭೀಷ್ಮಪಿತಾಮಹರೆನಿಸಿಕೊಂಡಿದ್ದ ನರಸಿಂಹರಾವ್ ದಿವೇತಿಯಾ ಅವರು ಈ ಕೃತಿಯನ್ನು ಮೆಚ್ಚಿಕೊಂಡು ಲೇಖನವೊಂದನ್ನು ಬರೆದರು.

ಜೋಶಿಯವರ ಪ್ರಥಮ ಕವನಸಂಕಲನ ಗಂಗೋತ್ರಿ ಪ್ರಕಟವಾದ್ದು 1934ರಲ್ಲಿ. ಕಾಕಾಸಾಹೇಬ್ ಕಾಲೇಲಕರರಿಗೆ ಅರ್ಪಿತವಾದ ಈ ಕೃತಿಯಲ್ಲಿ ಜೋಶಿಯವರು ಅಭಿಜಾತ ಸಾಹಿತ್ಯದ ಮಹೋನ್ನತಿಯನ್ನೂ ರಮ್ಯಪರಂಪರೆಯ ಭವ್ಯತೆಯನ್ನೂ ಮನೋಜ್ಞವಾಗಿ ಹೊಂದಿಸಿದ್ದಾರೆ. ಭಾರತೀಯ e್ಞÁನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ನಿಶೀಥ ಎಂಬ ಕವನಸಂಕಲನ ಪ್ರಕಟವಾದದ್ದು 1939ರಲ್ಲಿ. ಆ ವೇಳೆಗೆ ಜೋಶಿಯವರ ಹೆಸರು ಗುಜರಾತಿನಲ್ಲಿ ಮನೆಮಾತಾಗಿತ್ತು. ವಾಸುಕಿ ಎಂಬ ಕಾವ್ಯನಾಮದಿಂದ ಅವರು ಬರೆಯುತ್ತಿದ್ದ ಸಣ್ಣ ಕಥೆಗಳು ಏಕಾಂತ ನಾಟಕಗಳು ಬಹಳ ಜನಪ್ರಿಯವಾಗಿದ್ದುವು. ಏಕಾಂತ ನಾಟಕಗಳ ಒಂದು ಸಂಕಲನವೂ ಸಣ್ಣ ಕಥೆಗಳ ಎರಡು ಸಂಕಲನಗಳೂ ಪ್ರಕಟವಾಗಿದ್ದುವು. ಆ ಸಮಯದಲ್ಲೇ ಅವರು ಪೋಲಿಷ್ ಕವಿ ಮಿಟ್ಸ್‍ಕಿಯೆವಿಚನ ಸಾನೆಟ್ಟುಗಳನ್ನು ಅನುವಾದಿಸಿದ್ದರಲ್ಲದೆ ಅನೇಕ ವಿಮರ್ಶಾತ್ಮಕ ಲೇಖನಗಳನ್ನು ಪ್ರಕಟಿಸಿದ್ದರು.

ಭಾರತದ ಪುರಾತನ ಪರಂಪರೆಯೊಂದಿಗೆ ವಿಶ್ವಪ್ರಜ್ಞೆಯನ್ನೂ ¨Àüವಿಷ್ಯದ ಆಶಾವಾದವನ್ನೂ ಗಾಂಧಿಯವರ ಮಾನವೀಯ ದೃಷ್ಟಿಯನ್ನೂ ಮೈಗೂಡಿಸಿಕೊಂಡಿರುವ ಜೋಶಿಯವರ ನಿಶೀಥ್ ಕವನಸಂಕಲನ ಗುಜರಾತಿ ಕಾವ್ಯದ ಬೆಳವಣಿಗೆಯ ಒಂದು ಮುಖ್ಯ ಘಟ್ಟವನ್ನು ಸೂಚಿಸುತ್ತದೆ. ಆ ಸಂಕಲನದ ಮೊದಲ ಕವನದ ಹೆಸರೂ ನಿಶೀಥ್. ಆ ಸಂಕಲನದಲ್ಲಿ ಪ್ರೇಮಗೀತೆಗಳೂ ಪ್ರಕೃತಿಸೌಂದರ್ಯದ ವರ್ಣನೆಗಳೂ ಇವೆ. ಕವಿ ಅವುಗಳಲ್ಲಿ ತಮ್ಮ ಸಾಕ್ಷೀ ಪ್ರಜ್ಞೆಗೆ ಅಭಿವ್ಯಕ್ತಿ ನೀಡಿದ್ದಾರೆ. ಸಂಸ್ಕøತದ ಹಾಗೂ ಗುಜರಾತಿ ಛಂದಸ್ಸಿನ ವಿವಿಧ ಪ್ರಯೋಗಗಳು ಅಲ್ಲಿವೆ. ಶೈಲಿ ಸಮಯೋಚಿತವಾದ್ದು. ಗಂಭೀರ ಶೈಲಿಯನ್ನೂ ಆಡುಮಾತಿನ ಚೆಂದವನ್ನೂ ಅಲ್ಲಿ ಕಾಣಬಹುದು. ಸಂಗೀತ ಗುಣದಿಂದ ಮೈತುಂಬಿ ಬಂದಿರುವ ಹಲವು ಕವನಗಳು ಕನ್ನಡದ ಕವಿ ಬೇಂದ್ರೆಯವರ ಪ್ರಯೋಗಗಳನ್ನು ನೆನಪಿಗೆ ತರುತ್ತವೆ.

ಮುಂಬಯಿಯ ವಿಲೆ ಪಾರ್ಲೆಯಲ್ಲಿ ಉಪಾಧ್ಯಾಯವೃತ್ತಿಯನ್ನಾರಂಭಿಸಿ ಸಿಡೆನ್‍ಹ್ಯಾಂ ಕಾಲೇಜಿನಲ್ಲಿ ಗುಜರಾತಿಯ ಒಪ್ಪೊತ್ತಿನ ಅಧ್ಯಾಪಕರಾಗಿ ಕೆಲಸ ಮಾಡಿದ (1937-1939) ಉಮಾಶಂಕರ ಜೋಶಿಯವರು ಅನಂತರ ಅಹಮದಾಬಾದಿನ ಗುಜರಾತ್ ವಿದ್ಯಾಸಭೆಯ ಸ್ನಾತಕೋತ್ತರ ಅಧ್ಯಾಪಕರಾದರು (1939-1947). ಈ ಸಮಯದಲ್ಲಿ ಜೋಶಿಯವರಿಂದ ಎರಡು ವಿದ್ವತ್ಪೂರ್ಣ ಕೃತಿಗಳು ಪ್ರಕಟವಾದುವು. ಆಖೋ : ಏಕ್ ಆಧ್ಯಯನ ಎಂಬುದು ಒಂದು. ಇದು ಗುಜರಾತಿನ ಪ್ರಸಿದ್ಧ ಕವಿ ಆಖೋನನ್ನು ಕುರಿತ ಒಂದು ಅಧ್ಯಯನ. ಪುರಾಣೋಮನ್ ಗುಜರಾತ್ (ಪುರಾಣಗಳಲ್ಲಿ ಗುಜರಾತು) ಎಂಬುದು ಇನ್ನೊಂದು. ಇವೆರಡೂ ಈ ಕ್ಷೇತ್ರಗಳಲ್ಲಿ ಮಹತ್ತ್ವದ ಕೃತಿಗಳೆನಿಸಿಕೊಂಡಿವೆ.

ಈ ಕಾಲದಲ್ಲಿ ಜೋಶಿಯವರ ಕಾವ್ಯರಚನೆಯೂ ಮುಂದುವರಿಯಿತು. ಪ್ರಾಚೀನ ಎಂಬುದು 1944ರಲ್ಲಿ ಪ್ರಕಟವಾದ ಏಳು ನೀಳ್ಗವನಗಳ ಸಂಕಲನ, ಇವುಗಳಲ್ಲೂ ಮಹಾಪ್ರಸ್ಥಾನದ ಕವನಗಳಲ್ಲೂ ಪುರಾಣದ ಸಂಗತಿಗಳನ್ನು ಹೊಸ ದೃಷ್ಟಿಯಿಂದ ನೋಡುವ ಪ್ರಯತ್ನ ನಡೆದಿದೆ. ಉಮಾಶಂಕರರ ಉನ್ನತ ಪ್ರತಿಭೆ ಇಲ್ಲಿ ಮಿಂಚಿದೆ. ಕೆಲವೆಡೆಗಳಲ್ಲಂತೂ ಜೋಶಿಯವರು ಮಹಾಕಾವ್ಯದ ಔನ್ನತ್ಯವನ್ನು ಸಾಧಿಸಿದ್ದಾರೆ. ಇವರ ಇತರ ಕವನಸಂಕಲನಗಳು ಆತಿಥ್ಯ (1946) ವಸಂತ ವರ್ಷಾ (1954) ಮತ್ತು ಅಭಿe್ಞÁನ (1969). ಧಾರಾವಸ್ತ್ರ (1981) ಮತ್ತ ಸಪ್ತಪದಿ (1981). ಅವರ `ಸಮಗ್ರ ಕವಿತಾ (1981) ಗುಜರಾತಿ ಭಾಷೆಯ ಮದುವೆಯ ಸಮಗ್ರ ಕವನ ಸಂಗ್ರಹ. ಜೋಶಿಯವರ ವಿಮರ್ಶಾತ್ಮಕ ಕೃತಿಗಳು ಸಮ ಸಂವೇದನ್, ನಿರೀಕ್ಷಾ ಮತ್ತು ಕವಿನೀ ಸಾಧನಾ.

ಭಾರತದ ಇತರ ಭಾಷೆಗಳಂತೆ ಗುಜರಾತಿಯಲ್ಲೂ ನಡೆಯುತ್ತಿರುವ ಹೊಸ ಪ್ರಯೋಗಗಳನ್ನು ಜೋಶಿಯವರ ಹಲವು ಕವನಗಳಲ್ಲಿ ಕಾಣಬಹುದು. ಅವರ ಛಿನ್ನ ಭಿನ್ನ ಛುನ್ ಮತ್ತು ಮಾನೆ ಮೂರ್ದನಿ ವಾಸ್ ಆವೆ ಎಂಬವು ಇಂಥ ಎರಡು ಕವನಗಳು. ಶಾಕುಂತಲ ಮತ್ತು ಉತ್ತರರಾಮಚರಿತ ಕೃತಿಗಳ ಅನುವಾದಗಳು ಉತ್ತಮವಾದವು.

ಗುಜರಾತ್ ವಿಶ್ವವಿದ್ಯಾಲಯದಲ್ಲಿ ಗುಜರಾತಿ ಪ್ರಾಧ್ಯಾಪಕರಾಗಿ, ಭಾಷಾಭವನದ ನಿರ್ದೇಶಕರಾಗಿದ್ದ (1954-1970) ಜೋಶಿಯವರು 1966-1972ರಲ್ಲಿ ಆ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. 1970ರಲ್ಲಿ ರಾಜ್ಯಸಭೆಗೆ ನಾಮಕರಣ ಹೊಂದಿದರು. ಅಲ್ಲದೆ ಇವರು ಸಾಹಿತ್ಯ ಅಕಾಡೆಮಿಯ ಕಾರ್ಯ ನಿರ್ವಾಹಕ ಮಂಡಲಿಯ ಸದಸ್ಯರೂ ಭಾರತೀಯ ಪಿ.ಇ.ಎನ್. ಸಂಸ್ಥೆಯ ಉಪಾಧ್ಯಕ್ಷರೂ ಆಗಿದ್ದರು.

ಜೋಶಿಯವರು ಅನೇಕ ಪದಕಗಳನ್ನೂ ಪ್ರಶಸ್ತಿಗಳನ್ನೂ ಪಡೆದಿದ್ದಾರೆ ರಣಜಿತ್ ರಾಮ್ ಸುವರ್ಣ ಪದಕ (1939), ಮಹೀದಾ ಪ್ರಶಸ್ತಿ (1944), ನರ್ಮದ್ ಸುವರ್ಣ ಪದಕ (1945), ಉಮಾ ಸ್ನೇಹರಶ್ಮಿ ಪ್ರಶಸ್ತಿ (1966), ನಾನಾಲಾಲ್ ಕವಿ ಕಾವ್ಯ ಪ್ರಶಸ್ತಿ (1968), ಭಾರತೀಯ e್ಞÁನಪೀಠ ಪ್ರಶಸ್ತಿ (1968) (ಕುವೆಂಪು ಅವರೊಂದಿಗೆ) ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1973). ಜೋಶಿಯವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ 1930ರಲ್ಲೂ 1932ರಲ್ಲೂ ಕಾರಾಗೃಹ ಶಿಕ್ಷೆಯನ್ನನುಭವಿಸಿದ್ದರು.

ಜೋಶಿಯವರ ಪತ್ನಿ ಜ್ಯೋತ್ಸ್ನಾ. ಇವರಿಗೆ ಇಬ್ಬರು ಪುತ್ರಿಯರು. (ಎಚ್.ಎಸ್.ಕೆ.)

ಗುಜರಾತಿ ಸಾಹಿತ್ಯಕ್ಕೆ ಜೋಶಿಯವರ ಕೊಡುಗೆ ಅಮೂಲ್ಯವಾದದ್ದು. ಹಲವು ಸಾಹಿತ್ಯಪ್ರಕಾರಗಳು ಶ್ರೇಷ್ಠ ಕೃತಿಗಳನ್ನು ರಚಿಸಿದರೂ ಸಂಪ್ರದಾಯದಲ್ಲಿ ಶ್ರೇಷ್ಠ ಕವನಗಳನ್ನು ರಚಿಸಿದ ಈ ಸಾಹಿತಿ ಕುತೂಹಲಕರ ಪ್ರಯೋಗಗಳನ್ನು ಮಾಡಿದರು. ಅವರ ಮೊದಲನೆಯ ಕವನವೇ ಬಲವಂತರಾಯ್ ಠಾಕೂರರು ಹೊಸದಾಗಿ ಮೂಡಿಸಿದ್ದ ಸುನೀತ ಪ್ರಕಾರದಲ್ಲಿ `ಪ್ರಾಚೀನ ಮತ್ತು `ಮಹಾಪ್ರಸ್ಮಾನ ಕವನಗಳಲ್ಲಿ ಪೌರಾಣಿಕ ವಸ್ತುಗಳನ್ನು ಆರಿಸಿಕೊಂಡು ಸಂಭಾಷಣೆಯ ತಂತ್ರವನ್ನು ಬಳಸಿದರು. ಕಾಳಿದಾಸನ `ಶಾಕುಂತಳಾ ಮತ್ತು ಭವಭೂತಿಯ `ಉತ್ತರರಾಮ ಚರಿತಗಳನ್ನು ಗುಜರಾತಿಗೆ ಅನುವಾದಿಸಿದರು ಪೊಲೆಂಡಿನ ಕವನಗಳನ್ನು ಅನುವಾದಿಸಿ `ಗುಲ್-ಎ-ಪೋಲೆಂಡ್ ಎನ್ನುವ ಸಂಗ್ರಹವನ್ನು ಪ್ರಕಟಿಸಿದರು (1939) 1947ರ ಜನವರಿಯಲ್ಲಿ `ಸಂಸ್ಕøತಿ' ಎನ್ನುವ ಪತ್ರಿಕೆಯನ್ನು ಪ್ರಾರಂಭಿಸಿ ಗುಜರಾತಿನ ಸಾಹಿತ್ಯ-ಸಂಸ್ಕøತಿ ಜಗತ್ತಿನಲ್ಲಿ ಅದನ್ನೊಂದು ಶಕ್ತಿಯನ್ನಾಗಿ ಮಾಡಿದರು. 47 ವರ್ಷಗಳ ಕಾಲ ಇದರ ಸಂಪಾದಕರು, ಈ ಪತ್ರಿಕೆಯಲ್ಲಿ ಪ್ರಕಟವಾದ ಸಂಪಾದಕೀಯಗಳನ್ನು ಲೇಖನಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗಿದೆ `ಪಾರ್ಕನ್ ಜಿನೈನ್ (1940) ಎನ್ನುವ ಕಾದಂಬರಿಯನ್ನು `ಗೋಷ್ಠಿ (1951) ಎನ್ನುವ ಪ್ರಬಂಧ ಸಂಗ್ರಹವನ್ನು ಪ್ರಕಟಿಸಿದರು. `ಸಹಸಂವೇದನ್ (1948), `ಅಭಿರುಚಿ' (1950), `ಶೈಲಿ ಆನ್ ಸ್ವರೂಪ್ (1960), `ನಿರೀಕ್ಷಾ (1960)', ಕಪಿನಿ ಸಾಧನ (1972), ಶಬ್ದನಿ ಶಕ್ತಿ (1982) ಕಪಿನಿ ಶ್ರದ್ಧಾ (1972) ಶಬ್ದನಿ ಶಕ್ತಿ (1982) ಇವು ಅವರ ವಿಮರ್ಶಾ ಗ್ರಂಥಗಳು, ಅವರು ಆಧುನಿಕ ಗುಜರಾತಿ ಸಾಹಿತ್ಯದ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರು. `ಕಪಿನಿ ಶ್ರದ್ಧಾ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು (1973). ಉಮಾಶಂಕರ ಜೋಶಿ ಅವರು 1978ರಿಂದ 1983ರ ವರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು. 1986ರಲ್ಲಿ ಈ ಅಕಾಡೆಮಿಯ ಫಿಲೋಷಿಪ್ ಅವರಿಗೆ ಸಂದಿತು. ಏಳು ವಿಶ್ವವಿದ್ಯಾನಿಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿವೆ. (ಎಲ್.ಎಸ್.ಎಸ್.)