ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟಾಲ್ಮೂಡ್

ವಿಕಿಸೋರ್ಸ್ದಿಂದ

ಟಾಲ್ಮೂಡ್ ಯಹೂದ್ಯರ ಮತಗ್ರಂಥ. ಹೀಬ್ರೂ ಭಾಷೆಯಲ್ಲಿ ಈ ಮಾತಿಗೆ ಪಾಂಡಿತ್ಯ ಎಂದು ಅರ್ಥ. ಇದರಲ್ಲಿ ಯಹೂದಿ ಜನರ ಸಾಮಾಜಿಕ ಮತ್ತು ಮತೀಯ ಕಟ್ಟು ಕಟ್ಟಲೆಗಳನ್ನು ನಿರೂಪಿಸಲಾಗಿದೆ. ವಾಚಿಕವಾಗಿ ತಲೆಮಾರಿನಿಂದ ತಲೆಮಾರಿಗೆ ನಡೆದುಬಂದಿರುವ ನೀತಿಧರ್ಮಗಳನ್ನು ಟಾಲ್ಮೂಡ್ ಒಳಗೊಂಡಿದೆ. ಮಿಷ್‍ನ ಎಂಬುದು ಟಾಲ್ಮೂಡಿನ ಒಂದು ಭಾಗ. ಇದು ಹಿರಿಯರ ಬೋಧನೆಗಳನ್ನು ಒಳಗೊಂಡಿದೆ. ಮಿಷ್‍ನ ಎಂದರೆ ಪದೇಪದೇ ಹೇಳುವುದು ಎಂದು ಅರ್ಥ. ಈ ಭಾಗದ ರಚನೆ ಕ್ರಿ.ಶ.ಸು. 200ರಲ್ಲಿ ಆಯಿತೆಂದು ಹೇಳಲಾಗಿದೆ. ಮಿಷ್‍ನ ಭಾಗದ ಮೇಲೆ ಗಮ್ಯಾರ ಎಂಬ ಭಾಷ್ಯವಿದೆ. ಈ ಭಾಷ್ಯಕ್ಕೆ ಎರಡು ಪಾಠಾಂತರಗಳಿವೆ. ಒಂದು, ಪ್ಯಾಲಸ್ಟೇನಿನಲ್ಲಿ ಬರೆದಿದ್ದು ; ಇದರ ಕಾಲ ಕ್ರಿ.ಶ.ಸು. 4ನೆಯ ಶತಮಾನ. ಮತ್ತೊಂದು, ಬ್ಯಾಬಿಲೋನಿಯಾದಲ್ಲಿ ಬರೆದಿದ್ದು; ಇದರ ಕಾಲ ಕ್ರಿ..ಶ.ಸು 5ನೆಯ ಶತಮಾನ. (ಎಸ್.ಎಸ್.ಆರ್.; ಬಿ.ಸಿ.ಪಿ.)

ಒಟ್ಟಾರೆ, ಟಾಲ್ಮೂಡ್ ಗ್ರಂಥ, ಕ್ರಿ..ಶ. 3ನೆಯ ಶತಮಾನದಿಂದ ಆರಂಭವಾಗಿ 5ನೆಯ ಶತಮಾನದವರೆಗಿನ ಯಹೂದಿ ಮತತತ್ತ್ವಜ್ಞಾನಿಗಳ, ತಾತ್ತ್ವಿಕ ಪ್ರತಿಕ್ರಿಯೆಗಳನ್ನು ಪ್ರತಿನಿಧಿಸುತ್ತದೆ.

ಹಳೆ ಒಡಂಬಡಿಕೆಯಲ್ಲಿ ಉಲ್ಲೇಖಿಸಿರುವ ಧರ್ಮದ ಬೆಳೆವಣಿಗೆಯನ್ನು, ಟಾಲ್ಮೂಡ್ ಇನ್ನಾವುದೇ ಯಹೂದ್ಯ ಗ್ರಂಥಕ್ಕಿಂತ ಚೆನ್ನಾಗಿ ಪ್ರತಿನಿಧಿಸುತ್ತದೆ ; ಕೆಲವು ಮುಖ್ಯ ವಿಷಯಗಳಲ್ಲಂತೂ ಹಳೆ ಒಡಂಬಡಿಕೆಯನ್ನು ಮೀರಿ ಇನ್ನೂ ಮುಂದೆ ಹೋಗುತ್ತದೆ. ಟಾಲ್ಮೂಡ್, ಜೀವನಕ್ಕೆ ನೇರವಾಗಿ ಸಂಬಂಧಸಿದೆ. ಲೌಕಿಕ ಮತ್ತು ಧಾರ್ಮಿಕ ಭಾವನೆಗಳ ನಡುವೆ ಇದು ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. ಆದರೂ ಇದು ವಿಧಿ ಸಂಸ್ಕಾರಗಳಿಗೆ ಅನಾವಶ್ಯಕವಾದ ಪ್ರಾಮುಖ್ಯ ಕೊಟ್ಟಿದೆ. ಹೀಗಿದ್ದರೂ ಇದರ ಮಹತ್ತ್ವದ ತತ್ತ್ವಗಳಿಗೆ ಧಕ್ಕೆ ಏನೂ ಒದಗಿಲ್ಲ ಎಂದೇ ಹೇಳಬೇಕು. ಪ್ರತಿಯೊಬ್ಬ ಮಾನವನಲ್ಲೂ ದೇವರಿದ್ದಾನೆ. ಅವನನ್ನು ಪೂಜಾವೇಳೆಗಳಲ್ಲಿ ಮಾತ್ರ ಅಲ್ಲದೆ, ವೇಳೆ ಅವೇಳೆ ಎನ್ನದೆ ಸರ್ವಕಾಲವೂ ಪೂಜಿಸಬೇಕು ; ಮನೆಯೇ ಪವಿತ್ರ ದೇಗುಲ-ಎಂದು ಈ ಗ್ರಂಥ ಬೋಧಿಸುತ್ತದೆ.

ಟಾಲ್ಮೂಡಿನ ಪ್ರಾಮಾಣ್ಯವನ್ನೂ ಮತಸುಧಾರಕರು ಪ್ರಶ್ನಿಸಿದರೂ ಅದರ ಸ್ಫೂರ್ತಿದಾಯಕ ಉಪದೇಶಗಳನ್ನು ನಿರಾಕರಿಸಿಲ್ಲ. ಟಾಲ್ಮೂಡಿಗೆ ಆ ಮತದ ಸುಧಾರಕರಿಂದಲೂ ವಿಶೇಷ ಗೌರವ ದೊರೆತಿದೆ. ಜೀವನದ ಗುರಿಯನ್ನು ಸಾಕ್ಷಾತ್ಕರಿಸಿಕೊಳ್ಳಲು, ಮಾನವ ದೇವರ ಮರೆಹೊಗಬೇಕೆಂಬುದನ್ನು ಟಾಲ್ಮೂಡ್ ಸ್ಪಷ್ಟ ವಾಕ್ಯಗಳಲ್ಲಿ ಹೇಳುತ್ತದೆ.

ಟಾಲ್ಮೂಡಿನಲ್ಲಿ ವಿಷಯ ವೈವಿಧ್ಯವಿದೆ. ಮಾನವನ ಪ್ರತಿಯೊಂದು ಚಟುವಟಿಕೆಯನ್ನೂ ಅದು ಚರ್ಚಿಸುತ್ತದೆ. ಅದರ ವ್ಯಾಪ್ತಿ ಬಹಳ ವಿಶಾಲವಾಗಿದೆ. ಅದನ್ನು ಚೆನ್ನಾಗಿ ಓದಿದವನಿಗೆ ಅನೇಕ ಶಾಖೆಗಳ ಜ್ಞಾನ ದೊರೆಯುತ್ತದೆ. ಓದುಗನ ಮನಸ್ಸನ್ನು ತನ್ನ ಕುತೂಹಲಕರ ವಿಷಯಗಳಿಂದ ಸದಾ ಹಿಡಿದು ಇಡುವುದು ಈ ಗ್ರಂಥದ ವಿಶೇಷ ಗುಣ. ಯಹೂದಿಗಳ ಮಾನಸಿಕ ಬೆಳೆವಣಿಗೆಯ ಮೇಲೆ ಟಾಲ್ಮೂಡಿನ ಪ್ರಭಾವ ಅಪಾರ.

ಮೇಲೆ ಹೇಳಿದ ಕಾರಣಗಳಿಂದ ಟಾಲ್ಮೂಡ್ ಗ್ರಂಥದ ಶ್ರೇಷ್ಟತೆ ಎಷ್ಟೆಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದಲೇ ಮೋಸಸ್ ಮೈಮೊನಿಡೀಸ್ ಮತ್ತು ಜೋಸೆಫ್ ಕ್ಯಾರೋ ಎಂಬ ಪ್ರಸಿದ್ಧ ಯಹೂದಿ ಧರ್ಮಾಧಿಕಾರಿಗಳು ಬಂದ ಮೇಲೂ ಅದು ತನಗೆ ಮೊದಲಿದ್ದ ಗೌರವವನ್ನೇ ಉಳಿಸಿಕೊಂಡಿದೆ.

ಪ್ರತಿಯೊಬ್ಬ ಯಹೂದಿಯೂ ಟಾಲ್ಮೂಡಿನ ಭಾಷಾಶೈಲಿ, ಅದರ ಕವಿತಾ ಶಕ್ತಿ, ಹಾಸ್ಯದೃಷ್ಟಿ, ನೀತಿಕತೆಗಳು-ಮುಂತಾದವನ್ನು ಹಾಡಿ ಹರ್ಷಿಸುತ್ತಾನೆ. ಆಧುನಿಕ ಯಹೂದ್ಯ ಧರ್ಮದಲ್ಲಿ ನಾವು ಕಾಣುವ ಅನುಭಾವಿಗಳಿಗೆ ಟಾಲ್ಮೂಡೇ ತಾಯಿಬೇರು. ಅದರ ಸುಂದರವಾದ ವಿಷಯಗಳ ಬಗ್ಗೆ ಸಂಪುಟಗಟ್ಟಲೆ ಬರೆದಿದ್ದಾರೆಂದೂ ಇನ್ನೂ ಬರೆಯಬಹುದೆಂದೂ ಯಹೂದಿಗಳು ಬಹು ಹೆಮ್ಮೆಯಿಂದ ಅದರ ವ್ಯಾಪ್ತಿಯನ್ನು ಹೊಗಳುತ್ತಾರೆ.

ಆದರೂ ಟಾಲ್ಮೂಡ್ ಗ್ರಂಥ ಧರ್ಮಾಂಧರ ವಕ್ರದೃಷ್ಟಿಯಿಂದ ಬಿಡುಗಡೆ ಪಡೆಯಲಿಲ್ಲ. ಪೋಲೆಂಡಿನಲ್ಲಿ 1757ರಲ್ಲಿ ಟಾಲ್ಮೂಡಿನ ಅನೇಕ ನಕಲುಗಳನ್ನು, ಅದು ದೋಷಮಯವಾಗಿದೆ ಎಂಬ ಕಾರಣದಿಂದ ವಿಧ್ಯುಕ್ತವಾಗಿ ಸುಡಲಾಯಿತೆಂದು. ತಿಳಿದುಬರುತ್ತದೆ. ಟಾಲ್ಮೂಡ್ ಮೇಲಿನ ದೋಷಾರೋಪಣೆಗಳು ಸತ್ಯಕ್ಕೆ ದೂರವೆಂದೂ ಅದರಲ್ಲಿ ದೋಷಗಳಿಗಿಂತ ಗುಣಗಳೇ ವಿಪುಲವೆಂದೂ ಯಹೂದಿ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. (ಎಸ್.ಎಸ್.ಆರ್.)