ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತುರುವೇಕೆರೆ

ವಿಕಿಸೋರ್ಸ್ದಿಂದ

ತುರುವೇಕೆರೆ ತುಮಕೂರು ಜಿಲ್ಲೆಯಲ್ಲಿ ತಿಪಟೂರು ಉಪವಿಭಾಗಕ್ಕೆ ಸೇರಿದ ಒಂದು ತಾಲ್ಲೂಕು ಕೇಂದ್ರ ಮತ್ತು ಪಟ್ಟಣ. ದಕ್ಷಿಣದಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು, ನೈಋತ್ಯದಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕು, ಪಶ್ಚಿಮ ಮತ್ತು ಉತ್ತರದಲ್ಲಿ ತಿಪಟೂರು ತಾಲ್ಲೂಕು, ಈಶಾನ್ಯ ಮತ್ತು ಪೂರ್ವದಲ್ಲಿ ಗುಬ್ಬಿ ತಾಲ್ಲೂಕು, ಆಗ್ನೇಯದಲ್ಲಿ ಕುಣಿಗಲ್ ತಾಲ್ಲೂಕು-ಇವು ಈ ತಾಲ್ಲೂಕಿನ ಮೇರೆಗಳು. ತಾಲ್ಲೂಕಿನಲ್ಲಿ ತುರುವೇಕೆರೆ. ದಂಡಿನಶಿವರ, ಮಾಯಸಂದ್ರ ಮತ್ತು ದಬ್ಬೆಘಟ್ಟ ಹೋಬಳಿಗಳಿವೆ. ತುರುವೇಕೆರೆ ಪಟ್ಟಣವೂ 222 ಗ್ರಾಮಗಳೂ ಇರುವ ಈ ತಾಲ್ಲೂಕಿನ ವಿಸ್ತೀರ್ಣ 770.6ಚ.ಕಿಮೀ. (297 .5 ಮೈ.), ಜನಸಂಖ್ಯೆ 1,73,165 (2001).

ತಾಲ್ಲೂಕು ಅಲೆಯಲೆಯಾಗಿ ಏರಿಳಿಯುವ ಮೈದಾನದಿಂದ ಕೂಡಿದೆ. ಅಲ್ಲಲ್ಲಿ ಎತ್ತರವಾಗಿ ದಟ್ಟವಾಗಿ ಬೆಳೆದ ಮರಗಳ ತೋಪುಗಳುಂಟು. ಬಂಡೆಗಳೂ ಗುಡ್ಡಗಳೂ ವಿರಳ. ತಾಲ್ಲೂಕಿನ ನೆಲ ಸ್ಥೂಲವಾಗಿ ದಕ್ಷಿಣಕ್ಕೆ ಇಳಿಜಾರಾಗಿದೆ. ಇಲ್ಲಿ ಜೀವನದಿಗಳು ಯಾವುವೂ ಇಲ್ಲ. ತುಮಕೂರು ತಾಲ್ಲೂಕಿನ ದೇವರಾಯನ ದುರ್ಗದಲ್ಲಿ ಹುಟ್ಟುವ ಶಿಂಷಾ ನದಿ ನೈಋತ್ಯಾಭಿಮುಖವಾಗಿ ಗುಬ್ಬಿ ತಾಲ್ಲೂಕಿನ ಮೂಲಕ ಹರಿದು, ತುರುವೇಕೆರೆ ತಾಲ್ಲೂಕನ್ನು ಅದರ ಪೂರ್ವಭಾಗದಲ್ಲಿ ಪ್ರವೇಶಿಸಿ, ದಕ್ಷಿಣಾಭಿಮುಖವಾಗಿ ಮುಂದುವರಿದು, ತುರುವೇಕೆರೆಗೆ ನೀರುಣಿಸುವ ನಾಗಹೊಳೆಯನ್ನು ಕಲ್ಲೂರಿನ ಸಮೀಪದಲ್ಲಿ ಕೂಡಿಕೊಂಡು ಕುಣಿಗಲ್ ತಾಲ್ಲೂಕಿಗೆ ಹರಿಯುತ್ತದೆ. ತುರುವೇಕೆರೆ ತಾಲ್ಲೂಕಿನಲ್ಲಿ ಈ ನದಿ ಹರಿಯುವ ದೂರ ಸು. 14 ಕಿಮೀ. ತಾಲ್ಲೂಕಿನ ವಾಯುಗುಣ ಒಟ್ಟಿನಲ್ಲಿ ಹಿತಕರ, ವರ್ಷವನ್ನು ನಾಲ್ಕು ಋತುಗಳಾಗಿ ವಿಂಗಡಿಸಬಹುದು. ಡಿಸೆಂಬರ್‍ನಿಂದ ಫೆಬ್ರುವರಿಯ ವರೆಗೆ ಶುಭ್ರ ಶುಷ್ಕ ಹವೆ. ಮಾರ್ಚ್‍ನಿಂದ ಮೇ ವರೆಗೆ ಬಿಸಿಲು ಅಧಿಕ. ಜೂನ್‍ನಿಂದ ಸೆಪ್ಟೆಂಬರ್‍ವರೆಗೆ ಮುಂಗಾರಿನ ಕಾಲ. ಅಕ್ಟೋಬರ್‍ನಿಂದ ನವೆಂಬರ್‍ವರೆಗಿನದು ಮುಂಗಾರಿನ ಅನಂತರದ ಕಾಲ. ಈ ಕಾಲದಲ್ಲೂ ಮಳೆಯಾಗುತ್ತದೆ. ವಾರ್ಷಿಕ ಸರಾಸರಿ ಮಳೆ 708 .9 ಮಿಮೀ.

ತಾಲ್ಲೂಕಿನಲ್ಲಿ ನೀರಾವರಿಗೆ ಒದಗಿರುವ ಕೆರೆಗಳ ಸಂಖ್ಯೆ 77; ಬಾವಿಗಳು 407 (1966-67). ನಾಲೆಗಳಿಲ್ಲ. ತಾಲ್ಲೂಕಿನಲ್ಲಿ 54,200 ಎಕರೆ ಕೆಂಪು ಮಣ್ಣಿನ ಭೂಮಿ; 10,000 ಎಕರೆ ದಪ್ಪ ಮರಳಿನ ನೆಲ; 10,500 ಎಕರೆ ಮರಳುಬೆರೆತ ಫಲವತ್ತಾದ ಜೇಡಿಮಣ್ಣಿನ ಜಮೀನು. 75,489 ಎಕರೆ ನೆಲ ಕೆಂಪು ಜೇಡಿಮಣ್ಣಿನಿಂದ ಕೂಡಿದ್ದು; 1,500 ಎಕರೆ ಕಪ್ಪುಮಣ್ಣಿನ ಭೂಮಿ. ಈ ತಾಲ್ಲೂಕಿನ ವ್ಯವಸಾಯಯೋಗ್ಯ ಭೂಮಿಯಲ್ಲಿ 1,00,598 ಎಕರೆ ನೆಲ ಸಾಗುವಳಿಗೆ ಒಳಪಟ್ಟಿತ್ತು (1955-66). 1,383 ಎಕರೆಗಳಲ್ಲಿ ಅರಣ್ಯವೂ 43,241 ಎಕರೆಗಳಲ್ಲಿ ಹುಲ್ಲುಗಾವಲೂ ಇದ್ದುವು. 1966-67ರಲ್ಲಿ 51,628 ಎಕರೆ ನೆಲದಲ್ಲಿ ರಾಗಿ, 4,585 ಎಕರೆಗಳಲ್ಲಿ ಬತ್ತ, 4,900 ಎಕರೆಗಳಲ್ಲಿ ಹಾರಕ, 258 ಎಕರೆಗಳಲ್ಲಿ ನವಣೆ, 4,554 ಎಕರೆಗಳಲ್ಲಿ ಹುರುಳಿ, 2,984 ಎಕರೆಗಳಲ್ಲಿ ಅವರೆ, 2,038 ಎಕರೆಗಳಲ್ಲಿ ತೊಗರಿ, 358 ಎಕರೆಗಳಲ್ಲಿ ನೆಲಗಡಲೆ, 80 ಎಕರೆಗಳಲ್ಲಿ ಕಬ್ಬು ಬೆಳೆಯುತ್ತಿದ್ದುವು. ತೆಂಗಿನ ತೋಟಗಳಿಗೆ ಮೀಸಲಾದ ಜಮೀನು 14,275 ಎಕರೆ. ತಾಲ್ಲೂಕಿನಲ್ಲಿ ಪಶುಪಾಲನೆಗೂ ಗಮನ ನೀಡಲಾಗಿದೆ. ತುರುವೇಕೆರೆಯಲ್ಲಿ ತಾಲ್ಲೂಕು ಮಟ್ಟದ ಪಶುವೈದ್ಯಾಲಯವೂ ಮಾಯಸಂದ್ರ, ತಂಡಗ ಮತ್ತು ದಂಡಿನಶಿವರಗಳಲ್ಲಿ ಗ್ರಾಮಮಟ್ಟದ ಪಶುವೈದ್ಯಾಲಯಗಳೂ ಇವೆ. ತುರುವೇಕೆರೆಯಲ್ಲೂ ತಾಲ್ಲೂಕಿನ ಇತರ ಕಡೆಗಳಲ್ಲೂ ಮೀನುಸಾಕಣೆ ನಡೆಯುತ್ತದೆ. ತಾಲ್ಲೂಕಿನ ದೊಡ್ಡ ಕೈಗಾರಿಕೆಯೆಂದರೆ ಸಿಮೆಂಟ್ ತಯಾರಿಕೆ. ದಂಡಿನ ಶಿವರ ಹೋಬಳಿಯ ಅಮ್ಮಸಂದ್ರದ ಈ ಕಾರ್ಖಾನೆ ತುರುವೇಕೆರೆ ಪಟ್ಟಣದಿಂದ 17 ಕಿ.ಮೀ.ದೂರದಲ್ಲಿದೆ. ವಿದ್ಯುತ್ತು, ಕಚ್ಚಾಸಾಮಗ್ರಿ, ಕಾರ್ಮಿಕರ ಸರಬರಾಜು, ಸಾರಿಗೆ-ಈ ಎಲ್ಲ ಸೌಲಭ್ಯಗಳನ್ನೂ ಪಡಿದಿರುವ ಈ ಸ್ಥಳದಲ್ಲಿ ಸಿಮೆಂಟ್ ಕಾರ್ಖಾನೆ 1960ರಲ್ಲಿ ಸ್ಥಾಪಿತವಾಯಿತು. ಬೆಂಗಳೂರು-ಅರಸೀಕೆರೆ ರೈಲುಮಾರ್ಗದ ಒಂದು ನಿಲ್ದಾಣವಾದ ಅಮ್ಮಸಂದ್ರ ಈ ಕಾರ್ಖಾನೆಯ ಈಶಾನ್ಯಕ್ಕೆ 1.6ಕಿಮೀ. ದೂರದಲ್ಲಿದೆ. ಬೆಂಗಳೂರು-ಹೊನ್ನಾವರ ಹೆದ್ದಾರಿ ಇರುವುದು 4.8 ಕಿಮೀ. ದೂರದಲ್ಲಿ. ಕೈಗಾರಿಕೆಗೆ ಅಗತ್ಯವಾದ ಮುಖ್ಯ ಕಚ್ಚಾ ಸಾಮಗ್ರಿಯಾದ ಸುಣ್ಣಕಲ್ಲು ಈ ಸುತ್ತಿನಲ್ಲಿ ಹೇರಳವಾಗಿ ದೊರಕುತ್ತದೆ.

ನೇಯ್ಗೆ ಇಲ್ಲಿಯ ಒಂದು ಮುಖ್ಯ ಸಣ್ಣ ಕೈಗಾರಿಕೆ. ಮಾವಿನಕೆರೆ ಒಂದು ಮುಖ್ಯ ನೇಯ್ಗೆ ಕೇಂದ್ರ. ಇಲ್ಲಿಯ ನೇಯ್ಗೆ ಬಟ್ಟೆಗಳು ಪ್ರಸಿದ್ಧವಾಗಿವೆ. ಮುನಿಯೂರು, ದಂಡಿನಶಿವರ ಮತ್ತು ಮಾವಿನಕೆರೆ ಗ್ರಾಮಗಳಲ್ಲಿ ಹತ್ತಿ ಮತ್ತು ರೇಷ್ಮೆ ನೇಕಾರರ ಸಹಕಾರ ಸಂಘಗಳಿವೆ.

ತಾಲ್ಲೂಕಿನಲ್ಲಿ 138 ಕಿರಿಯ ಪ್ರಾಥಮಿಕ ಮತ್ತು 30 ವಿಸ್ತøತ ಪ್ರಾಥಮಿಕ ಶಾಲೆಗಳೂ 7 ಮಾದರಿ ಮಾಧ್ಯಮಿಕ ಶಾಲೆಗಳೂ (1968) ಎರಡು ಪ್ರೌಢಶಾಲೆಗಳೂ (1966-67) ಇವೆ. ತಾಲ್ಲೂಕು ಕೇಂದ್ರದಲ್ಲಿ ಹೆರಿಗೆ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯಕೇಂದ್ರವೂ ಮಾಯಸಂದ್ರ, ದಂಡಿನಶಿವರ, ಬಾಣಸಂದ್ರ, ತಂಡಗ ಮುಂತಾದೆಡೆಗಳಲ್ಲಿ ಔಷಧಾಲಯಗಳೂ ಇವೆ. ದುಮ್ಮನಹಳ್ಳಿ ಎಂಬುದು ದುಮ್ಮಿ ಒಡೆಯರ ಪಾಳೆಯಪಟ್ಟಾಗಿತ್ತು. ಹೊಸಹಳ್ಳಿಯಲ್ಲಿ ಹೊಯ್ಸಳರ ಕಾಲದ ಕಲ್ಲೇಶ್ವರ ದೇವಾಲಯವಿದೆ. ಕಡಸೂರಿನ ಭೈರವ ದೇವಾಲಯ ಪ್ರಸಿದ್ಧವಾದ್ದು. ಮಾಯಸಂದ್ರದಲ್ಲಿ ಮಾಯಮ್ಮ, ಕೊಲ್ಲಾಪುರದಮ್ಮ ದೇವಾಲಯಗಳಿವೆ. ಮಾಯಸಂದ್ರಕ್ಕೆ ಹತ್ತಿರವಿರುವ ರಾಮಸಾಗರದಲ್ಲಿರುವ ವರದರಾಜ ದೇವಾಲಯ ಹೆಸರಾದ್ದು. ನಾಗಲಾಪುರದಲ್ಲಿ ಹೊಯ್ಸಳರ ಕಾಲದ ಪಾಳುಬಿದ್ದಿರುವ ವಿಷ್ಣು ಮತ್ತು ಶಿವ ದೇವಾಲಯಗಳಿವೆ.

ಸಂಪಿಗೆ ತೆಂಗಿನ ತೋಟಗಳಿಗೆ ಪ್ರಸಿದ್ಧ. ಇಲ್ಲಿ ವೆಂಕಟರಮಣಸ್ವಾಮಿ ದೇವಾಲಯವಿದೆ. ಸೂಳೆಕೆರೆಯಲ್ಲಿ ಹೊಯ್ಸಳ ಶೈಲಿಯ ಈಶ್ವರ ದೇವಾಲಯವೂ ವೀರಭದ್ರನ ದೇವಸ್ಥಾನವೂ ಇದೆ. ತಂಡದಲ್ಲಿಯ ಹೊಯ್ಸಳ ಶೈಲಿಯ ಚೆನ್ನಕೇಶವ ದೇವಾಲಯ ಪ್ರಸಿದ್ಧವಾದ್ದು. ಇದಲ್ಲದೆ ಇಲ್ಲಿ ಮಲ್ಲೇಶ್ವರ ಮತ್ತು ಈಶ್ವರ ದೇವಾಲಯಗಳಿವೆ. ಈಶ್ವರ ದೇವಾಲಯ ದ್ರಾವಿಡ ಶೈಲಿಯದು.

ತುರುವೇಕೆರೆ ಪಟ್ಟಣ ಬೆಂಗಳೂರು-ಅರಸೀಕೆರೆ ರೈಲುಮಾರ್ಗದಲ್ಲಿರುವ ಬಾಣಸಂದ್ರನಿಲ್ದಾಣಕ್ಕೆ 8 ಮೈ. ದಕ್ಷಿಣದಲ್ಲಿದೆ. ಇದು ತುರುವೇಕೆರೆ ತಾಲ್ಲೂಕಿನ ಕೇಂದ್ರ. ಇಲ್ಲೊಂದು ಪೌರಸಭೆ ಇದೆ. ಜನಸಂಖ್ಯೆ 13,275 (2001). 13 ನೆಯ ಶತಮಾನದ ನಡುಗಾಲದಲ್ಲಿ ಇದನ್ನು ಹೊಯ್ಸಳ ದೊರೆ 3ನೆಯ ನರಸಿಂಹನ ಹೆಸರಿನಲ್ಲಿ ಸರ್ವಜ್ಞ ಶ್ರೀ ವಿಜಯ ನರಸಿಂಹಪುರ ಎಂಬ ಅಗ್ರಹಾರವಾಗಿ ಆ ದೊರೆಯ ದಂಡನಾಯಕ ಸೋಮಣ್ಣ ದಂಡನಾಯಕ ನಿರ್ಮಿಸಿದನೆಂದು ಹೇಳಲಾಗಿದೆ. ತಿರುಮಕೂಡಲು ನರಸೀಪುರ ತಾಲ್ಲೂಕಿನಲ್ಲಿರುವ ಸೋಮನಾಥಪುರವನ್ನು ನಿರ್ಮಿಸಿದವನೂ ಇವನೇ ಎಂದು ತಿಳಿದುಬರುತ್ತದೆ. ಈ ಪಟ್ಟಣಕ್ಕೆ ತುರುವೇಕೆರೆ ಎಂಬ ಹೆಸರು ಬಂದಿರುವುದಕ್ಕೆ ಇದರ ಉತ್ತರಕ್ಕಿರುವ ಈ ಹೆಸರಿನ ಕೆರೆಯೇ ಕಾರಣ. 16 ನೆಯ ಶತಮಾನದಲ್ಲಿ ಇದನ್ನು ಹಾಗಲವಾಡಿಯ ಸಾಳನಾಯಕ ಗೆದ್ದುಕೊಂಡು ಇದರ ಆಡಳಿತವನ್ನು ತನ್ನ ಸೋದರರಾದ ಚಿಕ್ಕನಾಯಕ ಮತ್ತು ಅಣ್ಣೇನಾಯಕರಿಗೆ ವಹಿಸಿಕೊಟ್ಟನೆಂದು ಕಾಣುತ್ತದೆ. ಇವರು ಇಲ್ಲಿಯ ಹೊರಕೋಟೆಯನ್ನು ನಿರ್ಮಿಸಿದರಲ್ಲದೆ ಕೆರೆಯನ್ನು ವಿಸ್ತರಿಸಿದರು. ಇನ್ನೂ ಹಲವು ಕಾಮಗಾರಿಗಳನ್ನು ನಡೆಸಿದರು. 1676 ರಲ್ಲಿ ಮೈಸೂರು ದೊರೆ ಚಿಕ್ಕದೇವರಾಯ ಇದನ್ನು ವಶಪಡಿಸಿಕೊಂಡ. ಇಲ್ಲಿ ಪೂರ್ವ ತುದಿಯಲ್ಲಿ ಬಸವನ ಗುಡಿಯೊಂದಿದೆ. ಇದರ ಮುಂದೆ ಇರುವ ಎರಡು ಕಲ್ಲಿನ ಕಂಬಗಳ ಮೇಲೆ ಅಡ್ಡಲಾಗಿರುವ ತೊಲೆಯಲ್ಲಿ ಕಬ್ಬಿಣದ ಬಳೆಗಳಿವೆ. ತುರುವೇಕೆರೆ ಒಂದು ಕಾಲದಲ್ಲಿ ಹತ್ತಿಯ ವ್ಯಾಪಾರದ ಕೇಂದ್ರವಾಗಿತ್ತೆಂದೂ ಊರಿನ ಈ ಭಾಗಕ್ಕೆ ಅರಳೇಪೇಟೆ ಎಂಬ ಹೆಸರಿತ್ತೆಂದು ಇಲ್ಲಿಗೆ ಬಂದ ಹತ್ತಿಯ ಪಿಂಡಿಗಳನ್ನು ಇಲ್ಲಿ ತಕ್ಕಡಿಯಲ್ಲಿ ತೂಗಿ ಬೇರೆ ಬೇರೆ ಸ್ಥಳಗಳಿಗೆ ಕಳಿಸಲಾಗುತ್ತಿತ್ತೆಂದೂ ಇಲ್ಲಿಯ ತೂಕ ನಿಖರವಾದದ್ದೆಂದು ಎಲ್ಲರೂ ನಂಬುತ್ತಿದ್ದರೆಂದೂ ಹೇಳಲಾಗಿದೆ.

ತುರುವೇಕೆರೆ ದೇವಾಲಯಗಳ ಪೈಕಿ ಮೂಲೇಶಂಕರೇಶ್ವರ ಮತ್ತು ಗಂಗಾಧರೇಶ್ವರ ದೇವಾಲಯಗಳು ಪ್ರಸಿದ್ಧವಾದವು. ಗಂಗಾಧರೇಶ್ವರ ದೇವಾಲಯ ಮುಂದಿನ ಕರಿಕಲ್ಲು ಬಸವನಮೂರ್ತಿ ಸುಂದರವಾದ್ದು. ಬೇಟೆರಾಯಸ್ವಾಮಿ ದೇವಾಲಯದ ಶಿಲ್ಪ ಅಕರ್ಷಕವಾಗಿದೆ. ವಿನೋಬಾ ನಗರ, ಸುಬ್ರಹ್ಮಣ್ಯನಗರ ಇಂದಿರಾನಗರ ಗಾಂಧಿನಗರ ಬಡಾವಣೆಗಳಿಂದ ಕೂಡಿದ ತುರುವೇಕೆರೆ ಪಟ್ಟಣ ವಿದ್ಯುಚ್ಛಕ್ತಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಯಿದೆ. ಪುರಸಭೆಯ ಆಶ್ರಯದಲ್ಲಿ ಒಂದು ಫ್ರೌಢಶಾಲೆಯನ್ನೂ ಒಂದು ಶಿಶುವಿಹಾರವನ್ನೂ ನಡೆಸಲಾಗುತ್ತಿದೆ. ಪುರಸಭೆಯ ಅಡಳಿತಕ್ಕೊಳಪಟ್ಟ ಪ್ರದೇಶದ ವಿಸ್ತೀರ್ಣ 1.30 ಚ.ಮೈ. ತುರುವೇಕೆರೆಯಲ್ಲಿ ರೆಗ್ಯುಲೇಟೆಡ್ ಮಾರುಕಟ್ಟೆಯಿದೆ. ಕೊಬ್ಬರಿ, ತೆಂಗಿನಕಾಯಿ, ಬೆಲ್ಲ, ರಾಗಿ, ಜೋಳ, ಅಡಕೆ ಮುಂತಾದವು ಇಲ್ಲಿ ವ್ಯಾಪಾರವಾಗುವ ಸರಕುಗಳು. ತುರುವೇಕೆರೆಯಿಂದ ಜಿಲ್ಲೆಯ ಇತರ ಮುಖ್ಯ ಸ್ಥಳಗಳಿಗೂ ತಾಲ್ಲೂಕಿನ ಹಲವು ಎಡೆಗಳಿಗೂ ರಸ್ತೆಗಳಿವೆ ; ಬಸ್ಸು ವ್ಯವಸ್ಥೆಯೂ ಇದೆ. * ದೊಂಬರನಹಳ್ಳಿ ಗ್ರಾಮವು 12ಕಿಮೀ ದೂರದ ಒಂದು ಗ್ರಾಮ