ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತೆರಕಣಾಂಬಿ

ವಿಕಿಸೋರ್ಸ್ದಿಂದ

ತೆರಕಣಾಂಬಿ - ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕಸಬೆಯಿಂದ 11ಕಿಮೀ ದೂರದಲ್ಲಿ ಚಾಮರಾಜನಗರದ ರಸ್ತೆಯಲ್ಲಿರುವ ಊರು. ಇದೇ ಹೆಸರಿನ ಹೋಬಳಿಯ ಮುಖ್ಯ ಸ್ಥಳ. ದ್ರಾವಿಡ, ಕೇರಳ ಮತ್ತು ಹದಿನಾಡು ಅಥವಾ ದಕ್ಷಿಣ ಕರ್ನಾಟಕ ಇಲ್ಲಿ ಕೂಡುತ್ತಿದ್ದುದರಿಂದ ಇದು ಕೂಡುಗಲ್ಲೂರು ಎಂದೂ ತ್ರಿಕದಂಬಪುರ ಎಂದೂ ಹೆಸರಾಯಿತೆಂದು ಪ್ರತೀತಿ. ಆರನೆಯ ಶತಮಾನದಲ್ಲಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ಆಳುತ್ತಿದ್ದ ಕದಂಬ ವಂಶದ ತ್ರಿನೇತ್ರ ಕದಂಬ (ಲಂಬಕರ್ಣರಾಯ) ಎಂಬುವನು ಈ ಕೂಡು ಸ್ಥಳದಲ್ಲಿ ತ್ರಿಕದಂಬ ಅಥವಾ ಮುಕ್ಕಣ್ಣನ (ಶಿವ) ದೇವಾಲಯವನ್ನು ಕಟ್ಟಿಸಿದ್ದ. ಈ ಕಾರಣದಿಂದ ಈ ಊರಿಗೆ ತೆರಕಣಾಂಬಿ ಹೆಸರು ಬಂತು ಎಂಬುದೂ ಒಂದು ಅಭಿಪ್ರಾಯ.

ತೆರಕಣಾಂಬಿಯಲ್ಲಿ ಶಿವಸಮುದ್ರದ ಮಾಧವರಾಯ ಆಳುತ್ತಿದ್ದ ಎನ್ನಲಾಗಿದೆ. ಹೊಯ್ಸಳ ರಾಜ್ಯದಲ್ಲಿದ್ದ ಈ ಊರನ್ನು ಅನಂತರ ವಿಜಯನಗರದ ಹರಿಹರ ವಿಸ್ತರಿಸಿದ. 16ನೆಯ ಶತಮಾನದಲ್ಲಿ ಈ ಊರು ಉಮ್ಮತ್ತೂರಿನ ನಾಯಕನ ವಶದಲ್ಲಿತ್ತು. ತರುವಾಯ ಇದರ ಸುತ್ತಮುತ್ತಲ ಪ್ರದೇಶವು ತೆಲುಗುಮೂಲದ ದಾಳಿಕೋರರ ಲೂಟಿಗೆ ಒಳಗಾಯಿತು. 1624ರಲ್ಲಿ ಇದು ಮೈಸೂರಿನ ರಾಜ ಒಡೆಯರ ಅಧೀನಕ್ಕೊಳಪಟ್ಟಿತು. ಈ ಕಾಲದಲ್ಲಿ ಇದರ ಮಹತ್ತ್ವ ಕುಗ್ಗುತ್ತ ಬಂದು ಗುಂಡ್ಲುಪೇಟೆ ಮುಖ್ಯ ಸ್ಥಳವಾಯಿತು. ಹಾಗೆಯೇ ಇದು ಇಬ್ಧಾಗವಾಗಿ ಅವಲ್ ತೆರಕಣಾಂಬಿ ಮತ್ತು ದುಯಂ ತೆರಕಣಾಂಬಿ ಎಂದಾಯಿತು. ಪೂರ್ಣಯ್ಯನವರು ಇವೆರಡನ್ನೂ ಗುಂಡ್ಲುಪೇಟೆ ತಾಲ್ಲೂಕಿಗೆ ಸೇರಿಸಿದರು. 1747ರಲ್ಲಿ ಮರಾಠರು ಈ ಊರಿನ ಕೋಟೆಯನ್ನು ನಾಶಪಡಿಸಿದರು. ಇಂದೂ ಸಹ ಐದು ಪ್ರಾಕಾರದ ಭಗ್ನಕೋಟೆ, ಹಳೆಯ ಅರಮನೆಯ ನಿವೇಶನ ಉಳಿದಿವೆ. ಅರಮನೆ ಆರು ಮಹಡಿಗಳಿಂದ ಕೂಡಿತ್ತೆಂದು ಸ್ಥಳೀಯ ಐತಿಹ್ಯ. ಉಮ್ಮತ್ತೂರು ನಾಯಕರುಗಳು ಬರೆಸಿದ ಶಾಸನಗಳು (1489-1504) ಮತ್ತು ಕೃಷ್ಣದೇವರಾಯನ ಒಂದು ಶಾಸನ (1520) ಇಲ್ಲಿ ದೊರೆತಿವೆ.

ತೆರಕಣಾಂಬಿಯಲ್ಲಿ 12 ದೇವಾಲಯಗಳ ಅವಶೇಷಗಳಿವೆ. ಮುಖ್ಯದೇವಾಲಯ ಲಕ್ಷ್ಮೀವರದರಾಜ ಸ್ವಾಮಿಯದು. ಇದು ಸುಂದರವಾದ ಕಂಬಗಳಿರುವ ದ್ರಾವಿಡ ಶೈಲಿಯ ಕಟ್ಟಡ. ಮುಮ್ಮಡಿ ಕೃಷ್ಣರಾಜ ಒಡೆಯರು ಇದರ ವಿಗ್ರಹವನ್ನು ಮೈಸೂರಿನ ಪ್ರಸನ್ನ ಕೃಷ್ಣಸ್ವಾಮಿ ದೇವಸ್ಥಾನಕ್ಕೆ ಸಾಗಿಸಿ, ಬದಲಿಯಾಗಿ ಬೇರೊಂದನ್ನು ಮಾಡಿಸಿಕೊಟ್ಟಿದ್ದಾರೆ. ಬಾಲಕೃಷ್ಣ, ಬಾಲಬಲರಾಮ, ಕೃಷ್ಣನಿಗೆ ಹಾಲೂಡಿಸುತ್ತಿರುವ ಯಶೋಧೆ ಈ ಕಂಚಿನ ಶಿಲ್ಪಗಳು ದೇವಾಲಯದಲ್ಲಿವೆ.

ಸುಗ್ರೀವ ದೇವಾಲಯದಲ್ಲಿ 6 ಅಡಿ ಎತ್ತರದ ಸುಗ್ರೀವನ ವಿಗ್ರಹವಿದೆ. ಹನುಮಂತ ದೇವಾಲಯ ಉತ್ತಮ ವಾಸ್ತುಕೃತಿ. 1640ರಲ್ಲಿ ಒಬ್ಬ ವ್ಯಾಪಾರಿ ಇದನ್ನು ಕಟ್ಟಿಸಿದ. ಈ ಊರಿನ ಸುತ್ತಮುತ್ತ ಅನೇಕ ಕೆರೆಗಳಿದ್ದುದು ಹಾಗೂ ರಾಮಭದ್ರ ದೇವಾಲಯದ ಬೃಹತ್ ಅವಶೇಷ ಈಗಲೂ ಕಂಡುಬರುತ್ತದೆ. ಪ್ರತಿ ಗುರುವಾರ ತೆರಕಣಾಂಬಿಯಲ್ಲಿ ದೊಡ್ಡ ಸಂತೆ ನಡೆಯುತ್ತದೆ. (ಕೆ.ಎಸ್.ಎನ್.)