ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೀಪಗಳು

ವಿಕಿಸೋರ್ಸ್ದಿಂದ

ದೀಪಗಳು

ಸೂರ್ಯ ಮತ್ತು ಅಗ್ನಿಯ ಸಂಕೇತವಾದ ದೀಪ, ಮಂಗಳಕರವಾದದು. ಮಾನವ ಆವಿಷ್ಕರಿಸಿದ ಅನೇಕ ಅದ್ಭುತ ವಸ್ತುಗಳಲ್ಲಿ ಅಗ್ನಿಯೂ ಒಂದು. ಬೆಳಕಿನೊಂದಿಗೆ ಜೀವದ ರಕ್ಷಣೆಯನ್ನೂ ನೀಡಿದ, ನೀಡುತ್ತಿರುವ ಇದನ್ನು ಆತ ದೇವತೆಯ ಸ್ಥಾನಕ್ಕೇರಿಸಿದ್ದಾನೆ. ಭಾರತೀಯ ಪರಂಪರೆಯಲ್ಲಿ ಅಗ್ನಿ ಅಥವಾ ಜ್ಯೋತಿಗೆ ಒಂದು ವಿಶೇಷ ಮಹತ್ತ್ವವಿದೆ. ವೇದದಲ್ಲಿ ನಿರೂಪಿಸಿದಂತೆ ಇಂದ್ರನ ಅನಂತರ ಅಗ್ನಿಯೇ ಮುಖ್ಯ ದೇವತೆಯಾಗಿದ್ದಾನೆ. ಇವನಿಗೆ ಐಹಿಕ ಅಥವಾ ಭೌಮಿಕ ಜ್ಯೋತಿ, ಆಕಾಶ ಜ್ಯೋತಿ, ಮತ್ತು ದಿವ್ಯಜ್ಯೋತಿ ಎಂಬ ಮೂರು ರೂಪಗಳು ಇವೆಯೆಂದು ಹೇಳುತ್ತಾರೆ. 

ದೀಪದ ಕಲ್ಪನೆ ಬಂದಾಗಿನಿಂದ ನಾಗರಿಕತೆ ಹೊಸ ಶಕ್ತಿಯನ್ನು ಪಡೆಯಿತು. ಬೆಳಕೇ ಮನುಷ್ಯನಿಗೆ e್ಞÁನಮೂಲವಾಗಿದೆ. ಅಂತೆಯೇ ಇದನ್ನು ಸಾಂಸ್ಕøತಿಕ ಪರಂಪರೆಯಲ್ಲಿ ಪವಿತ್ರವಾದುದೆಂದು ಭಾವಿಸಲಾಗಿದೆ. ದೀಪದ ಮಹಿಮೆಯನ್ನರಿತ ಮಾನವ ಅದನ್ನು ಸುಂದರಗೊಳಿಸಲು ಆಗಾಗ ಪ್ರಯತ್ನಿಸುತ್ತಿದ್ದುದೂ ಸಹಜ.

ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳಲ್ಲಿ ಚಿನ್ನದ ಮತ್ತು ಬೆಲೆಬಾಳುವ ಹರಳುಗಳ ದೀಪಗಳ ಉಲ್ಲೇಖ ಬರುತ್ತದೆ. ರಾಮಾಯಣದ ಸುಂದರ ಕಾಂಡದಲ್ಲಿ ಬರುವ ರತ್ನದೀಪದ ಉಲ್ಲೇಖ ಮತ್ತು ಮಹಾಭಾರತದ ದ್ರೋಣ ಪರ್ವದಲ್ಲಿ ದೀಪದ ಬೆಳಕಿನಲ್ಲಿ ನಡೆಯುತ್ತಿದ್ದ ರಾತ್ರಿಯುದ್ಧದ ರೋಮಾಂಚಕಾರಿ ವರ್ಣನೆಗಳನ್ನು ಇಲ್ಲಿ ಹೆಸರಿಸಬಹುದು. ಪುರಾಣ ಸಾಹಿತ್ಯದಲ್ಲಿ ದೀಪಗಳ ಬೆಳವಣಿಗೆಗಳಿವೆ. ವಿಷ್ಣುವಿನ ದಶಾವತಾರಗಳ ಕಲ್ಪನೆ, ದೀಪ ತಯಾರಿಸುವ ಕಸಬುದಾರರಿಗೆ ಉತ್ತಮ ಸ್ಫೂರ್ತಿ ನೀಡಿದೆ. ಅಂತೆಯೇ ಮತ್ಸ್ಯ, ಕೂರ್ಮ, ವರಾಹ ಅವತಾರಗಳ ದೀಪಗಳನ್ನು ವಿಶೇಷವಾಗಿ ಗಮನಿಸಬಹುದು. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿರುವ ದೀಪಗಳು, ವಿಷ್ಣುಸಂಕೇತಗಳಾದ ಶಂಖ ಚಕ್ರ ಗದೆ ಪದ್ಮಗಳನ್ನು ಒಳಗೊಂಡಿವೆ. ಕಾಳಿದಾಸನ ಮೇಘದೂತದಲ್ಲಿ ಅಲಕಾನಗರಿಯಲ್ಲಿರುವ ಅರಮನೆಗಳಲ್ಲಿ ಯಕ್ಷ ರತ್ನದೀಪಗಳನ್ನು ಉಪಯೋಗಿಸುತ್ತಿದ್ದನೆಂದು ವರ್ಣಿಸಿದ್ದಾನೆ. ಭಾರತೀಯ ಜಾನಪದದಲ್ಲೂ ದೀಪಗಳಿಗೆ ವೈಶಿಷ್ಟ್ಯ ಪೂರ್ಣವಾದ ಸ್ಥಾನವಿದೆ. ದೀಪರಾಜ ದೀಪರಾಣಿಯರ ಉಲ್ಲೇಖ ಜನಪದ ಸಾಹಿತ್ಯದಲ್ಲಿ ಮುಖ್ಯವಾದದ್ದು.

ಪ್ರಾಚೀನ ಕಾಲದಲ್ಲಿ ದೀಪ ಪಾತ್ರೆಗಳನ್ನು ಕಲ್ಲು ಅಥವಾ ಚಿಪ್ಪಿನಿಂದ ಮಾಡುತ್ತಿದ್ದಿರಬೇಕು. ಅನಂತರ ಮಣ್ಣಿನ ಮತ್ತು ಲೋಹದ ದೀಪಗಳು ಬೆಳಕಿಗೆ ಬಂದುವು. ಮೊದಲು ಅದು ಬಟ್ಟಲಿನಾಕಾರದಲ್ಲಿದ್ದು, ಅದರ ಒಂದು ಬದಿಗೆ ಬತ್ತಿಯನ್ನಿಡಲು ಚಂಚು ಇರುತ್ತಿತ್ತು. ಕಾಲಕ್ರಮದಲ್ಲಿ ಅದಕ್ಕೆ ಸುಂದರವಾದ ಪೀಠವನ್ನು ಸೇರಿಸಲಾಯಿತು. ಒಮ್ಮೊಮ್ಮೆ ಮರದ ಅಥವಾ ಕಲ್ಲಿನ ಪೀಠಗಳನ್ನು ದೀಪಪಾತ್ರೆಗೆ ಆಧಾರವಾಗಿ ಇಡುತ್ತಿದ್ದರು. ಈ ಪೀಠಗಳು ವರ್ತುಲಾಕಾರವಾಗಿಯೋ ಅಷ್ಟಕೋನಾಕಾರವಾಗಿಯೋ ಇರುತ್ತಿದ್ದವು. ಅನಂತರದಲ್ಲಿ ಈ ಅಲಂಕೃತ ಪಾದ ಪೀಠಗಳು ದೀಪದ ಅವಿಭಾಜ್ಯ ಅಂಗಗಳಾದವು. ಪ್ರಾಚೀನ ಭಾರತೀಯ ವಾಸ್ತುಶಿಲ್ಪ, ಶಾಸನ ಮುಂತಾದವುಗಳಲ್ಲಿ ದೀಪಗಳ ಉಲ್ಲೇಖವಿದೆ. ಮೊಹೆಂಜೊದಾರೋದಲ್ಲಿ ನಡೆಸಿದ ಉತ್ಖನಗಳ ಮೇಲಿಂದ ಐದು ಸಾವಿರ ವರ್ಷಗಳ ಹಿಂದೆಯೇ ಬೀದಿ ದೀಪಗಳು ಇದ್ದವು ಎಂದು ಗೊತ್ತಾಗಿದೆ. ಪ್ರತಿಯೊಂದು ಮುಖ್ಯ ರಸ್ತೆಯಲ್ಲಿಯೂ ಒಂದೊಂದು ದೀಪಸ್ತಂಭ ಇರುತ್ತಿತ್ತು. ಮನೆಯ ಪ್ರಧಾನ ಬಾಗಿಲುಗಳ ಮೇಲೂ ಚಿಕ್ಕ ದೀಪಗಳನ್ನು ಹೊತ್ತಿಸಿ ಇಡುತ್ತಿದ್ದರು. ಮಾತೃದೇವತೆಯೆಂದು ಹೇಳಲಾದ ಮೃಣ್‍ಮೂರ್ತಿಯ ಕಿರೀಟದಲ್ಲಿ ಎರಡು ಹಣತೆಯೋಪಾದಿಯ ರಚನೆಗಳಿದ್ದು ಅವುಗಳಲ್ಲಿ ಎಣ್ಣೆ ಹಾಕಿ ದೀಪ ಹೊತ್ತಿಸುತ್ತಿದ್ದರು.

ಭಾರತೀಯ ಶಿಲ್ಪಗಳಲ್ಲಿ ದೀಪಗಳ ಚಿತ್ರಣ ಸಾಮಾನ್ಯವಾಗಿ ಅಲ್ಲಲ್ಲಿ ಕಂಡುಬರುತ್ತದೆ. ಆಂಧ್ರ ಪ್ರದೇಶದ ಅಮರಾವತಿ, ಆಗ್ನೇಯ ಏಷ್ಯದ ಬೋರೋಬುದುರ್‍ಗಳಲ್ಲಿ ದೀಪಗಳ ಚಿತ್ರಣ ಕಂಡುಬಂದಿದೆ. ಬೋರೋಬುದರ್ ಸ್ತೂಪದ ಮೇಲೆ ಅನೇಕ ರೀತಿಯ ಅಲಂಕೃತ ದೀಪಗಳನ್ನು ಕೆತ್ತಲಾಗಿದೆ. ಮೊಗಲರ, ರಜಪೂತರ, ಮತ್ತು ಕಾಂಗ್ರರ ಮತ್ತು ಮರಾಠರ ಕಾಲಗಳಲ್ಲಿ ಮೇಲ್ಚಾವಣಿಯ ದೀಪಗಳನ್ನು ಸಾಲು ಅಥವಾ ಸ್ತಂಭದೀಪಗಳನ್ನು ವೈವಿಧ್ಯಪೂರ್ಣ ರೀತಿಗಳಲ್ಲಿ ಬೆಳಗಿಸುತಿದ್ದರು. ಪ್ರಾಚೀನ ಹಾಗೂ ಮಧ್ಯಕಾಲೀನ ಶಾಸನಗಳಲ್ಲಿ ದೇವಾಲಯಗಳ ದೀಪಗಳಿಗೆ ಸಂಬಂಧಪಟ್ಟ ಉಲ್ಲೇಖಗಳು ಕಂಡುಬರುತ್ತವೆ, ದಕ್ಷಿಣಭಾರತದ ಚೋಳರ ಕಾಲದ ತಾಮ್ರ ಪತ್ರವೊಂದರಲ್ಲಿ ನಂದಾದೀಪದ ಉಲ್ಲೇಖವಿದೆ.

ದೀಪಗಳನ್ನು ಕೆಲವೊಮ್ಮೆ ಹರಕೆಯ ದೀಪಗಳಾಗಿಯೂ ಉಪಯೋಗಿಸುವುದುಂಟು. ಆಯುಷ್ಮಂತನಾಗಲು, ಆರೋಗ್ಯವಂತನಾಗಲು, ಹಾಗೂ ಸತ್ಪುತ್ರನನ್ನು ಪಡೆಯಲು ದೇವರನ್ನು ಪ್ರಾರ್ಥಿಸಿ, ತನ್ನ ಬಯಕೆ ಈಡೇರಿದಾಗ, ಇಂಥ ಹರಕೆ ದೀಪಗಳನ್ನು ಹೊತ್ತಿಸಿ ಮಾನವ ದೇವರಿಗೆ ಅವನ್ನು ಅರ್ಪಿಸುತ್ತಿದ್ದ. ಕೆಲವು ಮೂಲನಿವಾಸಿಗಳಲ್ಲಿ ಇಂಥ ಪದ್ಧತಿ ಈಗಲೂ ಕಂಡುಬರುತ್ತದೆ. ಅವರು ಸಲ್ಲಿಸುತ್ತಿದ್ದ ಹರಕೆಯ ದೀಪಗಳು ಸಾಮಾನ್ಯವಾಗಿ ಸರಳವಾಗಿಯೂ ಒರಟಾಗಿಯೂ ಇರುತ್ತಿದ್ದವು. ಆದರೂ ಭಾವನಾಸೌಂದರ್ಯ ಅವುಗಳಲ್ಲಿ ಹೊರಸೂಸುತ್ತಿತ್ತು. ಆದಿವಾಸಿ ಜನಾಂಗದಲ್ಲಿ ಮನೆಯ ಯಜಮಾನಿಯಾದ ತಾಯಿ ಕಬ್ಬಿಣದಿಂದ ಮಾಡಿದ ದೀಪವನ್ನು ಹಚ್ಚುವುದು ರೂಢಿಯಲ್ಲಿದೆ. ಇನ್ನು ಕೆಲವು ಗುಡ್ಡಗಾಡು ಜನಾಂಗದವರು ಹಿಟ್ಟಿನಿಂದ ಮಾಡಿದ ದೀಪಗಳನ್ನು ಆನೆ, ಕುದುರೆ, ನವಿಲುಗಳ ಆಕೃತಿಗಳಿಂದ ಅಲಂಕರಿಸಿ ಮದುವೆ ಹಬ್ಬ ಮುಂತಾದ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆ. ಮಧ್ಯ ಪ್ರದೇಶದ ಗೋಂಡರ ಮದುವೆಗಳಲ್ಲಿ ಕೆಲವು ವಿಶೇಷ ರೀತಿಯ ದೀಪಗಳನ್ನು ಉರಿಸುತ್ತಾರೆ. ಐದಡಿ ಎತ್ತರದ ಒಂದು ಕಂಬದ ಮೇಲೆ ಕೆಂಪು ಅಥವಾ ನೀಲಿ ಕಣ್ಣಿನ ಮಾನವಾಕೃತಿಯೂ ಮಧ್ಯಭಾಗದಲ್ಲಿ ನಾಲ್ಕು ದೀಪಗಳು ಇರುವುದು ಇದರ ವೈಶಿಷ್ಟ್ಯ. ಕೆಲವೊಮ್ಮೆ ಈ ಕಬ್ಬಿಣದ ಕಂಬ ಜಿಂಕೆಯ ಅಥವಾ ಮಾನವರೂಪಿ ಗೊಂಬೆಗಳನ್ನು ಹೊತ್ತಿರುವುದಲ್ಲದೆ, ಚಿಕ್ಕ ಚಿಕ್ಕ ಕಬ್ಬಿಣದ ದೀಪಗಳನ್ನು ಒಳಗೊಂಡಿರುತ್ತದೆ. ಸೌರಾ ಗುಡ್ಡಗಾಡು ಜನರಲ್ಲಿ ವಿಶೇಷವಾದ ಮಾಂತ್ರಿಕ ದೀಪದ ಬಳಕೆ ಇದೆ. ಅದರ ಒಂದು ಬದಿಗೆ ಮರಣಸಂಕೇತವಾದ ನವಿಲಿನ ಚಿತ್ರವೂ ಇನ್ನೊಂದು ಬದಿಗೆ ಸೌರಾ ಪೂಜಾರಿಣಿಯರ ಪ್ರೇತಾಕೃತಿಗಳೂ ಚಿತ್ರಿಸಲ್ಪಟ್ಟಿರುತ್ತವೆ. ದೀಪಗಳಲ್ಲಿ ನಾನಾ ಬಗೆಗಳಿವೆ. ಅರ್ಚನಾದೀಪ, ದೀಪಲಕ್ಷ್ಮಿ, ಆರತಿದೀಪ, ನಂದಾದೀಪ, ತೂಗುದೀಪ, ಕಾಲುದೀಪ, ಮುಂತಾದವನ್ನು ಇಲ್ಲಿ ಹೆಸರಿಸಬಹುದು. ಪೂಜೆಗಾಗಿ ಉಪಯೋಗಿಸುವ ದೀಪವೇ ಅರ್ಚನಾದೀಪ.

ಪ್ರಾರ್ಥನೆಗಾಗಿ ಉಪಯೋಗಿಸುವ ದೀಪವೇ ಆರತಿದೀಪ. ದೇವರ ಮುಂದೆ ಶಾಶ್ವತವಾದ ಬೆಳಗುವ ದೀಪವೇ ನಂದಾದೀಪ. ಸರಪಳಿಗಳಿಂದ ತೂಗುಹಾಕಿದ ದೀಪ ತೂಗುದೀಪವಾದರೆ, ಪುಟ್ಟಸ್ತಂಭದಂಥ ಪೀಠದ ಮೇಲಿರುವ ದೀಪವೇ ಕಾಲುದೀಪ. ಇವೆಲ್ಲವುಗಳ ರಚನೆ, ವಿನ್ಯಾಸ ಮಾದರಿಗಳಲ್ಲಿ ನಾನಾ ನಮೂನೆಗಳೂ ಕಲಾಕುಸುರಿಗಳೂ ಕಂಡುಬರುತ್ತವೆ. ಚಿತ್ರ ವಿಚಿತ್ರವಾದ ಅಲಂಕರಣೆಗಳೂ ಇರುತ್ತವೆ. ಇಂಥವುಗಳಲ್ಲಿ ಕೆಲವನ್ನು ಈಗ ಗಮನಿಸಬಹುದು.

ಕೆಲವು ಆರತಿ ದೀಪಗಳಿಗೆ ಹಿಡಿಕೆಗಳಿರುತ್ತವೆ; ಭಕ್ತ ಅಥವಾ ಪೂಜಾರಿ ಆರತಿ ದೀಪವನ್ನು ತನ್ನ ಬಲಗೈಯಲ್ಲಿ ಅಥವಾ ಎರಡೂ ಕೈಗಳಲ್ಲಿ ಹಿಡಿಯಲು ಅನುಕೂಲವಾಗುವಂತೆ ಈ ಹಿಡಿಕೆಗಳು ಇರುತ್ತವೆ. ಈ ಹಿಡಿಕೆಗಳನ್ನು ವಿವಿಧ ಆಕಾರಗಳಲ್ಲಿ ರಚಿಸಿರುತ್ತಾರೆ. ಸರ್ಪ ಮೀನ ಅಥವಾ ಯಾವುದಾದರೂ ಪ್ರಾಣಿಯ ಆಕಾರಗಳನ್ನು ಅವುಗಳಲ್ಲಿ ಕೆತ್ತಿರುವುದುಂಟು. ಸರ್ಪವಾದರೆ, ಸಾಮಾನ್ಯವಾಗಿ ಪ್ರಸಿದ್ಧವಾದ ಕಾಳಿಂಗಮರ್ಧನ ಚಿತ್ರಿತವಾಗಿರುತ್ತವೆ. ಪಂಚಾರತಿ ಎನ್ನುವ ಇನ್ನೊಂದು ಬಗೆಯ ಆರತಿ ದೀಪದಲ್ಲಿ ಐವರು ಸುವಾಸಿನಿಯರು ಕುದುರೆಯ ಹಿಂದೆ ನಿಂತಂತಿದ್ದು, ಹಿಡಿಕೆಯ ಮೇಲೆ ಸವಾರ ಕುಳಿತಂತೆ ಚಿತ್ರಿತವಾಗಿದೆ. ಭಾರತದ ಅನೇಕ ದೇವಾಲಯಗಳಲ್ಲಿ ಹಾಗೂ ಕೆಲವರ ಮನೆಗಳಲ್ಲಿ ಕಾಣಸಿಗುವ ಆರತಿ ದೀಪಗಳು ವೈವಿಧ್ಯದಲ್ಲಿ, ಸೂಕ್ಷ್ಮ ಕೆತ್ತನೆಯ ಕೆಲಸದಲ್ಲಿ ಹಾಗೂ ಚಿತ್ರ ವಿಚಿತ್ರ ವಿನ್ಯಾಸದಲ್ಲಿ ವಿಶೇಷವಾಗಿ ಉಲ್ಲೆಖಾರ್ಹವಾಗಿವೆ. ದಕ್ಷಿಣ ಭಾರತದಲ್ಲಿ 17 ನೆಯ ಶತಮಾನದಲ್ಲಿ ದೊರೆತ ಆರತಿ ದೀಪ ಐದು ದಳಗಳುಳ್ಳ ದೀಪಪಾತ್ರೆಗಳನ್ನು ಹೊಂದಿದ್ದು, ಅವುಗಳ ಬುಡದಲ್ಲಿ ಐದು ಸರ್ಪಗಳು ಕೆತ್ತಲ್ಪಟ್ಟಿವೆ. ಇದರ ಹಿಡಿಕೆಯ ತುದಿಯಲ್ಲಿ ಮತ್ತೊಂದು ಪ್ರತ್ಯೇಕವಾದ ದೀಪಪಾತ್ರೆ ಇದೆ. ನೇಪಾಳದಲ್ಲಿ ದೊರೆತ 18ನೆಯ ಶತಮಾನದ ನಾಗಕುಂಭದೀಪ ಒಂದು ದೀಪಪಾತ್ರೆಯನ್ನು ಅದರ ಅಂಚಿನಲ್ಲಿ ಕರ ಜೋಡಿಸಿ ಕುಳಿತ ವಿಗ್ರಹವೊಂದನ್ನು ಹಾಗೂ ಕುಂಭದ ಬಾಯಿಗೆ ಹೊಂದಿಕೊಂಡಂತೆ ಏಳು ಹೆಡೆಯ ಸರ್ಪವನ್ನು ಹೊಂದಿದೆ. ಆಂಧ್ರ ಪ್ರದೇಶದಲ್ಲಿ ದೊರೆತ 18 ನೆಯ ಶತಮಾನದ ಮಯೂರ ಧೂಪಾರತಿ ನವಿಲಿನಾಕಾರದಲ್ಲಿದೆ. ಇದರ ದೇಹಕ್ಕೆ ಹೊಂದಿಕೊಂಡಂತೆ ಧೂಪವನ್ನು ಹಚ್ಚುವ ಕೊಳವೆಗಳೂ ಇವೆ. ಕೈಹಿಡಿಕೆ, ಆಕರ್ಷಕವಾಗಿ ಕೆತ್ತಲ್ಪಟ್ಟಿದೆ. ದಕ್ಷಿಣ ಭಾರತದಲ್ಲಿ ದೊರೆತ 18ನೆಯ ಶತಮಾನದ ಕಾಕಡಾರತಿಯಲ್ಲಿ ಹನುಮಂತನ ಮೂರ್ತಿ ಇದ್ದು ಆತನ ಹಿಂಭಾಗದ ಪ್ರಭಾವಳಿಗೆ ದೀಪಪಾತ್ರೆಗಳಿವೆ. ಕೆಲವು ಆರತಿ ದೀಪಗಳ ಮೇಲ್ಭಾಗದಲ್ಲಿ ನಂದಿ, ಗಿಳಿ, ಸರ್ಪ ಮುಂತಾದವು ಕೆತ್ತಲ್ಪಟ್ಟಿದ್ದು ಚಿತ್ತಾಕರ್ಷಕವಾಗಿರುತ್ತವೆ.

ದೀಪಧಾರಿಣಿ ಅಥವಾ ದೀಪಲಕ್ಷ್ಮಿ ಎಂಬುದು ಭಾರತದಲ್ಲಿ ಕಂಡುಬರುವ ಇನ್ನೊಂದು ಜನಪ್ರಿಯವಾದ ದೀಪದ ಪ್ರಕಾರ. ಇದನ್ನು ದೀಪದ ಮಲ್ಲಿ ಎಂದು ಕರೆಯುವುದೂ ಉಂಟು. ಸಾಮಾನ್ಯವಾಗಿ ಸಮಭಂಗಿಯಲ್ಲಿ, ಕೆಲವೊಮ್ಮೆ ನೃತ್ಯಭಂಗಿಯಲ್ಲಿ ಇನ್ನು ಕೆಲವೊಮ್ಮೆ ಆನೇನ ಭಂಗಿಯಲ್ಲಿ ಇರುವ ದೀಪಲಕ್ಷ್ಮಿ ಒಂದು ಕೈಯಲ್ಲಿ ಅಥವಾ ಎರಡೂ ಕೈಯಲ್ಲಿ ದೀಪವನ್ನು ಹಿಡಿದಿರುತ್ತಾಳೆ. ದೀಪಲಕ್ಷ್ಮಿಯನ್ನು ತಯಾರಿಸಿದವನು ತನ್ನ ಪ್ರಾಂತೀಯ ಕೇಶಾಲಂಕಾರ, ಉಡಿಗೆ ತೊಡಿಗೆ ಆಭರಣ ಶೈಲಿ ಮುಂತಾದವನ್ನು ಅಳವಡಿಸಿರುತ್ತಾನೆ. 18ನೆಯ ಶತಮಾನದ ದಕ್ಷಿಣ ಭಾರತದ ದೀಪಲಕ್ಷ್ಮಿಯೊಂದು ಆನೆಯ ಮೇಲೆ ನಿಂತಿದ್ದು, ಅವಳ ಹಿಂದೆ ಐದು ಹೆಡೆಯ ಸರ್ಪವೊಂದು ಚಿತ್ರಿತವಾಗಿದೆ. ಗುಜರಾತ್, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ದೊರೆತ ದೀಪಲಕ್ಷ್ಮಿಗಳು ಗಮನವನ್ನು ಸೆಳೆಯುವಂತಿವೆ. ದಕ್ಷಿಣ ಭಾರತದಲ್ಲಿ ದೊರೆತ 17ನೆಯ ಶತಮಾನದ ದೀಪಲಕ್ಷ್ಮಿಯೊಂದರ ಮೇಲೆ ಲಿಂಗಾಕೃತಿ ಕಂಡುಬರುತ್ತವೆ.


ಕೆಲವು ದೀಪಲಕ್ಷ್ಮಿಯರ ಕೈಯಲ್ಲಿರುವ ದೀಪಕ್ಕೆ ಎಣ್ಣೆ ಒದಗಿಸಲು ದೇಹದ ಒಳಭಾಗದಲ್ಲೇ ನಳಿಕೆಯ ವ್ಯವಸ್ಥೆ ಇರುತ್ತದೆ. ದಕ್ಷಿಣ ಭಾರತದಲ್ಲಿ ದೊರೆತ 17ನೆಯ ಶತಮಾನದ ದೀಪಲಕ್ಷ್ಮಿಯೊಂದು ನೃತ್ಯಭಂಗಿಯಲ್ಲಿದ್ದು ಅವಳ ಎಡಗೈಲಿ ಹಿಡಿದಿರುವ ಹಣತೆಗೆ ಹೀಗೆ ಎಣ್ಣೆ ಬಿಡುವ ವ್ಯವಸ್ಥೆ ಇದೆ. 18ನೆಯ ಶತಮಾನದ ಇನ್ನೊಂದು ದೀಪಲಕ್ಷ್ಮಿ ಎಡಗೈಯಲ್ಲಿ ದೀಪಪಾತ್ರೆಯನ್ನು ಹಿಡಿದಿದ್ದು ಬಲಗೈಯಲ್ಲಿ ಎಣ್ಣೆ ಪಾತ್ರೆಯನ್ನು ಬಗ್ಗಿಸಿ ಪಾತ್ರೆಗೆ ಹೊಯ್ಯುತ್ತಿರುವಂತಿದೆ. ದಕ್ಷಿಣ ಭಾರತದಲ್ಲಿ ದೊರೆತ 19ನೆಯ ಶತಮಾನದ ಗಜಲಕ್ಷ್ಮಿ ದೀಪವೊಂದರಲ್ಲಿ ಪದ್ಮಾಸನದಲ್ಲಿ ಕುಳಿತ, ಚತುರ್ಭುಜಳಾದ ಲಕ್ಷ್ಮಿ, ಸೊಂಡಿಲನ್ನು ಮೇಲಕ್ಕೆತ್ತಿದ ಎರಡು ಗಜಗಳು, ಆಚೀಚೆ ಚಾಮರಧಾರಿಣಿಯರು ಮತ್ತು ದೀಪಪಾತ್ರೆಯ ತುದಿಯಲ್ಲಿ ಎರಡು ಗಿಳಿಗಳು ಕೆತ್ತಲ್ಪಟ್ಟಿವೆ. ಗಜಲಕ್ಷ್ಮಿಯ ಹಿಂಭಾಗ ಸುಂದರವಾದ ಪ್ರಭಾವಳಿಯನ್ನೊಳಗೊಂಡಿದೆ.

ಕಾಲುದೀಪಗಳಲ್ಲಿ ಕಂಡುಬರುವ ಆಕಾರ ವೈವಿಧ್ಯ ನಿಜಕ್ಕೂ ಗಮನಾರ್ಹವಾದದ್ದು. ಅಪೂರ್ವ ಮಾದರಿಯ ಕಾಲುದೀಪದಲ್ಲಿ ಐದು ಜ್ಯೋತಿಗಳನ್ನುರಿಸಲು ಅನುಕೂಲವಾಗುವಂತೆ ಸುತ್ತ ಐದು ಗುಳಿಗಳಿದ್ದು ಕೆಳಗಡೆ ಪ್ರತ್ಯೇಕ ಎಣ್ಣೆ ತಟ್ಟೆ ಇದೆ. ಇದು 17ನೆಯ ಶತಮಾನದಲ್ಲಿ ಆಂಧ್ರದಲ್ಲಿ ನಿರ್ಮಿತವಾದ ಕಾಲುದೀಪ. ನೇಪಾಳದಲ್ಲಿ ದೊರೆತ ಸುಂದರ ಕಾಲುದೀಪ ಚಿತ್ತಾಕರ್ಷಕ ವಿನ್ಯಾಸವನ್ನು ಹೊಂದಿವೆ. 19ನೆಯ ಶತಮಾನದ ಇನ್ನೊಂದು ಕಾಲುದೀಪ ಅಷ್ಟದಿಕ್ಕುಗಳಿಗೂ ಮೋರೆ ಚಾಚಿದ ದೀಪಪಾತ್ರೆಗಳಿಂದ ಕೂಡಿದ್ದು, ಕೆಳಬದಿಗೆ ನೇತುಹಾಕಿದ ಉಂಗುರ ವಿನ್ಯಾಸ, ಪೀಠಭಾಗದಲ್ಲಿ ತಾವರೆ ದಳಗಳ ವಿನ್ಯಾಸವನ್ನು ಹೊಂದಿವೆ. ಪ್ರತ್ಯೇಕವಾದ ಐದು ದೀಪಪಾತ್ರೆಗಳನ್ನೊಳಗೊಂಡು, ತುದಿಯಲ್ಲಿ ಬಿರಿದ ಮೊಗ್ಗಿನ ವಿನ್ಯಾಸವನ್ನು ಹೊಂದಿದ, ಅಥವಾ ಗಿಳಿ, ಹಂಸ, ನವಿಲು ಮುಂತಾದ ಪಕ್ಷಿಗಳ ಕೆತ್ತನೆಗಳಿಂದ ಕೂಡಿದ ಕಾಲುದೀಪಳು ಕೇರಳ ಕರ್ನಾಟಕ ಗುಜರಾತ್ ಆಂಧ್ರಪ್ರದೇಶ ತಮಿಳುನಾಡು ಮುಂತಾದೆಡೆಗಳಲ್ಲಿ ಕಂಡುಬರುತ್ತವೆ. ದಕ್ಷಿಣ ಭಾರತದಲ್ಲಿ ದೊರೆತ 19ನೆಯ ಶತಮಾನದ ಕಾಲುದೀಪವೊಂದರಲ್ಲಿ ಎಂಟು ದಳಗಳುಳ್ಳ ಪ್ರಧಾನ ದೀಪಪಾತ್ರೆ ಇದ್ದು, ಅದರ ಮೇಲ್ಭಾಗದಲ್ಲಿ ಪುಚ್ಛವರಳಿಸಿ, ನೃತ್ಯಭಂಗಿಯಲ್ಲಿರುವ ಮನಮೋಹಕ ನವಿಲಿದೆ. ಪೀಠ ಭಾಗದಲ್ಲಿ ಅಷ್ಟದಳಗಳುಳ್ಳ ನಾಲ್ಕು ಪ್ರತ್ಯೇಕ ದೀಪಪಾತ್ರೆಗಳನ್ನು ಆಕರ್ಷಕವಾಗಿ ಸೇರಿಸಿದ್ದು ಪ್ರತಿಯೊಂದರ ಮೇಲ್ಭಾಗದಲ್ಲೂ ಗರಿಗೆದರಿ ಕುಣಿಯುವ ನವಿಲಿರುತ್ತವೆ. ನೇಪಾಳದಲ್ಲಿ ದೊರೆತ ಇನ್ನೊಂದು ಕಾಲುದೀಪದ ಮೂರು ವೃತ್ತಾಕಾರದ ದೀಪಪಾತ್ರೆಗಳಲ್ಲಿ ಕರ್ಪೂರ ಹಾಕಿ ಉರಿಸುತ್ತಿದ್ದರೆಂದು ಕಾಣುತ್ತದೆ.

ಸರಪಳಿಗಳಿರುವ ತೂಗುದೀಪಗಳು ಚಿತ್ತಾಕರ್ಷಕವಾಗಿದ್ದು, ಜಗತ್ತಿನ ಎಲ್ಲ ಭಾಗಗಳಲ್ಲಿಯೂ ವೈವಿಧ್ಯಮಯ ರೀತಿಯಲ್ಲಿ ಕಂಡುಬರುತ್ತವೆ. ರಾಜಮಹಾರಾಜರ ಅರಮನೆಗಳಲ್ಲಿ ಚರ್ಚುಗಳಲ್ಲಿ ಹಿಂದೂ ದೇವಾಲಯಗಳಲ್ಲಿ ಶೋಭಿಸುವ ತೂಗುದೀಪಗಳ ಆಕಾರ ವೈವಿಧ್ಯ ಗಮನ ಸೆಳೆಯುವಂಥಹುದು. ರಾಜಸ್ತಾನದಲ್ಲಿ ದೊರೆತ 17ನೆಯ ಶತಮಾನದ ತೂಗುದೀಪ ಉಲ್ಲೇಖನಾರ್ಹ. ಹೆಣ್ಣು ನವಿಲೊಂದು ತನ್ನ ಪಾದಗಳಿಂದ 2 ದಳಗಳುಳ್ಳ ದೀಪಪಾತ್ರೆಯನ್ನು ಹಿಡಿದಿದೆ. ಈ ನವಿಲಿನ ಒಡಲೇ ತೈಲಪಾತ್ರೆಯಾಗಿದ್ದು ಅಲ್ಲಿಂದ ದೀಪಪಾತ್ರೆಗೆ ಎಣ್ಣೆ, ನಳಿಕೆಯ ಮೂಲಕ ಬರುತ್ತದೆ. ಮೇಲ್ಭಾಗದಲ್ಲಿ ಬೇರೆ ಬೇರೆ ಸಂಗೀತ ವಾದ್ಯ ವಿಶೇಷಗಳೊಂದಿಗೆ ನಿಂತಿರುವ ಸ್ತ್ರೀ ವಿಗ್ರಹಗಳನ್ನುಳ್ಳ, ಸರಪಳಿ ಇದೆ. ಇದರಲ್ಲಿ ಕಲಾಕಾರನ ಕೌಶಲ ಜಾಣ್ಮೆ ಮನೋಜ್ಞವಾಗಿ ಮೂಡಿಬಂದಿದೆ. ದಕ್ಷಿಣ ಭಾರತದಲ್ಲಿ ದೊರೆತ 18ನೆಯ ಶತಮಾನದ ತೂಗುದೀಪವೊಂದರ ಸರಪಳಿಯಲ್ಲಿ ಡೊಂಬರಾಟದ ಹುಡುಗಿ ಕಾಲುಗಳೆರಡನ್ನೂ ಹಿಂಭಾಗದಿಂದ ಎತ್ತಿ ತಂದು ತಲೆಯನ್ನು ಮುಟ್ಟಿಸುತ್ತಿರುವುಂತೆ ಕೆತ್ತಿರುವುದು ನಿಜಕ್ಕೂ ಅದ್ಭುತವಾಗಿದೆ. ಕೆಲವು ತೂಗುದೀಪಗಳ ಸರಪಳಿಯಲ್ಲಿ ಚಕ್ರವಿದ್ದು, ಅದರ ಮಧ್ಯಭಾಗದಲ್ಲಿ ಮೂರು ನಾಮಗಳೂ ಚಿತ್ರಿತವಾಗಿರುತ್ತವೆ. ದಕ್ಷಿಣ ಭಾರತದಲ್ಲಿ 17ನೆಯ ಶತಮಾನದಲ್ಲಿ ದೊರೆತ ಒಂದು ವೈಷ್ಣವದೀಪ ಈ ಬಗೆಯದು. 16ನೆಯ ಶತಮಾನದ 36 ದಳಗಳ ತೂಗುದೀಪವೊಂದರ ಮೇಲ್ಭಾಗದಲ್ಲಿ ಮಾವುತ ಸಹಿತವಾದ ಆನೆಯೂ ಮಾವುತನ ಶಿರಸ್ಸಿನಿಂದ ಹೊರಟ ಸರಪಳಿಯೂ ಇವೆ. ಆನೆಯ ಪಾದದಡಿಯಲ್ಲಿ ಎಣ್ಣೆಯ ಪಾತ್ರೆ ಇರುವುದು ಇದರ ವೈಶಿಷ್ಟ್ಯ. ದಕ್ಷಿಣ ಭಾರತದಲ್ಲಿ ದೊರೆತ 17ನೆಯ ಶತಮಾನದ ಒಂದು ತೂಗುದೀಪ ಶಂಖಾಕೃತಿಯಲ್ಲಿದ್ದು, ಅದರ ಮುಚ್ಚಳ ಭಾಗದಲ್ಲಿ ಒಂದು ನವಿಲು ಮತ್ತು ಸರಪಳಿಯ ಮಧ್ಯಭಾಗದಲ್ಲಿ ಇನ್ನೊಂದು ನವಿಲು ಕೆತ್ತಲ್ಪಟ್ಟಿದೆ. ಮೊಗಲ ಶೈಲಿಯ ತೂಗುದೀಪಗಳು ಅತ್ಯಂತ ಸುಂದರವೂ ಕೌಶಲಪೂರ್ಣವೂ ಆಗಿರುತ್ತವೆ. ಹಿತ್ತಾಳೆ, ತಾಮ್ರ ಮುಂತಾದ ಲೋಹಗಳಿಂದ ಮಾಡಿದ ಗೋಳಾಕಾರದ ಇಲ್ಲವೇ ಮೊಟ್ಟೆಯಾಕಾರದ, ಅಷ್ಟಕೋನಾಕೃತಿಯ ಮತ್ತು ಚೌರಸಾಕಾರದ ತೂಗುದೀಪಗಳನ್ನು ಇಲ್ಲಿ ಉದಾಹರಿಸಬೇಕು. ಇವುಗಳ ಮೇಲ್ಮೈಯಲ್ಲಿ ಜಟಿಲವಾದ ಭೂಮಿತಿಯ ವಿನ್ಯಾಸವುಳ್ಳ ಅನೇಕ ರಂಧ್ರಗಳು ಕೊರೆಯಲ್ಪಟ್ಟಿದ್ದು, ಒಳಭಾಗದಲ್ಲಿ ಉರಿಯುತ್ತಿರುವ ಜ್ಯೋತಿ ರಂಧ್ರಗಳ ಮೂಲಕ ಅತ್ಯಂತ ಮನೋಹರವಾಗಿ ಕಂಡುಬರುತ್ತದೆ. 19ನೆಯ ಶತಮಾನದ ಮೊಗಲ್ ಶೈಲಿಯ ತೂಗುದೀಪ ಮೂರು ಸರಪಳಿಗಳಿಂದ ಕೂಡಿದ್ದು, ಅದರ ಮೇಲ್ಭಾಗದಲ್ಲಿ ಸೂಕ್ಷ್ಮವಾದ ಲತಾವಿನ್ಯಾಸವನ್ನು ಹೊಂದಿದೆ. ಹೈದರಾಬಾದಿನ 18ನೆಯ ಶತಮಾನದ ತೂಗುದೀಪ ಒಂದು ಪಂಜರದಂತಿದ್ದು ಅದರ ಮಧ್ಯದಲ್ಲಿ ಪುಟ್ಟ ಕಾಲುದೀಪವಿದೆ. ದೀಪ ಹಚ್ಚಿದ ಮೇಲೆ ಒಂದು ಬಟ್ಟೆಯನ್ನು ಪಂಜರದ ಸುತ್ತ ಸುತ್ತುತ್ತಾರೆ. ಬಣ್ಣ ಬಣ್ಣದ ಹರಳುಗಳಿಂದ ಚಿತ್ರ ವಿಚಿತ್ರವಾಗಿ ರಚಿಸಿದ ತೂಗುದೀಪಗಳು ಯೂರೋಪಿನ ಮಧ್ಯಕಾಲೀನ ಅರಮನೆಗಳಲ್ಲಿ, ಚರ್ಚುಗಳಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಮೇಣದ ಬತ್ತಿಯನ್ನು ಹೊತ್ತಿಸಿ ಇಡುತ್ತಿದ್ದರು. ಭಾರತದಲ್ಲೂ ಇಂಥ ಕೆಲವು ವರ್ಣರಂಜಿತ ಹರಳಿನ ತೂಗುದೀಪಗಳು ವಸ್ತುಸಂಗ್ರಹಾಲಯಗಳಲ್ಲಿ ಮತ್ತು ಕೆಲವು ಹಳೆಯ ಅರಮನೆಗಳಲ್ಲಿ ಕಂಡುಬರುತ್ತವೆ.

ಸಮಾಯಿ ಎನ್ನುವ ದೀಪದ ಮುಚ್ಚಳದ ಮೇಲೆ ನವಿಲು, ಆನೆ, ಸರ್ಪ ಮುಂತಾದವು ಅಲಂಕಾರಿಕವಾಗಿ ಕೆತ್ತಲ್ಪಟ್ಟಿರುತ್ತವೆ. ಕೆಲವೊಮ್ಮೆ ಸ್ತಂಬದ ಮೇಲೆ ಗಿಳಿ ಮುಂತಾದುವು ಚಿತ್ರಿತವಾಗಿರುತ್ತವೆ. ದೀಪಲಕ್ಷ್ಮಿಯಾಗಿದ್ದರೆ, ಕೆಲವೊಮ್ಮೆ ಅವಳ ಭುಜದ ಮೇಲೆ ಅಥವಾ ಕಂಕಣದ ಮೇಲೆ ಗಿಳಿ ಕುಳಿತಂತಿರುತ್ತದೆ. ಇನ್ನು ಕೆಲವು ಸಮಾಯಿ ದೀಪಗಳು ಪುಟ್ಟ ದೇವಸ್ಥಾನದ ಗೋಪುರಗಳಂತಿರುತ್ತವೆ. ನೇಪಾಳದಲ್ಲಿ ಇಂಥ ದೀಪಗಳನ್ನು ಯಥೇಚ್ಛವಾಗಿ ಕಾಣಬಹುದು. ಇನ್ನು ಕೆಲವು ಪಿರಮಿಡ್ ಗೋಪುರಾಕಾರವಾಗಿದ್ದು ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಸಿಂಹಗಳು ಕೊರೆಯಲ್ಪಟ್ಟಿರುತ್ತವೆ. ನಕ್ಷತ್ರಾಕಾರದ ದೀಪ, ಗಣೇಶದೀಪ ಮುಂತಾದ ಇತರ ಬಗೆಯ ಮನೆಯ ದೀಪಗಳನ್ನೂ ಇಲ್ಲಿ ಹೆಸರಿಸಬಹುದು. ನೇಪಾಳದಲ್ಲಿ ದೊರೆತ 18 ಶತಮಾನದ ಗಣೇಶದೀಪ ಕುತೂಹಲಕಾರಿಯಾಗಿದೆ. ದೀಪಸ್ತಂಭದ ಮೇಲುಭಾಗದಲ್ಲಿ ಸುಖಾಸನದಲ್ಲಿ ಕುಳಿತ ಗಣಪತಿಯ ಚಿತ್ರವೂ ಪೀಠಭಾಗದಲ್ಲಿ ಮುಖವನ್ನು ದೀಪಪಾತ್ರೆಯೊಳಗೆ ಚಾಚಿಕೊಂಡಿರುವ ಇಲಿಯ ಚಿತ್ರವೂ ಕಂಡುಬರುತ್ತದೆ. ದಕ್ಷಿಣ ಭಾರತದಲ್ಲಿ ದೊರೆತ 17ನೆಯ ಶತಮಾನದ ಒಂದು ಗಜದೀಪ ಗಮನಾರ್ಹವಾದ್ದು. ಸೊಂಡಿಲಲ್ಲಿ ದೀಪ ಪಾತ್ರೆಯನ್ನು ಹಿಡಿದು ನಿಂತ ಆನೆಯ ಮೇಲೆ, ಗಣೇಶ; ಅವನನ್ನು ಸುತ್ತುವರಿದು ಶಿವಲಿಂಗ ನಂದಿ ಮತ್ತು ಸರ್ಪಗಳಿವೆ. ಗುಜರಾತಿನಲ್ಲಿ ದೊರೆತ 18 ನೆಯ ಶತಮಾನದ ಒಂದು ಗಜದೀಪ ವಿಚಿತ್ರವಾಗಿದೆ. ಬೆನ್ನಮೇಲೆ ಎರಡು ದೀಪ ಪಾತ್ರೆಗಳನ್ನು ಹೊತ್ತು ನಿಂತ ಆನೆಯ ಮೇಲೆ ದೇವತೆಯೊಂದು ನೃತ್ಯಭಂಗಿಯಲ್ಲಿ ನಿಂತಿದ್ದು, ಎರಡೂ ಕೈಗಳಲ್ಲಿ ಎರಡು ದೀಪಪಾತ್ರೆಗಳನ್ನು ಹಿಡಿದಿದೆ. ತಲೆಯ ಮೇಲೆ ಏಳು ಹೆಡೆಯ ಸರ್ಪ ಚಿತ್ರಿತವಾಗಿದೆ. ಕರ್ನಾಟಕದಲ್ಲಿ ದೊರೆತ 18ನೆಯ ಶತಮಾನದ ದೀಪದಲ್ಲಿ ನಾಲ್ಕು ಚಕ್ರಗಳುಳ್ಳ ಒಂದು ಪೆಟ್ಟಿಗೆಯ ಮೇಲೆ, ವಿರುದ್ಧ ದಿಕ್ಕಿಗೆ ಮುಖ ಮಾಡಿ ಮಲಗಿರುವ ಎರಡು ಎತ್ತುಗಳನ್ನು ಕೊರೆಯಲಾಗಿದ್ದು ಅವು ದೀಪಪಾತ್ರೆಯನ್ನು ಹೊತ್ತಿವೆ. ಉತ್ತರ ಭಾರತದಲ್ಲಿ ದೊರೆತ 18ನೆಯ ಶತಮಾನದ ದೀಪವೊಂದು ಸಿಂಹದಾಕಾರದಲ್ಲಿದೆ. ದಕ್ಷಿಣ ಭಾರತದ 18 ನೆಯ ಶತಮಾನದ ಮತ್ತೊಂದು ದೀಪ 5 ದೀಪ ಪಾತ್ರೆಗಳನ್ನು ಹೊಂದಿದ್ದು, ಅವುಗಳ ಬುಡದಲ್ಲಿ ಸಂಗೀತಗಾರರ ಸಾಲೂ ಆಚೀಚೆ ಕುದುರೆ ಸವಾರರೂ ಬುಡದಲ್ಲಿ ಇನ್ನೂ ಕೆಲವು ವಿಗ್ರಹಗಳೂ ಕೆತ್ತಲ್ಪಟ್ಟಿವೆ. ದೀಪದ ತುದಿ ಭಾಗದಲ್ಲಿ ಚಿಕ್ಕ ಸರಪಳಿಗಳು ಮೇಲಿಂದ ಕೆಳಗಿನವರೆಗೆ ಎರಡೂ ಭಾಗಗಳಲ್ಲಿ ಜೋತಾಡುತ್ತಿದ್ದು ಅವುಗಳ ತುದಿ ಪತ್ರ ವಿನ್ಯಾಸದಲ್ಲಿದೆ. ನೇಪಾಳದಲ್ಲಿ ದೊರೆತ 19ನೆಯ ಶತಮಾನದ ಸ್ಮøತಿ ದೀಪದಲ್ಲಿ ರಾಜನೊಬ್ಬ ಕೈ ಜೋಡಿಸಿ ಕುಳಿತಿರುವಂತಿದೆ.

ಭಾರತದಲ್ಲಿ ಕಾರ್ತೀಕ ಮಾಸದಲ್ಲಿ, ಪಾಶ್ಚಾತ್ಯ ದೇಶಗಳಲ್ಲಿ ಕ್ರಿಸ್‍ಮಸ್ ಹಬ್ಬದಂದು ಸಾಮಾನ್ಯವಾಗಿ ಆಕಾಶ ದೀಪಗಳನ್ನು ಎತ್ತರವಾದ ಜಾಗದಲ್ಲಿಡುವ ಪದ್ಧತಿ ಇದೆ. ಶ್ರಾವಣ ಶುಕ್ರವಾರದಂದು ಕೆಲವು ಕಡೆ ಹಿಟ್ಟಿನ ದೀಪಗಳನ್ನು ಉರಿಸುತ್ತಾರೆ. ಆಷಾಢಮಾಸದ ಅಮಾವಾಸ್ಯೆಯಂದು ವರ್ಷವಿಡೀ ಉಪಯೋಗಿಸಿದ ದೀಪಗಳನ್ನು ವಿಸರ್ಜಿಸಿ, ಹೊಸದೀಪಗಳನ್ನು ತರುತ್ತಾರೆ. ಅದನ್ನು ದೀಪರಾತ್ರಿಯೆಂದೇ ಕರೆಯುತ್ತಾರೆ. ಪವಿತ್ರ ಕಾರ್ಯಗಳನ್ನು ಮಾಡುವಾಗ ಸಾಕ್ಷಿದೀಪಗಳನ್ನು ಉರಿಸುವುದುಂಟು. ಕೆಲವು ಉದ್ಘಾಟನಾ ಸಮಾರಂಭಗಳನ್ನು ದೀಪಗಳನ್ನು ಹಚ್ಚುವುದರ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸುವುದು ಈಗ ವಾಡಿಕೆ. ದೀಪದ ವೈಭವ ವಿಶೇಷವಾಗಿ ಕಂಡುಬರುವುದು ದೀಪಾವಳಿಯಂದು. ಮಲೆನಾಡಿನಲ್ಲಿ ಅಂಟಿಕೆಪಂಟಿಕೆಯವರ ಸಾಂಪ್ರದಾಯಿಕ ವೈಶಿಷ್ಟ್ಯಪೂರ್ಣ ದೀಪ ಆ ಸಮಯದಲ್ಲಿಯೇ ನಮಗೆ ನೋಡಸಿಗುವುದು. ಹಿಂದಿನ ಕಾಲದಲ್ಲಿ ವೀರರನ್ನು ಯುದ್ಧಕ್ಕೆ ಕಳಿಸುವಾಗ, ಅವರು ವಿಜಯಿಗಳಾಗಿ ಬಂದಾಗ, ದೀಪದೊಂದಿಗೆ ಗೌರವಿಸುವ ಪದ್ಧತಿ ಇತ್ತು. ಮಹಾತ್ಮಗಾಂಧಿಯವರು ದಂಡಿಯಾತ್ರೆ ಕೈಗೊಂಡಾಗ ಪ್ರತಿಯೊಂದು ಊರಿನಲ್ಲಿಯೂ ದಾರಿಯುದ್ದಕ್ಕೂ ಮಹಿಳೆಯರು ಪ್ರಾರ್ಥನಾದೀಪದೊಂದಿಗೆ ಅವರನ್ನು ಸ್ವಾಗತಿಸುತ್ತಿದ್ದರು. ಮಧುರಾ ಪಂಜಾಬ್ ಮುಂತಾದ ಪ್ರದೇಶಗಳಲ್ಲಿ ದೀಪಹಿಡಿದು ಮಾಡುವ ನೃತ್ಯಗಳು ಕಂಡುಬರುತ್ತವೆ. ವಿದ್ಯುದ್ದೀಪಗಳು ಬಂದಮೇಲೆ ಅವುಗಳಲ್ಲಿ ಕಂಡುಬರುವ ವೈವಿಧ್ಯ, ಚಿತ್ತಾಕರ್ಷವರ್ಣವಿನ್ಯಾಸ, ಅತ್ಯದ್ಭುತವಾಗಿದೆ. ರಾತ್ರಿ ಹೊತ್ತು ದೊಡ್ಡ ದೊಡ್ಡ ಪಟ್ಟಣಗಳು ಇಂದ್ರಜಾಲ ನಗರಿಯಂತೆ ವರ್ಣರಂಜಿತ ದೀಪಗಳಿಂದ ಶೋಭಿಸುತ್ತಿರುತ್ತವೆ. ದೀಪಾಲಂಕೃತ ಮೈಸೂರು ಅರಮನೆ ದಸರಾದಲ್ಲಿ ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ. ಅಂಡೆದೀಪ, ಗೋಳದೀಪ, ನಿಯಾನ್ ದೀಪ, ಅಣು ವಿದ್ಯುತ್ ದೀಪ, ಚಿಮಣಿ ದೀಪ, ಗ್ಯಾಸ್‍ದೀಪ ಇತ್ಯಾದಿ ನಾನಾ ಬಗೆಯ ನಾನಾ ಆಕಾರಗಳ ದೀಪಗಳ ಬಳಕೆ ಇಂದು ಕಂಡುಬರುತ್ತದೆ.

ಮಾನವ ಜೀವನದ ಅವಿಭಾಜ್ಯ ಅಂಗವಾಗಿ, ದೀಪಜ್ಯೋತಿ, ಹುಟ್ಟಿದಂದಿನಿಂದ ಸಾಯುವವರೆಗೆ ಒಂದಲ್ಲ ಒಂದು ರೂಪದಲ್ಲಿ ಉಪಯೋಗದಲ್ಲಿದೆ. ದೀಪ ಜ್ವಾಲೆಯನ್ನಾಧರಿಸಿ, ಶುಭಾಶುಭಗಳನ್ನು ಹೇಳುವ ಪದ್ಧತಿಯೂ ಕಂಡುಬರುತ್ತದೆ. ದೀಪ ಒಣಗಿದರೆ ಸಂಪತ್ತು ನಾಶ. ಬಿಳಿಜ್ವಾಲೆ ಅನ್ನನಾಶ ಸೂಚಕ, ಅತಿ ಕೆಂಪು ಜ್ವಾಲೆ ಯುದ್ಧದ ಸಂಕೇತ. ಕಪ್ಪು ಜ್ವಾಲೆ ಮರಣದ ಸಂಕೇತಗಳೆಂದು ಪುರುಷೋತ್ತಮ ಮಹಾತ್ಮೆಯಲ್ಲಿ ಹೇಳಲಾಗಿದೆ. ದೀಪಜ್ಯೋತಿ ಗಾಳಿಗೆ ನಂದಿದರೆ ಅಥವಾ ಕೈಜಾರಿ ಕೆಳಗೆ ಬಿದ್ದರೆ ಅಶುಭವೆಂದು ಭಾವಿಸುವುದುಂಟು. ಅದೇನಿದ್ದರೂ ತಮಸೋಮಾ ಜ್ಯೋತಿರ್ಗಮಯವೆಂದು ಪ್ರಾರ್ಥಿಸಿದ ಭಾರತೀಯರು ಜ್ಯೋತಿಯನ್ನು ಜ್ಯೋತಿಷಾಂ ಜ್ಯೋತಿರುತ್ತಮಂ ಎಂದು ತಿಳಿದಿದ್ದರು. (ಎಚ್.ಆರ್.ಆರ್.ಬಿ.)