ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದುಷ್ಯಂತ

ವಿಕಿಸೋರ್ಸ್ದಿಂದ

ದುಷ್ಯಂತ ಚಂದ್ರವಂಶದಲ್ಲಿ ಪ್ರಸಿದ್ಧನಾದ ದೊರೆ, ತಂದೆ ಇಲ್ಲ. ನಾಲ್ವರು ಸಹೋದರರು - ಶೂರ, ಭೀಮ, ವಸು, ಪ್ರವಸು ಎಂದು, ಮೊದಲ ಹೆಂಡತಿ ಲಕ್ಷ್ಮೀ. ಆಕೆಯಲ್ಲಿ ಹುಟ್ಟಿದ ಮಗ ಜನಮೇಜಯ. ಎರಡನೆಯ ಹೆಂಡತಿ ಶಕುಂತಲೆ. ಇವಳು ವಿಶ್ವಾಮಿತ್ರ ಮೇನಕೆಯರ ಮಗಳು. ಕಣ್ವಾ ಶ್ರಮದಲ್ಲೇ ಬೆಳೆದ ಈಕೆಯನ್ನು ಬೇಟೆಗೆ ಹೋದ ದುಷ್ಯಂತ ಕಂಡು ಮೋಹಿತನಾಗಿ ಗಾಂಧರ್ವ ರೀತಿಯಲ್ಲಿ ಈಕೆಯನ್ನು ವಿವಾಹವಾಗುತ್ತಾನೆ. ಕೆಲಕಾಲ ಜೊತೆಗಿದ್ದು ತಾನೊಬ್ಬನೇ ರಾಜಧಾನಿಗೆ ಹಿಂತಿರುಗುತ್ತಾನೆ. ಗರ್ಭವತಿ ಶಕುಂತಲೆ ಆಶ್ರಮದಲ್ಲಿದ್ದುಕೊಂಡು ಗಂಡುಮಗುವನ್ನು ಪ್ರಸವಿಸುತ್ತಾಳೆ. ಕಣ್ವರು ಮಗುವಿಗೆ ಸರ್ವದಮನ ಎಂದು ನಾಮಕರಣ ಮಾಡುತ್ತಾರೆ. ದುಷ್ಯಂತ ಮತ್ತೆ ಕಣ್ವಾ ಶ್ರಮಕ್ಕೆ ಬರುವುದೂ ಇಲ್ಲ; ಹೆಂಡತಿಯನ್ನು ಕರೆಸಿಕೊಳ್ಳುವುದೂ ಇಲ್ಲ. ಆಗ ಕಣ್ವರು ಶಕುಂತಲೆಯನ್ನೂ ಸರ್ವದಮನನನ್ನೂ ಗಂಡನ ಮನೆಗೆ ಕಳುಹಿಸಿಕೊಡುತ್ತಾರೆ. ದುಷ್ಯಂತ ಶಕುಂತಲೆಯನ್ನು ಮರೆತುಬಿಟ್ಟಿದ್ದನಾದ ಕಾರಣ ತಾನು ಆತನ ಪತ್ನಿ ಎಂಬುದನ್ನು ಹೇಗೆ ಸ್ಪಷ್ಟಪಡಿಸಿದರೂ ಆಕೆಯನ್ನು ಅವನು ಗುರುತಿಸಲಾರದಾಗುತ್ತಾನೆ ಆ ಸಮಯದಲ್ಲಿ ಅಶರೀರವಾಣಿಯೊಂದು ಶಕುಂತಲೆ ಆತನ ಪತ್ನಿ ಎಂದೂ ಸರ್ವದಮನ ಆತನ ಮಗನೆಂದೂ ಅವರಿಬ್ಬರನ್ನೂ ಸ್ವೀಕರಿಸಬೇಕೆಂದೂ ನುಡಿಯುತ್ತದೆ. ಆಗ ದುಷ್ಯಂತ ಮರುಮಾತಾಡದೆ ಸ್ವೀಕರಿಸುತ್ತಾನೆ. ಆಗಲೆ ಮಗನಿಗೆ ಭರತ ಎಂದು ಹೊಸದಾಗಿ ಹೆಸರಿಡುತ್ತಾನೆ. ಮಹಾಭಾರತದ ಆದಿಪರ್ವದಲ್ಲಿ ಬರುವ ದುಷ್ಯಂತೋಪಾಖ್ಯಾನವೆಂಬ ಈ ಕತೆಯನ್ನು ಕೆಲವು ಮಾರ್ಪಾಡುಗಳೊಂದಿಗೆ ಕಾಳಿದಾಸ ಬಳಸಿಕೊಂಡು ತನ್ನ ವಿಶ್ವವಿಖ್ಯಾತ ಅಭಿಜ್ಞಾನ ಶಾಕುಂತಲಾ ಎಂಬ ನಾಟಕವನ್ನು ಬರೆದಿದ್ದಾನೆ.

    									            (ಬಿ.ಎನ್.ಎನ್.ಬಿ.)