ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಧೂಪದ ಮರ

ವಿಕಿಸೋರ್ಸ್ದಿಂದ

ಧೂಪದ ಮರ - ಡಿಪ್ಟರೋಕಾರ್ಪೇಸೀ ಕುಟುಂಬಕ್ಕೆ ಸೇರಿದ ಒಂದು ವನ್ಯವೃಕ್ಷ. ರಾಳದಮರ ಪರ್ಯಾಯನಾಮ. ವ್ಯಾಟೀರಿಯ ಇಂಡಿಕ ಇದರ ವೈe್ಞÁನಿಕ ಹೆಸರು. ಇದು ದಕ್ಷಿಣ ಭಾರತದ ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಬೆಳೆಯುತ್ತದೆ. ಕೇರಳದಲ್ಲೂ 4,000 ಗಳಿಗಿಂತ ಉನ್ನತ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಇದು 20' - 30' ಎತ್ತರಕ್ಕೆ ಬೆಳೆಯುವುದು. ತೊಗಟೆ ಒರಟಾದುದೂ ಬಿಳಿಮಿಶ್ರಿತ ಬೂದುಬಣ್ಣದ್ದೂ ಆಗಿದೆ. ತೊಗಟೆಯ ದಪ್ಪ 3/8". ತೊಗಟೆ ಪದರ ಪದರವಾಗಿ ಸುಲಿದು ಬೀಳುತ್ತದೆ. ಕಾಂಡದ ಚೇಗುಭಾಗ ಬೂದು ಬಣ್ಣದ್ದು ಇದರ ಅಂಚು ಕೆಂಪಗಿದೆ. ಧೂಪದ ಮರ ಹೂ ಬಿಡುವ ಕಾಲ ಜನವರಿ - ಮಾರ್ಚ್.

ಈ ವೃಕ್ಷದ ಉಪಯೋಗಗಳು ಹಲವಾರು. ಇದರ ಚೌಬೀನೆಯನ್ನು ಚೆನ್ನಾಗಿ ಪಾಲಿಷ್ ಮಾಡಿ ಅನೇಕ ಗೃಹೋಪಯೋಗಿವಸ್ತುಗಳನ್ನು ತಯಾರಿಸಲು ಬಳಸುವುದುಂಟು. ಅನೇಕ ಪೀಠೋಪಕರಣಗಳನ್ನು ಸಹ ಇದರಿಂದ ತಯಾರಿಸಬಹುದು. ಕಾಂಡದಿಂದ ಒಂದು ಬಗೆಯ ಅಂಟು ಹೊರಬರುತ್ತದೆ. ಇದಕ್ಕೆ ರಾಳ ಅಥವಾ ಧೂಪ (ಡ್ಯಾಮರ್) ಎಂದು ಹೆಸರು. ಇದರಲ್ಲಿ ಮೂರು ಬಗೆಗಳುಂಟು. ಒತ್ತಾದ ರಾಳ (ಕಾಂಪ್ಯಾಕ್ಟ್ ಡ್ಯಾಮರ್), ಕೋಶಮಯ ರಾಳ (ಸೆಲ್ಯುಲರ್ ಡ್ಯಾಮರ್) ಮತ್ತು ಕಪ್ಪುರಾಳ (ಬ್ಲ್ಯಾಕ್ ಡ್ಯಾಮರ್). ವೃಕ್ಷದ ವಯಸ್ಸು ಹಾಗೂ ರಾಳ ಸಂಗ್ರಹದ ವಿಧಾನವನ್ನನುಸರಿಸಿ ಈ ಮೂರು ಬಗೆಗಳು ಲಭಿಸುವುವು. ಕಾಂಡವನ್ನು ಕೊರೆದು ಸಹ ಅಂಟನ್ನು ಪಡೆಯಬಹುದು. ಇದು ಟರ್ಪಂಟೈನ್‍ನಲ್ಲಿ ಸಂಪೂರ್ಣವಾಗಿ ಹಾಗೂ ಆಲ್ಕೊಹಾಲಿನಲ್ಲಿ ಸ್ವಲ್ಪ ಮಟ್ಟಿಗೆ ಕರಗುತ್ತದೆ. ಮರಮುಟ್ಟುಗಳಿಗೆ ಹೊಳಪು ಕೊಡಲು ಇದನ್ನು ತೆಂಗಿನೆಣ್ಣೆಯೊಡನೆ ಬೆರೆಸಿ ಮೇಣದ ಬತ್ತಿಗಳನ್ನು ತಯಾರಿಸಬಹುದು. ಗಟ್ಟಿಗೊಳಿಸಿದ ಅಂಟಿನಿಂದ ಕೃತಕ ಮಣಿಗಳನ್ನು ತಯಾರಿಸಲಾಗುತ್ತದೆ. ಅಂಟಿಗೆ ಅನೇಕ ಔಷಧೀಯ ಗುಣಗಳೂ ಇವೆ. ಇದನ್ನು ಎಣ್ಣೆಯ ಜೊತೆಗೆ ಕಾಸಿ ಹಚ್ಚಿದರೆ ವಾತದ ಬಾವು ಗುಣವಾಗುತ್ತದೆ. ರಾಳದ ಮರದ ಬೀಜದಲ್ಲಿ ಒಂದು ಬಗೆಯ ಗಟ್ಟಿಯಾದ ಕೊಬ್ಬು ಉಂಟು. ಇದಕ್ಕೆ ಸಸ್ಯಮೂಲ ಬೆಣ್ಣೆ (ವೆಜಿಟೇಬಲ್ ಬಟರ್) ಎಂದು ಹೆಸರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದನ್ನು ದೀಪ ಉರಿಸುವುದಕ್ಕೂ ಆಹಾರ ಪದಾರ್ಥಗಳಿಗೆ ಸುವಾಸನೆ ಕೊಡುವುದಕ್ಕೂ ಬೆಣ್ಣೆ, ತುಪ್ಪ ಮುಂತಾದವುಗಳಿಗೆ ಬೆರಕೆ ಮಾಡುವುದಕ್ಕೂ ಉಪಯೋಗಿಸುವುದುಂಟು. ಕಾಯಿಯಲ್ಲಿರುವ ಎಣ್ಣೆಗೂ ಸಹ ಅನೇಕ ಔಷಧೀಯ ಗುಣಗಳುಂಟು. ಕಾಯಿಯನ್ನು ಜಜ್ಜಿ ಬಿಸಿನೀರಿನಲ್ಲಿಟ್ಟು ಕುಡಿದರೆ ವಾಂತಿ ನಿಲ್ಲುವುದು. ಅಲ್ಲದೆ ಈ ಎಣ್ಣೆಯನ್ನು ವಾತರೋಗದಲ್ಲಿ ಮೈಗೆ ಹಚ್ಚುವುದುಂಟು. ಕೊಬ್ಬಿನಿಂದ ಮೋಂಬತ್ತಿಗಳನ್ನು ಸಹ ಮಾಡಬಹುದು. ಶ್ರೀಲಂಕಾದಲ್ಲಿ ಮರದ ತೊಗಟೆಯನ್ನು ಹೆಂಡದ ತಯಾರಿಕೆಯಲ್ಲಿ ಬುರುಗು ಬರಿಸಲು ಉಪಯೋಗಿಸುತ್ತಾರೆ. ಮರದ ಎಲೆಗಳನ್ನು ಪತ್ರಾವಳಿಗಳಂತೆ ಸಹ ಬಳಸಬಹುದು. (ಎಸ್.ಐ.ಎಚ್.)