ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಗವರ್ಮ 2

ವಿಕಿಸೋರ್ಸ್ದಿಂದ

"ನಾಗವರ್ಮ ೨" : - ಸು. 1042. ಜೈನಕವಿ ಹಾಗೂ ಲಾಕ್ಷಣಿಕ. ಕಾವ್ಯಾವಲೋಕನ, ಕರ್ಣಾಟಕ ಭಾಷಾಭೂಷಣ, ಅಭಿಧಾನ ವಸ್ತುಕೋಶ, ವರ್ಧಮಾನ ಪುರಾಣ ಮತ್ತು ಛಂದೋವಿಚಿತಿ ಗ್ರಂಥಗಳ ಕರ್ತೃ. ವರ್ಧಮಾನ ಪುರಾಣದಲ್ಲಿ ಬರುವ

"ಗದ್ಯದೊಳಂ ಪದ್ಯದೊಳಂ ಛೋದ್ಯಮಿದೆನೆ ವತ್ಸರಾಜ ಚರಿತಾಗಮಮಂ ವಿದ್ಯಾನಿಧಿ ಬರೆದಂ ನಿರ ವದ್ಯಗು(ಣಂ) ನಾಗವರ್ಮನುಪಚಿತ ಶರ್ಮಂ" ಎಂಬ

ಪದ್ಯದಿಂದ ಈತ ವತ್ಸರಾಜಚರಿತೆ ಎಂಬ ಚಂಪೂಕೃತಿಯ ಕರ್ತೃವೂ ಆಗಿರುವಂತೆ ತಿಳಿದುಬರುತ್ತದೆ. ಕವಿಚರಿತೆಕಾರರು ಈತನ ಕಾಲವನ್ನು ಸು. 1145 ಎಂದೂ ಎ. ವೆಂಕಟಸುಬ್ಬಯ್ಯನವರು ಚಾಳುಕ್ಯ ಚಕ್ರವರ್ತಿ ಜಯಸಿಂಹ ಜಗದೇಕಮಲ್ಲನಲ್ಲಿ ಈತ ಕಟಕೋಪಾಧ್ಯಾಯನಾಗಿದ್ದಿರಬಹುದಾದ್ದರಿಂದ ಈತನ ಕಾಲ 1015 ರಿಂದ 1042 ಎಂದೂ ತಮಗೆ ದೊರೆತ ಹಲವಾರು ಕಾರಣಗಳನ್ನು ಕ್ರೋಡೀಕರಿಸಿ ನಿರ್ಣಯಿಸಿದ್ದರೂ. ಈಗ ವರ್ಧಮಾನಪುರಾಣದ ಹಸ್ತಪ್ರತಿ ದೊರೆತಿದ್ದು ಅದರಲ್ಲಿ ಕೃತಿರಚನಾಕಾಲ ಸೂಚಿಯಾದ ಪದ್ಯ ದೊರೆತಿರುವುದರಿಂದ ಈತನ ಕಾಲವನ್ನು ಕ್ರಿ.ಶ. 1042 ಎಂದು ನಿರ್ಣಯಿಸಬಹುದಾಗಿದೆ.

ಈತ ಶ್ರೀವಿಜಯ, ಗುಣವರ್ಮ, ಪಂಪ, ನಾಗದೇವರನ್ನು ಸ್ತುತಿಸುವುದಲ್ಲದೆ, ತನಗಿಂತ ಹಿಂದೆ ಇದ್ದ ಕವಿಗಳಲ್ಲಿ `ದೀರ್ಘೋಕ್ರ್ತಿನಯಸೇನಸ್ಯ ಎಂಬ ಸೂತ್ರದಲ್ಲಿ ನಯಸೇನನ್ನು `ಹರಿಪಾಲಸ್ಯ ಪ್ರಯೋಗಃ ತಥಾ ಗುಣವರ್ಮಕ ವೇರ್ಭುವನೈಕವೀರಸ್ಯ ಪ್ರಯೋಗಃ' ಎಂದು ಹೇಳುವಲ್ಲಿ ಹರಿಪಾಲ ಗುಣವರ್ಮರನ್ನೂ ಕಾವ್ಯಾವಲೋಕನದಲ್ಲಿಯ

ಪ್ರಣತಗುಣರೆನಿಪ ವಿಬುಧಾ
ಗ್ರಣಿಗಳ್ ಕೆಯ್ಕೊಂಡು ಪೊಗ?ಲ್ ಸಲೆ ನೆಗಳ್ದು?ವುಧಾ
ರಿಣಿಯೊಳಗೆ ನಾಗವರ್ಮನ
ಗುಣವರ್ಮನ ಶಂಖವರ್ಮನಧ್ವಾನಂಗಳ್

ಎಂಬ ಈ ಪದ್ಯದ ಪ್ರಕಾರ ನಾಗವರ್ಮ, ಗುಣವರ್ಮ, ಶಂಖವರ್ಮರನ್ನೂ ಹೆಸರಿಸಿದ್ದಾನೆ. ಕಾವ್ಯಾವಲೋಕನ ಮತ್ತು ಭಾಷಾಭೂಷಣಗಳಲ್ಲಿ ಪಂಪ, ಪೊನ್ನ, ರನ್ನ, ಹಂಸರಾಜ, ನಾಗಚಂದ್ರ - ಮೊದಲಾದ ಕವಿಗಳ ಗ್ರಂಥಗಳಿಂದ ಅನೇಕ ಪದ್ಯಗಳು ಉದಾಹೃತವಾಗಿವೆ. ಈತನನ್ನು ಆಚಣ್ಣ (ಸು. 1195), ಜನ್ನ, ಸಾಳ್ವ (ಸು. 1600), ದೇವೋತ್ತಮ (ಸು. 1600) ಮೊದಲಾದ ಕವಿಗಳು ಸ್ತುತಿಸಿದ್ದಾರೆ.

ಈತನ ತಂದೆ ವಿಪ್ರಕುಳಪ್ರದೇಪನನಘಂ ದಾಮೋದರಂ; ತಾಯಿ ವಿನಯಾಳಂಕೃತೆ ವೀರಕಬ್ಬೆ. ಆರಾಧ್ಯದೈವ ಶ್ರೀ ವೀರಭಟ್ಟಾರಕ ಎಂದು ಈತನ ಬರೆಹದಿಂದಲೇ ತಿಳಿದುಬರುತ್ತದೆ.

ತಾನು ಜಿನಮತವನಹಂಸಂ ವಿಪ್ರವಂಶಾವತಂಸಂ......ಸ್ವನುಗತ ಶುಭಶರ್ಮಂ ನಿರ್ಮಳಂ ನಾಗವರ್ಮಂ ಎಂದು ಕವಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಜನ್ನನ ಅನಂತನಾಥಪುರಾಣದಲ್ಲಿ ಬರುವ ಜನನಾಥಂ ಜಗದೇಕನಲ್ಲಿ ಕಟಕೋಪಾಧ್ಯಾಯನಾನಾಗವರ್ಮಂ......ಎಂಬ ಪದ್ಯದ ಆಧಾರದಿಂದ ಈತ ಜನ್ನನಿಗೆ ಉಪಾಧ್ಯಾಯನಾಗಿದ್ದನೆಂದೂ ಅದೇ ಪದ್ಯದ ಬೇರೆ ಅರ್ಥದ ಆಧಾರದ ಮೇಲೆ ಆಗಿರಲಿಲ್ಲವೆಂದೂ ವಿದ್ವಾಂಸರು ವಾದ ಮಾಡಿದ್ದಾರೆ. ವರ್ಧಮಾನಪುರಾಣದ ಕಾಲಸೂಚಿ ಪದ್ಯದ ಆಧಾರದಿಂದ ಈತ ಜನ್ನನಿಗೆ ಉಪಾಧ್ಯಾಯನಾಗಿರಲಿಲ್ಲವೆಂಬುದು ಖಚಿತವಾಗುತ್ತದೆ.

ಈತನಿಗೆ ಅಭಿನವಶ್ರವರ್ಮ, ಕವಿಕರ್ಣಪೂರ, ಕವಿಕಂಠಾಭರಣ, ಕವಿತಾಗುಣೋದಯ ಎಂಬ ಬಿರುದುಗಳಿದ್ದಂತೆ ತಿಳಿದುಬರುತ್ತದೆ. ಈತನ ಕೃತಿಗಳಲ್ಲಿ ವರ್ಧಮಾನಪುರಾಣ ಆದ್ಯಸ್ಥಾನ ಪಡೆಯುತ್ತದೆ. ಕವಿ ಸಂಸ್ಕøತ-ಕನ್ನಡಗಳೆರಡರಲ್ಲೂ ಪ್ರತಿಭಾವಂತನೆಂದು ತೋರುತ್ತದೆ. 24ನೆಯ ತೀರ್ಥಂಕರ ಮಹಾವೀರ ಅಥವಾ ವರ್ಧಮಾನನ ಚರಿತೆಯನ್ನು ಒಳಗೊಂಡ ಈ ಕೃತಿ ಕನ್ನಡ ಸಾಹಿತ್ಯದಲ್ಲಿ ದೊರೆತಿರುವ ಈ ತೀರ್ಥಂಕರನ ಮೇಲಿನ ಮೊದಲ ಪುರಾಣವಾಗಿದೆ. 16 ಆಶ್ವಾಸಗಳುಳ್ಳ ಈ ಪ್ರೌಢ ಚಂಪೂಕಾವ್ಯದಲ್ಲಿ ಕಾವ್ಯಧರ್ಮ-ಧರ್ಮಗಳೆರಡರನ್ನೂ ಕಾಣಬಹುದಾಗಿದೆ. ಈ ಕಾವ್ಯವನ್ನು ತಿದ್ದಿದ ವಾದಿರಾಜರು ಜಯಸಿಂಹ ಜಗದೇಕಮಲ್ಲನಲ್ಲಿ ಗುರುವಾಗಿದ್ದ ಸಂಸ್ಕøತ ಯಶೋಧರಚರಿತೆಯನ್ನು ರಚಿಸಿದ ಘನಪಂಡಿತರೆಂದು ತೋರುತ್ತದೆ.

ಈತನ ಕೃತಿಗಳಲ್ಲಿ ಒಂದಾದ ಕಾವ್ಯವಲೋಕನ ಲಕ್ಷಣಗ್ರಂಥ. ವ್ಯಾಕರಣವನ್ನು ಸಂಗ್ರಹವಾಗಿ ಹೇಳಿದ್ದರೂ ಮುಖ್ಯವಾಗಿ ಇದು ಅಲಂಕಾರಶಾಸ್ತ್ರಗ್ರಂಥ. ಇದರಲ್ಲಿ ಶಬ್ದ ಸಂಸ್ಕøತಿ, ಕಾವ್ಯಮಲವ್ಯಾವೃತ್ತಿ, ಗುಣವಿವೇಕ, ರೀತಿಕ್ರಮರಸನಿರೂಪಣ, ಕವಿಸಮಯ ಎಂಬ 5 ಅಧಿಕರಣಗಳಿವೆ. ಶಬ್ದಸ್ಮøತಿ ವ್ಯಾಕರಣ ಭಾಗವಾಗಿದೆ. ಇದರಲ್ಲಿ ಸಂಧಿ, ನಾಮ, ಸಮಾಸ, ತದ್ದಿತ, ಆಖ್ಯಾತ ಎಂಬ ಐದು ಅರ್ಧಯಾಯಗಳಿವೆ. ಕಾವ್ಯಮಲವ್ಯಾವೃತ್ತಿಯಲ್ಲಿ ಪದಪದಾರ್ಥ ಸಂಧಿದೋಷನಿಶ್ಚಯ, ವಾಕ್ಯವಾಕ್ಯರ್ಥ, ದೋಹಾನು ಕೀರ್ತನ ಎಂಬ ಎರಡು ಪ್ರಕರಣಗಳಿವೆ. ಗುಣವಿವೇಕದಲ್ಲಿ ಮಾರ್ಗವಿಭಾಗದರ್ಶನ, ಶಬ್ದಾಲಂಕಾರ ನಿರ್ಣಯ, ಅರ್ಥಾಲಂಕಾರ ಎಂಬ ಮೂರು ಪ್ರಕರಣಗಳಿವೆ. ರೀತಿಕ್ರಮರಸನಿರೂಪಣದಲ್ಲಿ ರೀತಿಭಾಗ, ರಸಭಾಗ ಎಂಬ ಎರಡು ಭಾಗಗಳಿವೆ. ಕವಿಸಮಯದಲ್ಲಿ ಅಸದಾಖ್ಯಾತಿ, ಸದಕೀರ್ತನ, ನಿಯಮಾರ್ಥ, ಐಕ್ಯ ಎಂಬ ನಾಲ್ಕು ಭಾಗಗಳಿವೆ. ಇದರಲ್ಲಿನ ಸೂತ್ರಗಳನ್ನು ಪದ್ಯರೂಪವಾಗಿ ಬರೆದು ಲಕ್ಷ್ಯಕ್ಕೆ ಪೂರ್ವಗ್ರಂಥಗಳಿಂದ ಪದ್ಯಗಳನ್ನು ಉದಾಹರಿಸುತ್ತಾನೆ.

ಕವಿಗಳ್ಗಿದು ಕೆಯ್ಗನ್ನಡಿ ಕವಿತೆಗೆ ಬಾಳ್ಮೊದಲು ಉದಾತ್ತ ವಾಗ್ದೇವತೆಗು ದೃವಹೇತುಕೋಶಗೃಹಮೆನೆ ಭುವನದೊಳಿದು ಪರೆದು ನಿಲ್ವುದೊಂದಚ್ಚರಿಯೇ

ಎಂದು ಕವಿ ಈ ಗ್ರಂಥದ ಉತ್ಕøಷ್ಟತೆಯನ್ನು ಹೇಳುತ್ತಾನೆ.

ಕರ್ಣಾಟಕ ಭಾಷಾಭೂಷಣ ವ್ಯಾಕರಣ ಗ್ರಂಥ. ಇದರಲ್ಲಿ ಸೂತ್ರ ವೃತ್ತಿಗಳು ಸಂಸ್ಕøತದಲ್ಲಿದ್ದು ಉದಾಹರಣೆಗಳು ಕನ್ನಡಕಾವ್ಯಗಳಿಂದ ಆಯ್ದುವಾಗಿವೆ. ಇದರಲ್ಲಿ ಹತ್ತು ಪರಿಚ್ಫೇದಗಳೂ ಒಟ್ಟು 280 ಸೂತ್ರಗಳೂ ಇವೆ.

ವಸ್ತುಕೋಶ ಕನ್ನಡದಲ್ಲಿ ಉಪಯೋಗದಲ್ಲಿರುವ ಸಂಸ್ಕøತ ಪದಗಳಿಗೆ ಅರ್ಥವನ್ನು ಹೇಳುವ ಪದ್ಯರೂಪದ ಸಂಸ್ಕøತ ಕನ್ನಡ ನಿಘಂಟು. ಇದರಲ್ಲಿ ಮೂರು ಕಾಂಡಗಳಿದ್ದು 17 ವರ್ಗಗಳಿವೆ. ವರರುಚಿ, ಹಲಾಯುಧ, ಭಾಗುರಿ, ಶಾಶ್ವತ, ಅಮರಸಿಂಹ ಮೊದಲಾದವರ ಕೋಶಗಳನ್ನು ನೋಡಿ ಈ ಗ್ರಂಥವನ್ನು ಬರೆದಂತೆ ಕವಿ ಹೇಳುತ್ತಾನೆ.

ಈಗ ದೊರೆತಿರುವ ಕನ್ನಡ ವ್ಯಾಕರಣ ಗ್ರಂಥಗಳಲ್ಲಿ ಕರ್ಣಾಟಕ ಭಾಷಾಭೂಷಣವೇ ಮೊದಲನೆಯದು. ಕರ್ಣಾಟಕ ಭಾಷೆಗೆ ಸಂಸ್ಕøತದಲ್ಲಿ ಸೂತ್ರರೂಪವಾಗಿ ಬರೆದಿರುವ ವ್ಯಾಕರಣ ಗ್ರಂಥಗಳಲ್ಲಿ ಇದೇ ಮೊದಲನೆಯದು. ಇದನ್ನೇ ಅನುಸರಿಸಿ ಭಟ್ಟಾಕಳಂಕ (1604) "ಶಬ್ದಾನುಶಾಸನ" ಎಂಬ ದೊಡ್ಡ ವ್ಯಾಕರಣ ಗ್ರಂಥವನ್ನು ಬರೆದಿದ್ದಾನೆ. ಕಾವ್ಯಾವಲೋಕನದ ಶಬ್ದಸ್ಮøತಿ ಎಂಬ ಅಧಿಕರಣದಲ್ಲಿ ಈತ ಸಂಗ್ರಹವಾಗಿ ಹೇಳಿರುವ ವ್ಯಾಕರಣಪ್ರಕ್ರಿಯೆಗಳನ್ನು ಕೇಶಿರಾಜ ತನ್ನ ಶಬ್ದಮಣಿದರ್ಪಣದಲ್ಲಿ ವಿಸ್ತರಿಸಿ ಬರೆದಿದ್ದಾನೆ.

ನೃಪತುಂಗನಂತೆ ಈತನೂ ಉತ್ತರ ಮಾರ್ಗ, ದಕ್ಷಿಣ ಮಾರ್ಗ ಎಂಬ ಭೇದಗಳನ್ನು ಹೇಳುವನಾದರೂ ಈತ ಹೇಳುವ ಮಾರ್ಗಗಳು ವೈದರ್ಭ, ಗೌಡ ಮಾರ್ಗಗಳೇ ಹೊರತು ಕನ್ನಡ ಮಾರ್ಗಗಳಲ್ಲ. ಅಲಂಕಾರ ಪ್ರಕರಣ ಕವಿರಾಜಮಾರ್ಗದಲ್ಲಿರುವುದಕ್ಕಿಂತ ಈತನ ಕಾವ್ಯಾವಲೋಕನದಲ್ಲಿ ವಿಸ್ತಾರವಾಗಿ ಬಂದಿದೆ. ಆದರೆ ಈ ಗ್ರಂಥಗಳಲ್ಲಿ ಹೇಳಿರುವ ರಸನಿರೂಪಣ ಮೊದಲಾದ ಅಂಶಗಳು ಕವಿರಾಜಮಾರ್ಗದಲ್ಲಿಲ್ಲ. ಈತನ ರಸಪ್ರಕರಣವನ್ನು ಅನುಸರಿಸಿ ಸಾಳ್ವ (1550) ತನ್ನ ರಸರತ್ನಾಕರ ಗ್ರಂಥವನ್ನು ಬರೆದಂತೆ ಹೇಳುತ್ತಾನೆ.

ಕನ್ನಡದಲ್ಲಿ ಈಗ ದೊರೆತಿರುವ ನಿಘಂಟುಗಳಲ್ಲಿ ಈತನ ವಸ್ತುಕೋಶವೇ ಮೊದಲನೆಯದು. ಮಂಗರಾಜ (1398), ದೇವೋತ್ತಮ (ಸು. 1600) ಈತನ ನಿಘಂಟನ್ನು ನೋಡಿ ತಮ್ಮ ಕೋಶಗಳನ್ನು ರಚಿಸಿದಂತೆ ಹೇಳುತ್ತಾರೆ. (ಎಸ್.ಬಿ.ಎಸ್.)