ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಯಗ್ರೀವ

ವಿಕಿಸೋರ್ಸ್ದಿಂದ

ಹಯಗ್ರೀವ ದೇವೀ ಭಾಗವತದ ಪ್ರಕಾರ ವಿಷ್ಣುವಿನ ಹೆಸರುಗಳಲ್ಲೊಂದು. ಒಮ್ಮೆ ವಿಷ್ಣು ಲಕ್ಷ್ಮಿಯೊಂದಿಗೆ ಸರಸವಾಡುತ್ತಿದ್ದಾಗ ಹರಿಯ ಹಾಸ್ಯದಿಂದ ಸಿಟ್ಟಾಗಿ ಲಕ್ಷ್ಮಿ ನಿನ್ನ ತಲೆ ಉರುಳಲಿ ಎಂದು ಶಾಪಕೊಡುತ್ತಾಳೆ. ಮಧುಕೈಟಭರ ಉಪದ್ರವಕ್ಕೀಡಾದ ದೇವತೆಗಳು ನೆರವಿಗಾಗಿ ವಿಷ್ಣುವಿನ ಸನ್ನಿಧಿಗೆ ಬಂದಾಗ ವಿಷ್ಣು ಕ್ಷೀರಸಮುದ್ರದಲ್ಲಿ ಆದಿಶೇಷನ ಮೇಲೆ ಮಲಗಿ ಶಾಙ್ರ್ಗ ಎಂಬ ತನ್ನ ಬಿಲ್ಲನ್ನು ತಲೆದಿಂಬಾಗಿಟ್ಟುಕೊಂಡು ನಿದ್ರಿಸುತ್ತಿದ್ದ. ಅವನನ್ನು ಎಚ್ಚರಿಸುವ ಮಾರ್ಗ ಕಾಣದ ದೇವತೆಗಳು, ಗೆದ್ದಲುಹುಳುಗಳಿಗೆ ಯಜ್ಞದಲ್ಲಿ ಹವಿರ್ಭಾಗ ಕೊಡುವ ಆಸೆ ತೋರಿಸಿ ಅವು ವಿಷ್ಣುವಿನ ದಿಂಬನ್ನಾಗಿ ಮಾಡಿಕೊಂಡ ಶಾಙ್ರ್ಗಧನುಸ್ಸಿನ ಹೆದೆಯನ್ನು ಕತ್ತರಿಸುವಂತೆ ಮಾಡುತ್ತಾರೆ. ಬಿಲ್ಲಿನ ಹೆದೆ ತುಂಡಾದಾಗ ಸಿಡಿದ ಬಿಲ್ಲು ವಿಷ್ಣುವಿನ ತಲೆಯನ್ನು ಹಾರಿಸುತ್ತದೆ. ಬಳಿಕ ದೇವತೆಗಳು ಒಂದು ಕುದುರೆಯ ಮುಖವನ್ನು ತಂದು ವಿಷ್ಣುವಿನ ದೇಹಕ್ಕೆ ಜೋಡಿಸುತ್ತಾರೆ. ಹೀಗೆ ವಿಷ್ಣು ಹಯಗ್ರೀವನಾದ.

ಇದೇ ಹೆಸರಿನ ಮೂವರು ರಾಕ್ಷಸರಿದ್ದಾರೆ. “ದೇವೀಭಾಗವತ”ದ ಪ್ರಕಾರ, ತನ್ನ ಹೆಸರಿನವನಿಂದ ಮಾತ್ರ ತನಗೆ ಮರಣ ಪ್ರಾಪ್ತವಾಗಲಿ ಎಂಬ ವರವನ್ನು ದೇವಿಯಿಂದ ಒಬ್ಬ ರಾಕ್ಷಸ ಪಡೆದ. ಹಯಗ್ರೀವ ಅವತಾರದಲ್ಲಿ ವಿಷ್ಣು ಇವನನ್ನು ಸಂಹರಿಸುತ್ತಾನೆ. “ಮತ್ಸ್ಯ ಪುರಾಣ”ದ ಪ್ರಕಾರ ಇನ್ನೊಬ್ಬ ವೃಕಾ(ತ್ರಾ) ಸುರನ ಪರಿವಾರಕ್ಕೆ ಸೇರಿದ ರಾಕ್ಷಸ. ಹರಿವಂಶದ ಪ್ರಕಾರ, ಇವನು ನರಕಾಸುರನ ಸೇನಾಪತಿ. ಕೃಷ್ಣ ಇವನನ್ನು ಕೊಂದ. ಲಲಿತಾಸಹಸ್ರನಾಮದ ಪ್ರಕಾರ ಅಗಸ್ತ್ಯನಿಗೆ ಲಲಿತಾ ಸಹಸ್ರನಾಮವನ್ನು ಉಪದೇಶಿಸಿದ ಒಬ್ಬ ಮುನಿ ಮತ್ತೊಬ್ಬ . ಇದು ಮಹಾಭಾರತದಲ್ಲಿ ಬರುವ ಒಬ್ಬ ರಾಜನ ಹೆಸರೂ ಹೌದು. (ಎಚ್.ಜಿ.)